ಹಿಂದೂ ಧರ್ಮದ ಸಂರಕ್ಷಣೆ ಕೇವಲ ಸಂಘಟನೆಗಳ ಜವಾಬ್ದಾರಿಯಲ್ಲ, ಸರ್ವ ಹಿಂದೂ ಸಮಾಜದ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು;ಗುರುಪ್ರಸಾದ್ ಸೋಮವಾರಪೇಟೆಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ

ಹಿಂದೂ ಧರ್ಮದ ಸಂರಕ್ಷಣೆ ಕೇವಲ ಸಂಘಟನೆಗಳ ಜವಾಬ್ದಾರಿಯಲ್ಲ, ಸರ್ವ ಹಿಂದೂ ಸಮಾಜದ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು;ಗುರುಪ್ರಸಾದ್  ಸೋಮವಾರಪೇಟೆಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ

ಸೋಮವಾರಪೇಟೆ: ಹಿಂದೂ ಧರ್ಮದ ಸಂರಕ್ಷಣೆ ಕೇವಲ ಸಂಘಟನೆಗಳ ಜವಾಬ್ದಾರಿಯಲ್ಲ, ಅದೂ ಸರ್ವ ಹಿಂದೂ ಸಮಾಜದ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು ಎಂದು ಆರ್ ಎಸ್ ಎಸ್ ನ ಪ್ರಾಂತ ಪ್ರಚಾರಕ್ ಗುರುಪ್ರಸಾದ್ ಅಭಿಪ್ರಾಯಪಟ್ಟರು. ಭಾನುವಾರದಂದು ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಿಕ್ಸೂಚಿ ಭಾಷಣ ಮಾಡಿದರು.

 ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶದಲ್ಲಿ ಆರಂಭವಾಗಿ ೧೦೦ ವರ್ಷ ಪೂರೈಸುವ ಮೂಲಕ ವಿಶ್ವದ ಅತಿ ದೊಡ್ಡ ಸಂಘಟನೆಯಾಗಿ ಬೆಳೆದು ನಿಂತಿದೆ. ಈ ಹಿನ್ನೆಲೆಯಲ್ಲಿ ರಾಷ್ಟಾçದ್ಯಂತ ಹಿಂದೂ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಆಯೋಜಿಸುವ ಮುಖೇನ ದೇಶದಲ್ಲಿನ ಹಿಂದೂ ಬಾಂಧವರನ್ನು ಒಗ್ಗೂಡಿಸುವ ಕೆಲಸಕ್ಕೆ ಆರ್ ಎಸ್.ಎಸ್ ಮುಂದಾಗಿದೆ, ಭಾರತ ಮಾತೆಯ ಮಕ್ಕಳಾದ ನಾವೆಲ್ಲರೂ ಒಗ್ಗೂಡಿ ಮಾತೆಯ ರಕ್ಷಣೆ ಮಾಡಬೇಕಾಗಿದೆ ಎಂದು ಹೇಳಿದರು.

ಸಮಾಜದಲ್ಲಿನ ಅಸ್ಪೃಶ್ಯತೆ, ಅಸಮಾನತೆಯನ್ನು ದೂರ ಮಾಡುವ ಮೂಲಕ ಹಿಂದೂ ಸಮಾಜವನ್ನು ಗಟ್ಟಿಗೊಳಿಸುವ ಕಾಯಕದಲ್ಲಿ ಸರ್ವ ಹಿಂದೂ ಸಮಾಜ ಬಾಂಧವರು ತೊಡಗಿಸಿಕೊಳ್ಳಬೇಕು. ಜಾತಿ ಗಣತಿ ಹೆಸರಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಜಾತಿ, ಜಾತಿಗಳನ್ನು ಮತ್ತು ಧರ್ಮಗಳನ್ನು ಒಡೆಯುವ ಕೆಲಸವನ್ನು ಮಾಡುತ್ತಿದೆ. ಮತ ಬ್ಯಾಂಕ್‌ಗಾಗಿ ಹಿಂದೂ ಧರ್ಮವನ್ನು ಒಡೆಯಲು ರಾಜ್ಯ ಸರ್ಕಾರ ಮುಂದಾಗಿರುವುದನ್ನು ಈ ಸಂದರ್ಭ ಟೀಕಿಸಿದರು.

 ಮುಳ್ಳೂರು ಬಸವಾಪಟ್ಟಣ ಮಠದ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದೂ ಭಯೋತ್ಪಾದನೆಯನ್ನು ಪ್ರಚೋದಿಸಿಲ್ಲ, ದೇಶದ್ರೋಹ ಮಾಡಲೂ ಹೇಳಿಲ್ಲ, ಸರ್ವೆಜನೋ ಸುಖಿನೋ ಭವಂತು ಎಂದು ವಿಶ್ವಕ್ಕೆ ಸಾರಿದ ಸಂಘಟನೆಯಾಗಿ ತನ್ನ ಕರ್ತವ್ಯವನ್ನು ನೂರು ವರ್ಷಗಳಿಂದ ಮಾಡುತ್ತಾ ಬಂದಿದೆ. ಆದರೆ ರಾಜ್ಯದಲ್ಲಿ ೧೭ ದೇಶದ್ರೋಹ ಪ್ರಕರಣಗಳು ದಾಖಲಾಗಿದೆ, ೧೫ ಪ್ರಕರಣಗಳು ಮುಕ್ತಾಯವಾಗಿದೆ.

