ಅಪ್ರಾಪ್ತೆಯನ್ನು ಪ್ರೀತಿಯ ನಾಟಕವಾಡಿ ಅಪಹರಣದ ವೇಳೆ ರಸ್ತೆ ಅಪಘಾತ; ಬಾಲಕಿ ಮೃತ್ಯು

ಅಪ್ರಾಪ್ತೆಯನ್ನು ಪ್ರೀತಿಯ ನಾಟಕವಾಡಿ ಅಪಹರಣದ ವೇಳೆ ರಸ್ತೆ ಅಪಘಾತ; ಬಾಲಕಿ ಮೃತ್ಯು

ಬೆಂಗಳೂರು: ಅತ್ಯಾಚಾರ ಎಸಗುವ ಉದ್ದೇಶದಿಂದ ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಕರೆದೊಯ್ಯುವ ವೇಳೆ ಬೈಕ್‌ ಡಿವೈಡರ್‌ಗೆ ಡಿಕ್ಕಿಯಾಗಿ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಅಮಾನವೀಯ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿ ನಡೆದಿದೆ.

ಪ್ರೀತಿಯ ಹೆಸರಿನಲ್ಲಿ ಸರ್ಕಾರಿ ಶಾಲೆಯ 9ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯನ್ನು ಅಜಯ್ ಅಲಿಯಾಸ್ ಮನೋಜ್ ಎಂಬ ಯುವಕ ತನ್ನ ಸಹಚರರೊಂದಿಗೆ ಪ್ರೀತಿಯ ನಾಟಕವಾಡಿ ಪುಸುಲಾಯಿಸಿ ಲೈಂಗಿಕವಾಗಿ ಬಳಸಿಕೊಳ್ಳಲು ಕರೆದೊಯ್ಯುತ್ತಿದ್ದನೆಂದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.

ಆರೋಪಿಗಳು ಎರಡು ಬೈಕ್‌ಗಳಲ್ಲಿ ತೆರಳಿದ್ದು, ಒಂದರಲ್ಲಿ ಅಜಯ್, ಬಾಲಕಿ ಹಾಗೂ ಇನ್ನೊಬ್ಬ ಇದ್ದರು. ಹೊಸಕೋಟೆ ಮಾರ್ಗವಾಗಿ ತೆರಳುತ್ತಿದ್ದ ವೇಳೆ ಬೈಕ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಯಾಗಿದೆ. ಪರಿಣಾಮವಾಗಿ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಉಳಿದಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ಅ.24ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಾಲೆಗೆ ತೆರಳಿದ್ದ ಬಾಲಕಿ ಮನೆಗೆ ವಾಪಸ್ ಬಾರದ ಕಾರಣ ಪೋಷಕರು ಕಂಗಾಲಾಗಿ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಪ್ರಕರಣ ದಾಖಲಿಸಿದ್ದರು. ಅದೇ ದಿನ ಸಂಜೆ ಹೊಸಕೋಟೆ ಪೊಲೀಸರು ಅಪಘಾತದ ಮಾಹಿತಿ ನೀಡಿ ಪೋಷಕರಿಗೆ ಕರೆಮಾಡಿದ್ದರು.ತ

ನಿಖೆಯ ವೇಳೆ ಘಟನೆ ಹಿಂದೆ ಅತ್ಯಾಚಾರ ಯತ್ನದ ಸಂಚು ಬಹಿರಂಗವಾಗಿದ್ದು, ಅಜಯ್ ಅಲಿಯಾಸ್ ಮನೋಜ್, ಇರ್ಫಾನ್, ಮುಬಾರಕ್ ಹಾಗೂ ಒಬ್ಬ ಅಪ್ರಾಪ್ತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಅಪಹರಣ ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.