ಕುಟುಂಬ ಕಲಹಕ್ಕೆ ಗರ್ಭಿಣಿಗೆ ಬೆಂಕಿ ಹಚ್ಚಿ ಕೊಲೆ: ಪತಿ–ಅತ್ತೆ ವಿರುದ್ಧ ಪೋಷಕರ ಗಂಭೀರ ಆರೋಪ

ಕುಟುಂಬ ಕಲಹಕ್ಕೆ ಗರ್ಭಿಣಿಗೆ ಬೆಂಕಿ ಹಚ್ಚಿ ಕೊಲೆ: ಪತಿ–ಅತ್ತೆ ವಿರುದ್ಧ ಪೋಷಕರ ಗಂಭೀರ ಆರೋಪ
Photo credit: Etv bharath ( ಫೋಟೋ:ಮೃತಪಟ್ಟ ಅರ್ಚ‌ನಾಳೊಂದಿಗೆ‌ ಪತಿ ಶರೋನ್)

ತ್ರಿಶೂರು (ಕೇರಳ): ಕೇರಳದ ವರಂದರಪಳ್ಳಿಯ ಮಟ್ಟುಮಲದಲ್ಲಿ ದಾರುಣವಾಗಿ ಸಾವನ್ನಪ್ಪಿದ ಗರ್ಭಿಣಿ ಅರ್ಚನಾ (21) ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಗಂಭೀರ ಸುಟ್ಟ ಗಾಯಗಳಿಂದ ಮೃತಪಟ್ಟ ಅರ್ಚನಾ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ, ಪತಿ ಮತ್ತು ಅತ್ತೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ಸಂತ್ರಸ್ತೆಯ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.

ಅರ್ಚನಾ ತಂದೆ ಹರಿದಾಸ್, “ಮಗಳು ದೈಹಿಕ ಹಾಗೂ ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದಳು. ಗಂಡ ಶರೋನ್ ಅವಳನ್ನು ನಮ್ಮೊಂದಿಗೆ ಮಾತನಾಡಲೂ ಬಿಡುತ್ತಿರಲಿಲ್ಲ. ನಮ್ಮ ಮಗಳನ್ನು ಆತನೇ ಕೊಲೆ ಮಾಡಿದ್ದಾನೆ,” ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ನಾನಾತಿಪುಲಂನ ಮಾಕೋತ್‌ ನ ಶರೋನ್ ಮತ್ತು ಆತನ ತಾಯಿ ರಜನಿ ವಿರುದ್ಧ ವರಂದರಪಳ್ಳಿ ಪೊಲೀಸರು ಆತ್ಮಹತ್ಯೆಗೆ ಪ್ರೇರಣೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುಮಾರು ಆರು ತಿಂಗಳ ಹಿಂದೆ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಶರೋನ್‌ ರನ್ನು ಅರ್ಚನಾ ವಿವಾಹವಾಗಿದ್ದರು. ಆದರೆ ಮದುವೆಯ ನಂತರ ಜಗಳಗಳು ತೀವ್ರಗೊಂಡಿದ್ದು, ಶರೋನ್ ಗಾಂಜಾ ಪ್ರಕರಣದ ಆರೋಪಿ ಎಂಬ ಮಾಹಿತಿಯೂ ಸಂಬಂಧಿಕರು ತಿಳಿಸಿದ್ದಾರೆ.

ಅರ್ಚನಾ ಬಗ್ಗೆ ಶರೋನ್ ಸದಾ ಅನುಮಾನ ವ್ಯಕ್ತಪಡಿಸುತ್ತಿದ್ದ ಮತ್ತು ಕೆಲ ತಿಂಗಳ ಹಿಂದೆ ಕಾಲೇಜು ಎದುರು ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂಬ ಆರೋಪವು ದೂರಿನಲ್ಲಿದೆ. ಈ ಹಿನ್ನಲೆಯಲ್ಲಿ ಶರೋನ್ ಮತ್ತು ರಜನಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಅರ್ಚನಾ ಮನೆಯೊಳಗೆ ಬೆಂಕಿ ಹಚ್ಚಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆದರೆ ಕುಟುಂಬದ ಸದಸ್ಯರು ಇದನ್ನು ಖಂಡಿಸಿ, “ಅವಳನ್ನು ಕೊನೆಯ ಬಾರಿ ನೋಡಲು ಕೂಡ ಅವಕಾಶ ಸಿಕ್ಕಿಲ್ಲ. ಕೆನಡಾಗೆ ಹೋಗುವ ಕನಸಿದ್ದ ಆಕೆಯನ್ನು ನಾವು ಕಳೆದುಕೊಂಡಿದ್ದೇವೆ,” ಎಂದು ಕಣ್ಣೀರಿಟ್ಟಿದ್ದಾರೆ.

 ಫೋರೆನ್ಸಿಕ್ ತಂಡವು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸಿತು. ವಿಚಾರಣೆ ಪೂರ್ಣವಾದ ನಂತರ ಶವವನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು. ನಂತರ ಕುಟುಂಬಕ್ಕೆ ಹಸ್ತಾಂತರವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.