ಆದರೆ ಯಾರಿಗೂ ಕೂಡ ಈವರೆಗೂ ಶಿಕ್ಷೆಯಾಗಿಲ್ಲ, ಕೇವಲ ಮತಬ್ಯಾಂಕ್ ಗೋಸ್ಕರ ಒಂದು ಧರ್ಮವನ್ನು ಓಲೈಸಲಾಗುತ್ತಿದೆ ಎಂದು ಹೇಳಿದರು. ಹಿಂದೂ ಸಂಗಮ ಕಾರ್ಯಕ್ರಮ ಮಾಡಲು ಮುಂದಾದರೆ, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತದೆ. ನಾವೇನೂ ಬಾಂಬ್ ಗಳನ್ನು ತರುತ್ತೇವೆಯೇ ಅಥವಾ ಕುಕ್ಕರ್ ಬಾಂಬ್ ಗಳನ್ನು ಹಿಡಿದುಕೊಂಡು ಬಂದಿದ್ದೇವೆಯೇ? ಎಂದು ಪ್ರಶ್ನಿಸಿದರು.

 ಅದೇ ಹುಬ್ಬಳ್ಳಿ ಮತ್ತು ಡಿಜಿ ಹಳ್ಳಿ, ಕೆಜಿ ಹಳ್ಳಿಯಲ್ಲಿ ಪೊಲೀಸ್ ಠಾಣೆಯ ಮೇಲೆಯೇ ಕಲ್ಲು ತೂರಾಟ ಮಾಡಲಾಯಿತು. ಅಂತಹ ಕಿಡಿಗೇಡಿಗಳಿಗೆ ಈವರೆಗೆ ಶಿಕ್ಷೆಯಾಗಿಲ್ಲ ಎಂದು ಟೀಕಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪ್ರಗತಿಪರ ಮಹಿಳೆ ನಿರ್ಮಲ ಪ್ರಕಾಶ್ ಮಾತನಾಡಿ, ಹಿಂದೆ ಕುಟುಂಬ ವ್ಯವಸ್ಥೆಯ ಗಟ್ಟಿತನದಿಂದಾಗಿ ಆರೋಗ್ಯ, ಶಿಕ್ಷಣ, ಸಂಸ್ಕಾರ ಮನೆಯಿಂದಲೇ ಕಲಿಸಲಾಗುತ್ತಿತ್ತು. ಅದೂ ಮತ್ತೆಯೂ ಮುಂದುವರೆಯುವಂತಾಗಬೇಕು. ಆದಾಗ ಮಾತ್ರ ಸುಂದರ,ಸದೃಢ, ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.

ಕೊನೆಯಲ್ಲಿ ವಂದೇ ಮಾತರಂ ಗೀತೆಯನ್ನು ಮಹಿಳಾ ಘಟಕದವರು ಪ್ರಸ್ತುತಿ ಪಡಿಸಿದರು. ಕಾರ್ಯಕ್ರಮಕ್ಕೂ ಮೊದಲು ಬಾಣಾವಾರ ರಸ್ತೆಯಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶೋಭಾ ಯಾತ್ರೆ ನಡೆದು ಜಿಎಂಪಿ ಶಾಲಾ ಮೈದಾನದಲ್ಲಿ ಸಮಾಪ್ತಿಗೊಂಡಿತು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೀಡ್ ಬ್ಯಾಂಕ್‌ನ ನಿವೃತ್ತ ಪ್ರಧಾನ ವ್ಯವಸ್ಥಾಪಕ ಎಂ.ಬಿ.ಚಿಣ್ಣಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿಂದೂ ಸಂಗಮ ಸಮಿತಿ ತಾಲೂಕು ಅಧ್ಯಕ್ಷ ಕೆ.ಟಿ.ಸನತ್, ಗೌರವ ಅಧ್ಯಕ್ಷ ಎಸ್.ಎಲ್.ಸೀತಾರಾಂ, ನಗರ ಸಮಿತಿ ಅಧಕ್ಷ ನಂದಕುಮಾರ್, ಆರ್.ಎಸ್.ಎಸ್‌ನ ಜಿಲ್ಲಾ ಕಾರ್ಯವಾಹ ಡಿ.ಕೆ.ರವಿ ಮತ್ತಿತರರು ಉಪಸ್ಥಿತರಿದ್ದರು.