ನ್ಯಾಯಾಲಯದ ಐದನೇ ಮಹಡಿಯಿಂದ ಹಾರಿ ಪೊಕ್ಸೊ ಪ್ರಕರಣದ ಆರೋಪಿ ಆತ್ಮಹತ್ಯೆ

ನ್ಯಾಯಾಲಯದ ಐದನೇ ಮಹಡಿಯಿಂದ ಹಾರಿ ಪೊಕ್ಸೊ ಪ್ರಕರಣದ ಆರೋಪಿ ಆತ್ಮಹತ್ಯೆ
Photo credit: The Indian express

ಬೆಂಗಳೂರು, ಅ. 09: ನಗರದ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ವಿಚಾರಣೆಗೆ ಹಾಜರಾಗಿದ್ದ ಪೊಕ್ಸೊ ಕಾಯ್ದೆಯಡಿ ಬಂಧಿತನಾಗಿದ್ದ ಆರೋಪಿ ಗೌತಮ್ (35) ನ್ಯಾಯಾಲಯದ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

 ಪೊಲೀಸರ ಪ್ರಕಾರ, ಗೌತಮ್ ನನ್ನು ಗುರುವಾರ ವಿಚಾರಣೆಗೆಂದು ಕೋರ್ಟ್‌ ಗೆ ಕರೆತರಲಾಗಿತ್ತು. ಈ ವೇಳೆ ಕುಟುಂಬದವರು ಭೇಟಿಗೆ ಬಂದಿದ್ದರು. ಆರೋಪಿಗೆ, ಕುಟುಂಬದವರೊಂದಿಗೆ ಮಾತನಾಡಲು ಅವಕಾಶ ನೀಡುವ ಸಲುವಾಗಿ ಪೊಲೀಸರೇ ಕೈಗೆ ಹಾಕಿದ್ದ ಬೇಡಿಯನ್ನು ತಾತ್ಕಾಲಿಕವಾಗಿ ತೆಗೆಯಲಾಗಿತ್ತು. ಕುಟುಂಬದವರೊಂದಿಗೆ ಮಾತನಾಡಿದ ಕೆಲವೇ ಕ್ಷಣಗಳಲ್ಲಿ ಗೌತಮ್ ಏಕಾಏಕಿ ಕೋರ್ಟ್‌ನ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

 ಗಂಭೀರವಾಗಿ ಗಾಯಗೊಂಡ ಗೌತಮ್ ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.

ಕಳೆದ ಏಪ್ರಿಲ್‌ನಲ್ಲಿ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಗೌತಮ್ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಡಿಎನ್ಎ ಪರೀಕ್ಷೆಯಲ್ಲಿ ಆರೋಪದ ದೃಢೀಕರಣವಾದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ, ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಗುರುವಾರ ಟ್ರಯಲ್ ಪ್ರಾರಂಭವಾಗಬೇಕಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.