ಕೈ ಮುರಿದು, ಕಣ್ಣಿಗೆ ಚಾಕು ಇರಿತ: ಪತ್ನಿಯಿಂದ ಹಲ್ಲೆಗೊಳಗಾದ ರೌಡಿಶೀಟರ್! 

ಕೈ ಮುರಿದು, ಕಣ್ಣಿಗೆ ಚಾಕು ಇರಿತ: ಪತ್ನಿಯಿಂದ ಹಲ್ಲೆಗೊಳಗಾದ ರೌಡಿಶೀಟರ್! 
Photo credit: TV09

ಬೆಂಗಳೂರು, ಜ.6: ಗಂಭೀರ ಅಪರಾಧ ಪ್ರಕರಣಗಳಲ್ಲಿ ಹೆಸರು ಹೊಂದಿರುವ ರೌಡಿಶೀಟರ್ ಒಬ್ಬ ಈ ಬಾರಿ ಆರೋಪಿಯಾಗಿ ಅಲ್ಲ, ಸಂತ್ರಸ್ತನಾಗಿ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ನಗರದಲ್ಲಿ ನಡೆದಿದೆ. ಎರಡನೇ ವಿವಾಹದ ವಿಚಾರಕ್ಕೆ ಸಂಬಂಧಿಸಿದ ಗೃಹ ಕಲಹದಲ್ಲಿ ಪತ್ನಿಯೇ ತನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ ಎಂದು ರೌಡಿಶೀಟರ್ ಸೈಯದ್ ಅಸ್ಗರ್ ಆರೋಪಿಸಿದ್ದಾರೆ.

ಗಾಂಜಾ ಪೆಡ್ಲಿಂಗ್, ಕಳ್ಳತನ ಹಾಗೂ ಕೊಲೆ ಯತ್ನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಸೈಯದ್ ಅಸ್ಗರ್ ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದರು. ಜೈಲಿನಿಂದ ಹೊರಬಂದ ನಂತರವೂ ಕುಟುಂಬದೊಳಗಿನ ಕಲಹ ತೀವ್ರಗೊಂಡಿದ್ದು, ಇದೇ ವಿಚಾರ ಹಿಂಸಾತ್ಮಕ ತಿರುವು ಪಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪೊಲೀಸರಿಗೆ ನೀಡಿರುವ ದೂರಿನಂತೆ, ಎರಡನೇ ಪತ್ನಿಯನ್ನು ಬಿಡುವಂತೆ ಮೊದಲ ಪತ್ನಿ ನಿರಂತರವಾಗಿ ಒತ್ತಡ ಹೇರುತ್ತಿದ್ದಳು. ಈ ವಿಚಾರವಾಗಿ ನಡೆದ ಗಲಾಟೆಯಲ್ಲಿ ಆಕೆ ಸೈಯದ್ ಅಸ್ಗರ್ ಕೈ ಮುರಿದು, ಕಣ್ಣಿಗೆ ಚಾಕು ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಲ್ಲೆಯ ಸಂದರ್ಭದಲ್ಲೇ ಎರಡನೇ ಪತ್ನಿಯೂ ಸ್ಥಳದಲ್ಲಿದ್ದಳು ಎನ್ನಲಾಗಿದೆ.

ಪೊಲೀಸರ ಪ್ರಕಾರ, ಮೊದಲ ಪತ್ನಿ ಈ ಹಿಂದೆಯೂ ಆಯುಧಗಳನ್ನು ಹಿಡಿದು ಬೆದರಿಕೆ ವಿಡಿಯೋಗಳನ್ನು ಮಾಡಿದ್ದಳು. ಕೊಲೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದ ಆ ವಿಡಿಯೋಗಳ ನಂತರವೇ ಹಲ್ಲೆ ನಡೆದಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ.

ಈ ಕುರಿತು ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತ ಪತ್ನಿಯ ವಿರುದ್ಧ ತನಿಖೆ ಮುಂದುವರಿದಿದೆ. ಇಷ್ಟರವರೆಗೆ ಇತರರಿಗೆ ಬೆದರಿಕೆ ಹಾಕುತ್ತಿದ್ದ ರೌಡಿಶೀಟರ್ ಇದೀಗ ಪತ್ನಿಯ ಹಲ್ಲೆಯಿಂದ ಪೊಲೀಸ್ ರಕ್ಷಣೆ ಕೋರುವ ಸ್ಥಿತಿಗೆ ಬಂದಿರುವುದು ಗಮನ ಸೆಳೆದಿದೆ.