ಡಿ.16ಕ್ಕೆ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಪುತ್ತರಿ ನಮ್ಮೆ ಹಾಗೂ ಕೊಡವ ಸಾಂಸ್ಕೃತಿಕ ದಿನಾಚರಣೆ
ಪೊನ್ನಂಪೇಟೆ:ಪ್ರತಿ ವರ್ಷ ಆಯೋಜನೆ ಮಾಡುತ್ತಿರುವಂತೆ ಕೊಡವ ಕಲೆ, ಆಚಾರ -ವಿಚಾರ, ಪದ್ದತಿ ಪರಂಪರೆಗಳನ್ನು ಬೆಳೆಸಿ ಉಳಿಸುವ ಉದ್ದೇಶದಿಂದ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಡಿಸೆಂಬರ್ 16 ರಂದು ಪುತ್ತರಿ ನಮ್ಮೆ ಹಾಗೂ ಕೊಡವ ಸಾಂಸ್ಕೃತಿಕ ದಿನಾಚರಣೆಯನ್ನು ಆಯೋಜಿಸಲಾಗಿದೆ ಎಂದು ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಎಂ. ಮೋಟಯ್ಯ ಅವರು ತಿಳಿಸಿದ್ದಾರೆ.
ಈ ಬಗ್ಗೆ ಕೊಡವ ಸಮಾಜದಲ್ಲಿ ಆಡಳಿತ ಮಂಡಳಿಯ ಸಭೆಯಲ್ಲಿ ಈ ವಿಚಾರ ತಿಳಿಸಿದ ಆವರು ಅಂದು ಪೂರ್ವಾಹ್ನ 9 ಗಂಟೆಯಿಂದ ಈ ಕಾರ್ಯಕ್ರಮ ಚಾಲನೆ ನೀಡಲಾಗುತ್ತಿದೆ, ಆರಂಭದಲ್ಲಿ ವಿವಿಧ ಕೊಡವ ಸಾಂಸ್ಕೃತಿಕ ಪೈಪೋಟಿಗಳು ಆರಂಭವಾಗುತ್ತದೆ. ಇದರಲ್ಲಿ ಪುತ್ತರಿ ಕೋಲಾಟ್, ಬೊಳಕಾಟ್, ಪರೆಯಕಳಿ, ಉಮ್ಮತಾಟ್, ಕಪ್ಪೆಯಾಟ್, ವಾಲಗತಾಟ್ ಪೈಪೋಟಿ ನಡೆಯಲಿದೆ ಎಂದು ವಿವರಿಸಿದರು. ಪೈಪೋಟಿಯು ಸಣ್ಣವರು ಹಾಗೂ ದೊಡ್ಡವರು ಎಂಬ ಎರಡು ವಿಭಾಗದಲ್ಲಿ ನಡೆಸಲಾಗುತ್ತದೆ, ಸಣ್ಣವರ ವಿಭಾಗವು ಪ್ರೌಢಶಾಲೆಯ ವರೆಗೆ ಹಾಗೂ ದೊಡ್ಡವರ ವಿಭಾಗವು ಪಿಯುಸಿ ಮೇಲ್ಪಟ್ಟವರು ಎಂದು ವಿಭಾಗ ಮಾಡಲಾಗಿದೆ ಎಂದು ತಿಳಿಸಿದರು.
ಈ ಎರಡು ವಿಭಾಗದಲ್ಲಿ ಗೆದ್ದವರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಇರುತ್ತದೆ. ಭಾಗವಹಿಸಲು ಆಸಕ್ತಿ ಇರುವ ತಂಡಗಳು ಕೊಡವ ಸಮಾಜದ ಕಚೇರಿಯಲ್ಲಿ ಡಿ. 8 ರ ಒಳಗೆ ವಿವರಗಳನ್ನು ಪಡೆದು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು. ಮಧ್ಯಾಹ್ನ ಸಾಂಸ್ಕೃತಿಕ ಪೈಪೋಟಿ ಮುಗಿದ ನಂತರ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿರುತ್ತದೆ. ಅಪರಾಹ್ನ 1.45 ರಿಂದ 2.15ರವರೆಗೆ ಸಾಂಸ್ಕೃತಿಕ ಪ್ರದರ್ಶನವಿರುತ್ತದೆ.
2.15ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು,ಸಭಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರು ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯರಾದ ಚೆಪ್ಪುಡೀರ ಅರುಣ್ ಮಾಚಯ್ಯ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸಭಾ ಕಾರ್ಯಕ್ರಮದ ನಂತರ ಎಲ್ಲರಿಗೂ ಎಲ್ಲರೂ ಸೇರಿ "ಮಂದ್ ಮರೆವೊ" ಕಾರ್ಯಕ್ರಮವಿರುತ್ತದೆ. ನಂತರ ಪುತ್ತರಿ ಹಬ್ಬದ ಸಾಂಪ್ರದಾಯಿಕ ಫಲಹಾರ ವಿರುತ್ತದೆ. ಎಲ್ಲರೂ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅವರು ಕೇಳಿಕೊಂಡರು.
