ಬೀಗ ಹಾಕಿದ ಮನೆಗಳಿಗೆ ಸರಣಿ ಕನ್ನ; ಕಳವು ಬಳಿಕ ಮನೆಯಲ್ಲೇ ಚಹಾ ಕುಡಿದು ಪರಾರಿಯಾದ ಕಳ್ಳರು
ಹಾವೇರಿ, ಡಿ. 23: ನಗರದ ನಾಗೇಂದ್ರಮಟ್ಟಿ ಪ್ರದೇಶದಲ್ಲಿ ಸರಣಿ ಕಳ್ಳತನ ಪ್ರಕರಣಗಳು ವರದಿಯಾಗಿದ್ದು, ಬೀಗ ಹಾಕಿದ್ದ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ನಡೆಸಿದ್ದಾರೆ. ಒಂದೇ ಪ್ರದೇಶದಲ್ಲಿ ಏಳಕ್ಕೂ ಹೆಚ್ಚು ಮನೆಗಳಿಗೆ ಕನ್ನ ಹಾಕಲಾಗಿದ್ದು, ನಗದು, ಚಿನ್ನಾಭರಣ ಸೇರಿದಂತೆ ಮೌಲ್ಯಬಾಳುವ ವಸ್ತುಗಳನ್ನು ಕಳ್ಳರು ಎಗರಿಸಿಕೊಂಡಿದ್ದಾರೆ.
ಚಳಿಯ ವಾತಾವರಣದ ಹಿನ್ನೆಲೆಯಲ್ಲಿ ಕಳ್ಳರು ಕಳವು ಮಾಡಿದ್ದ ಮನೆಯಲ್ಲೇ ಚಹಾ ತಯಾರಿಸಿಕೊಂಡು ಸೇವಿಸಿ ನಂತರ ಸ್ಥಳದಿಂದ ಪರಾರಿಯಾಗಿರುವುದು ಅಚ್ಚರಿ ಮೂಡಿಸಿದೆ. ಈ ಕೃತ್ಯದಿಂದ ನಾಗೇಂದ್ರಮಟ್ಟಿ ನಿವಾಸಿಗಳಲ್ಲಿ ಭಯ ಮತ್ತು ಆತಂಕ ವ್ಯಾಪಕವಾಗಿದೆ.
ಸರಣಿ ಕಳ್ಳತನಗಳಿಂದ ಕಂಗಾಲಾಗಿರುವ ಸ್ಥಳೀಯರು, ರಾತ್ರಿ ಗಸ್ತು ಹಾಗೂ ಭದ್ರತಾ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದು ಆರೋಪಿಸಿ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.