ಮಹಿಳೆಯನ್ನು ಹಿಂಬಾಲಿಸಿ ಸಂದೇಶ ಕಳುಹಿಸಿದ ಪೊಲೀಸ್ ಅಧಿಕಾರಿ ಅಮಾನತು

ಮಹಿಳೆಯನ್ನು ಹಿಂಬಾಲಿಸಿ ಸಂದೇಶ ಕಳುಹಿಸಿದ ಪೊಲೀಸ್ ಅಧಿಕಾರಿ ಅಮಾನತು
Photo credit: free press journal

ಗುರುಗ್ರಾಮ: ಮಹಿಳೆಯ ಸುರಕ್ಷತೆ ಮತ್ತು ಗೌಪ್ಯತೆಯ ಕುರಿತಾಗಿ ಗಂಭೀರ ಚರ್ಚೆಗೆ ಕಾರಣವಾದ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಪಿಸಿಆರ್ ವ್ಯಾನ್‌ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್‌ಸ್ಟೆಬಲ್ ಒಬ್ಬರನ್ನು, ಮಹಿಳೆಯ ಕಾರಿನ ನಂಬರ್ ಪ್ಲೇಟ್ ಆಧರಿಸಿ ಆಕೆಯ ವೈಯಕ್ತಿಕ ಮಾಹಿತಿ ಹಾಗೂ ಸಾಮಾಜಿಕ ಜಾಲತಾಣ ಪ್ರೊಫೈಲ್‌ಗಳನ್ನು ಪತ್ತೆಹಚ್ಚಿ, ನಂತರ ಇನ್‌ಸ್ಟಾಗ್ರಾಂ ಮೂಲಕ ಅನುಚಿತ ಸಂದೇಶ ಕಳುಹಿಸಿದ ಪ್ರಕರಣದಲ್ಲಿ ಅಮಾನತುಗೊಳಿಸಲಾಗಿದೆ.

 ಸೆಪ್ಟೆಂಬರ್ 14ರ ರಾತ್ರಿ ಈ ಘಟನೆ ನಡೆದಿದ್ದು, 50 ವರ್ಷದ ಮಹಿಳೆ ತಮ್ಮನ್ನು ಹಿಂಬಾಲಿಸಿ ಬಳಿಕ ಸಂದೇಶ ಕಳುಹಿಸಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

 ಸಂದೇಶದಲ್ಲಿ ಅಧಿಕಾರಿ, “ನಿನ್ನನ್ನು ಇಷ್ಟಪಟ್ಟಿದ್ದರಿಂದಲೇ ನಿನ್ನನ್ನು ಹುಡುಕಿದೆ” ಎಂದು ಹೇಳಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

 ಈ ಬಗ್ಗೆ ಮಹಿಳೆ ಆಕ್ರೋಶ ವ್ಯಕ್ತಪಡಿಸಿ, “ನಮ್ಮ ಸುರಕ್ಷತೆಗಾಗಿ ನಿಯೋಜಿಸಲಾದ ಪಿಸಿಆರ್ ವ್ಯಾನ್ ನಮ್ಮ ಚಲನವಲನಗಳನ್ನು ಹೀಗೆ ಟ್ರ್ಯಾಕ್ ಮಾಡಿ ವೈಯಕ್ತಿಕ ವಿವರಗಳನ್ನು ದುರುಪಯೋಗ ಮಾಡುವುದು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ.

ಮಹಿಳೆಯ ದೂರಿನ ಆಧಾರದ ಮೇಲೆ ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.