ಈ ಸಂದರ್ಭ ಮಾತನಾಡಿದ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಅವರು ಪೊನ್ನಂಪೇಟೆ ಕೊಡವ ಸಮಾಜವು ಕಲ್ಯಾಣ ಮಂಟಪಕ್ಕೆ ಮಾತ್ರ ಸೀಮಿತವಾಗದೇ ಕೊಡವ ಕಲೆ ಸಂಸ್ಕೃತಿ ಆಚಾರ ವಿಚಾರ ಪದ್ಧತಿ ಪರಂಪರೆಯನ್ನು ಉಳಿಸಿ ಬೆಳೆಸಲು ಯುವ ಪೀಳಿಗೆಗೆ ತರಬೇತಿಯನ್ನು ಕೊಟ್ಟು ತಿಳಿಸಲಾಗುತ್ತಿದೆ. ಅಲ್ಲದೆ ಹಲವಾವು ಜನಪರ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ.
ನಮ್ಮ ಜನಾಂಗದ ಜನಸಂಖ್ಯೆಯನ್ನು ಹೆಚ್ಚಿಸುವ ಪ್ರೋತ್ಸಾಹ ಸಲುವಾಗಿ ಸಮಾಜದ ಸದಸ್ಯರ ಸಂಸಾರದಲ್ಲಿ ಮೂರು ಹಾಗೂ ಹೆಚ್ಚು ಮಕ್ಕಳಿರುವವರಿಗೆ ಸಮಾಜದಲ್ಲಿ ಮದುವೆ ಆದರೆ ಅವರಿಗೆ ಸಮಾಜದ ಕಟ್ಟಡ ಬಾಡಿಗೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಹಲವು ಮದುವೆಗಳು ನಡೆದಿದೆ.
ಮುಂದಕ್ಕೂ ಮುಂಗಡವಾಗಿ ದಿನಾಂಕವನ್ನು ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು.ಅಲ್ಲದೆ ನಮ್ಮ ಯುವಕರು ಸೇನೆಗೆ ಸೇರಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಮಾಜದ ಸದಸ್ಯರು ಸೇನೆಯಲ್ಲಿದ್ದು ನಮ್ಮ ಸಮಾಜದಲ್ಲಿ ಮದುವೆಯಾದರೆ ಕಟ್ಟಡ ಬಾಡಿಗೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಇಂತಹ ಹಲವಾರು ಮದುವೆಗಳು ಈಗಾಗಲೇ ನಡೆದಿದ್ದು ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.
ಸಮಾಜದಲ್ಲಿ ನ್ಯಾಯಪೀಠವಿದ್ದು ಹಲವಾರು ವ್ಯಾಜ್ಯವನ್ನು ಕೋರ್ಟಿನ ಮೊರೆ ಹೋಗದೆ ಸಮಾಜದ ನ್ಯಾಯ ಪೀಠದಲ್ಲಿ ಇತ್ಯರ್ಥ ಪಡಿಸಿಕೊಳ್ಳಲಾಗುತ್ತಿದೆ. ಸಮಾಜದ ಸದಸ್ಯರ ಸಹಕಾರದಿಂದ ಮತ್ತಷ್ಟು ಕಾರ್ಯಯೋಜನೆಯನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭ ಸಮಾಜದ ಉಪಾಧ್ಯಕ್ಷೆ ಚಿರಿಯಪಂಡ ಇಮ್ಮಿ ಬೋಜಮ್ಮ, ಗೌ. ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ, ಜಂಟಿ ಕಾರ್ಯದರ್ಶಿ ಆಲೇಮಾಡ ಸುಧೀರ್, ಖಜಾಂಚಿ ಚೆಪ್ಪುಡೀರ ಕಾರ್ಯಪ್ಪ, ಸದಸ್ಯರಾದ ಕೊಣಿಯಂಡ ಸಂಜುಸೋಮಯ್ಯ, ಕಳ್ಳಿಚಂಡ ಚಿಪ್ಪ ದೇವಯ್ಯ, ಚೀರಂಡ ಕಂದಾ ಸುಬ್ಬಯ್ಯ,ಅಜ್ಜಿಕುಟ್ಟಿರ ಪ್ರಥ್ವಿ ಸುಬ್ಬಯ್ಯ, ಅಡ್ಡಂಡ ಪ್ರಕಾಶ್ ಕುಶಾಲಪ್ಪ,ಮೂಕಳೇರ ಕಾವ್ಯ ಕಾವೇರಮ್ಮ, ಗುಮ್ಮಟ್ಟಿರ ಜಿ ಗಂಗಮ್ಮ ಹಾಜರಿದ್ದರು.