ಸಚಿವ ಸಂಪುಟದಿಂದ ಕಾಂಗ್ರೆಸ್ ಹಿರಿಯ ನಾಯಕ ಕೆ.ಎನ್ ರಾಜಣ್ಣ ವಜಾ: ಕೋಲು ಕೊಟ್ಟು ಪೆಟ್ಟು ತಿಂದ ರಾಜಣ್ಣ!

ಸಚಿವ ಸಂಪುಟದಿಂದ ಕಾಂಗ್ರೆಸ್ ಹಿರಿಯ ನಾಯಕ ಕೆ.ಎನ್ ರಾಜಣ್ಣ ವಜಾ: ಕೋಲು ಕೊಟ್ಟು ಪೆಟ್ಟು ತಿಂದ ರಾಜಣ್ಣ!

ಬೆಂಗಳೂರು:ಸದಾ ನೇರ‌ ಮಾತುಗಳಿಂದ ಸುದ್ದಿಯಲ್ಲಿದ್ದ ಕಾಂಗ್ರೆಸ್ ಹಿರಿಯ ನಾಯಕ ಕೆ.ಎನ್ ರಾಜಣ್ಣ ಅವರು ಸೆಪ್ಟೆಂಬರ್ ನಲ್ಲಿ ಕಾಂಗ್ರೆಸ್ ಕ್ರಾಂತಿಯಾಗಲಿದೆ ಎಂದು ಹೇಳಿದ್ದರು.ಇದೀಗ ಕಾಂಗ್ರೆಸ್ ನಲ್ಲಿ ಆಗಸ್ಟ್‌ ನಲ್ಲೇ ಕ್ರಾಂತಿಯುಂಟಾಗಿದೆ. ಕಾಂಗ್ರೆಸ್ ಹಿರಿಯ ನಾಯಕ ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಲಾಗಿದೆ. ಈ ಬಗ್ಗೆ ಸರಕಾರಕ್ಕೆ ರಾಜ್ಯಪಾಲರಿಂದ ಅಧಿಕೃತ ಪತ್ರ ರವಾನಿಸಲಾಗಿದೆ.ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆ‌ರ್.ಪ್ರಭುಶಂಕರ್ ಅವರು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದಾರೆ.

ರಾಜಭವನದ ಪತ್ರದಲ್ಲಿ ಏನಿದೆ?

 "ಮುಂದಿನ ಅಗತ್ಯ ಕ್ರಮಕ್ಕಾಗಿ, ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ತಕ್ಷಣದಿಂದ ಜಾರಿಗೆ ಬರುವಂತೆ ತೆಗೆದುಹಾಕುವ ಕುರಿತು ರಾಜ್ಯಪಾಲರು ಸಹಿ ಮಾಡಿದ ಮೂಲ ಅಧಿಸೂಚನೆಯನ್ನು ಈ ಪತ್ರದೊಂದಿಗೆ ಕಳುಹಿಸಲು ನನಗೆ ನಿರ್ದೇಶಿಸಲಾಗಿದೆ" ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇತ್ತೀಚಿಗೆ ಕೆ.ಎನ್‌.ರಾಜಣ್ಣ ಅವರು ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ಮತಗಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ 'ಲೋಕಸಭಾ ಚುನಾವಣೆಯಲ್ಲಿ ಮತಕಳವು ನಡೆದಿದೆ. ಆದರೆ ಕಾಂಗ್ರೆಸ್‌ ಸರಕಾರ ಅಧಿಕಾರದಲ್ಲಿ ಇದ್ದಾಗಲೇ ಮತದಾರರ ಪಟ್ಟಿ ಸಿದ್ಧಪಡಿಸಲಾಗಿದೆ. ಆಗ ಎಲ್ಲರೂ ಕಣ್ಣುಮುಚ್ಚಿ ಕುಳಿತಿದ್ದರೇ?' ಎಂದು ಅವರು ಪ್ರಶ್ನಿಸಿದ್ದರು.