ಬೆಂಗಳೂರು ಫ್ಲೈಓವರ್‌ನಲ್ಲಿ ಮೊಳೆಗಳ ರಾಶಿ: ಪಂಕ್ಚರ್ ಗ್ಯಾಂಗ್‌ಗಳ ವಂಚನೆ ಕೃತ್ಯ ಬಯಲು

ಬೆಂಗಳೂರು ಫ್ಲೈಓವರ್‌ನಲ್ಲಿ ಮೊಳೆಗಳ ರಾಶಿ: ಪಂಕ್ಚರ್ ಗ್ಯಾಂಗ್‌ಗಳ ವಂಚನೆ ಕೃತ್ಯ ಬಯಲು

ಬೆಂಗಳೂರು: ನಗರದ ಮಂದರಗಿರಿ ಬೆಟ್ಟದ ಬಳಿಯ ಫ್ಲೈಓವರ್‌ನಲ್ಲಿ ನಡೆದ ವಂಚನೆ ಘಟನೆಯೊಂದು ಬೆಳಕಿಗೆ ಬಂದಿದ್ದು, ವಾಹನ ಸವಾರರಲ್ಲಿ ಆತಂಕ ಉಂಟುಮಾಡಿದೆ.

 ರಸ್ತೆಯ ಉದ್ದಕ್ಕೂ ಮೊಳೆಗಳನ್ನು ಉದ್ದೇಶಪೂರ್ವಕವಾಗಿ ಹರಡುವ ಮೂಲಕ ವಾಹನಗಳ ಟೈರ್‌ ಗಳನ್ನು ಪಂಚರ್ ಮಾಡಿ ಸುಲಿಗೆ ನಡೆಸುವ ಗ್ಯಾಂಗ್‌ ಗಳ ಕೈಚಳಕ ಇದಾಗಿದೆ ಎಂದು ಶಂಕಿಸಲಾಗಿದೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಫ್ಲೈಓವರ್‌ನಲ್ಲಿ ನೂರಾರು ಮೊಳೆಗಳು ರಸ್ತೆಪೂರ್ತಿ ಹರಡಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ಬೈಕ್ ಸವಾರೊಬ್ಬರ ಟೈರ್ ಗೆ ಮೊಳೆ ತಗುಲಿ ಪಂಚರ್ ಆಗಿದ್ದು, ಅವರು ಹೊಸ ಟ್ಯೂಬ್ ಬದಲಿಸಿ ಮುಂದುವರಿದಾಗ ಮುಂದಿನ ದಾರಿಯಲ್ಲಿಯೂ ಇದೇ ರೀತಿಯ ಮೊಳೆಗಳು ಬಿದ್ದಿರುವುದು ಕಂಡುಬಂದಿದೆ.

 ಸವಾರ ತೆಗೆದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, “ಈ ಮಾರ್ಗದಲ್ಲಿ ಸಂಚರಿಸುವವರು ಎಚ್ಚರಿಕೆಯಿಂದ ಇರಬೇಕು” ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ವಿಡಿಯೋದಲ್ಲಿ ಮತ್ತೊಬ್ಬ ಸವಾರರ ಟೈರ್ ಸಹ ಪಂಚರ್ ಆಗಿರುವ ದೃಶ್ಯವಿದೆ. ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ವಾಹನಗಳನ್ನು ಪಂಚರ್ ಮಾಡಿ ಹತ್ತಿರದ ಪಂಚರ್ ಶಾಪ್‌ ಗಳಿಗೆ ಜನರನ್ನು ಕರೆದೊಯ್ದು ನಂತರ ಅನಾವಶ್ಯಕ ರಿಪೇರಿ ಹೆಸರಿನಲ್ಲಿ ಹಣ ವಸೂಲಿ ಮಾಡುವುದು ಈ ಗ್ಯಾಂಗ್‌ ನ ಪ್ರಮುಖ ಉದ್ದೇಶವಾಗಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

ಈ ಕುರಿತು ಹಲವಾರು ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮ ಅನುಭವ ಹಂಚಿಕೊಂಡಿದ್ದು, “ಕೆಲ ವರ್ಷಗಳ ಹಿಂದೆ ಎಚ್‌ಎಸ್‌ಆರ್ ಲೇಔಟ್ ಫ್ಲೈಓವರ್‌ನಲ್ಲಿಯೂ ಇದೇ ರೀತಿಯ ಕೃತ್ಯ ನಡೆದಿತ್ತು” ಎಂದು ಒಬ್ಬರು ತಿಳಿಸಿದ್ದಾರೆ. ಮತ್ತೊಬ್ಬರು, “ಇಂತಹ ಗ್ಯಾಂಗ್‌ ಗಳು ಉದ್ದೇಶಪೂರ್ವಕವಾಗಿ ಮೊಳೆಗಳನ್ನು ಇಟ್ಟು, ವಾಹನದಲ್ಲಿ ದೋಷವಿದೆ ಎಂದು ಹೇಳಿ ಹೆಚ್ಚು ಹಣ ವಸೂಲಿ ಮಾಡುತ್ತಿವೆ” ಎಂದು ಕಮೆಂಟ್ ಮಾಡಿದ್ದಾರೆ.

ಕೆಲ ತಿಂಗಳ ಹಿಂದೆ ಆರ್.ಆರ್. ನಗರದಲ್ಲಿಯೂ ಇದೇ ರೀತಿಯ ನೂರಾರು ಮೊಳೆಗಳು ಪತ್ತೆಯಾಗಿತ್ತು ಎಂದು ತಿಳಿದು ಬಂದಿದೆ.