ಅನಿಲ ಅಭಾವವನ್ನು ಪರಿಹರಿಸಿ ಹೋಟೆಲ್ ಉದ್ಯಮ ರಕ್ಷಿಸಿ;ಸಿಪಿಐಎಂ ಪ್ರತಿಭಟನೆ
ಸಿದ್ದಾಪುರ :- ಇಸ್ರೇಲ್,ಅಮೆರಿಕಾ- ಇರಾನ್ ಯುದ್ದ ಸಂಘರ್ಷ ದಿಂದಾಗಿ ದೇಶದಲ್ಲಿ ಉದ್ಬವಿಸಿರುವ ಅನಿಲ ಅಭಾವದಿಂದ ಹೋಟೆಲ್ ಉದ್ಯಮ ಸಂಪೂರ್ಣ ಬಂದ್ ಆಗಿದ್ದು ಕೂಡಲೇ ಗ್ಯಾಸ್ ಸೌಲಭ್ಯ ನೀಡಿ ಉದ್ಯಮವನ್ನು ನಂಬಿ ಬದುಕುವವರನ್ನುರಕ್ಷಿಸ ಬೇಕು ಹಾಗೂ ಗೃಹ ಬಳಕೆ ಗ್ಯಾಸ್ ಬೆಲೆ ಹೆಚ್ಚಳವನ್ನು ಕೂಡಲೆ ಕಡಿತಗೊಳಿಸಬೇಕು ಎಂದು ಒತ್ತಾಯಿಸಿ ಮಾರ್ಕ್ಸ್ ವಾದಿ ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತರು ಸಿದ್ದಾಪುರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ನಗರದಲ್ಲಿ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿದ ಅವರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಸಮಿತಿ ಸದಸ್ಯ ಪಿ. ಆರ್. ಭರತ್ ಐಟಿಬಿಟಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರು ಸೇರಿದಂತೆ ಸಾಕಷ್ಟು ಮಂದಿ ಹೋಟೇಲ್ ಉದ್ಯಮ ಮುಚ್ಚಿದರಿಂದ ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ. ಕೇಂದ್ರ ಸರಕಾರ ಕೂಡಲೇ ಹೋಟೆಲ್ಗಳಿಗೆ ಅಗತ್ಯ ಗ್ಯಾಸ್ ಒದಗಿಸ ಬೇಕು ಎಂದು ಒತ್ತಾಯಿಸಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಹೆಚ್. ಬಿ ರಮೇಶ್ ಮಾತನಾಡಿ, ಇದೀಗ ನಡೆಯುತ್ತಿರುವ ಯುದ್ದವು ವಿನಾಶದ ಪರಮಾವಧಿಯಾಗಿದ್ದು ವಿಶ್ವದಲ್ಲಿ ಡೀಸೆಲ್, ಪೇಟ್ರೋಲ್, ಹಾಗು ಅನಿಲ ಅಭಾವ ಸೃಷ್ಟಿಸಿದೆ. ಕೇಂದ್ರ ಸರಕಾರ ಕೂಡಲೆ ಮಧ್ಯ ಪ್ರವೇಶಿಸಿ ಶಾಂತಿ ಮಾತು ಕಥೆಗೆ ವೇದಿಕೆ ಕಲ್ಪಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಿಪಿಐಎಂ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಎಸ್ ಬೈಜು, ಪದ್ಮಿನಿ ಶ್ರೀಧರ್ ಸಿದ್ದಾಪುರ ನಗರ ಸಮಿತಿ ಕಾರ್ಯದರ್ಶಿ ಸಾಲಿ ಪೌಲೋಸ್ ಸಿದ್ದಾಪುರ ಸಂಚಲನಾ ಸಮಿತಿ ಸದಸ್ಯರಾದ ಸಿ ಯು ಮುಸ್ತಫ, ಸುಬ್ರು ಮತ್ತು ಪಕ್ಷದ ಸದಸ್ಯರಾದ ಪುಷ್ಪ ,ಗೀತಾ ,ಇ ಎಂ ಉಮರ್,ಅಬ್ದುಲ್ ರೆಹಮಾನ್ ಇತರರು ಭಾಗವಹಿಸಿದ್ದರು.