ಶಿವಮೊಗ್ಗ: ಜಗಳವಾಡಿದ್ದಕ್ಕೆ ಅಂಗನವಾಡಿಯಲ್ಲಿ ಮೂರುವರೆ ವರ್ಷದ ಬಾಲಕನಿಗೆ ಬರೆ ಹಾಕಿದ ಸಹಾಯಕಿ!
ಶಿವಮೊಗ್ಗ, ಅ.31: ಸೊರಬ ತಾಲೂಕಿನ ಚಿಕ್ಕಕಸವಿ ಗ್ರಾಮದ ಅಂಗನವಾಡಿಯಲ್ಲಿ ಸಹಾಯಕಿ ಮೂರೂವರೆ ವರ್ಷದ ಬಾಲಕನಿಗೆ ಬಿಸಿ ಚಾಕುವಿನಿಂದ ಬರೆ ಹಾಕಿದ ಆರೋಪ ಕೇಳಿಬಂದಿದೆ.
ಚಿಕ್ಕಕಸವಿ ಗ್ರಾಮದ ಚಂದ್ರಪ್ಪ ಹಾಗೂ ನಂದಿನಿ ದಂಪತಿಗಳ ಮಗ ಗುರುವಾರ ಬೆಳಗ್ಗೆ ಎಂದಿನಂತೆ ಅಂಗನವಾಡಿಗೆ ತೆರಳಿದ್ದ. ಅಲ್ಲಿ ಸಹಪಾಠಿಯೊಂದಿಗಿನ ಜಗಳದ ವೇಳೆ ಆತನಿಗೆ ಕಚ್ಚಿದ್ದಾನೆ. ಇದರಿಂದ ಕೋಪಗೊಂಡ ಸಹಾಯಕಿ ಹೇಮಮ್ಮ, ಗ್ಯಾಸ್ನಲ್ಲಿ ಚಾಕು ಕಾಯಿಸಿ ಬಾಲಕನ ಎರಡು ಗಲ್ಲಗಳಿಗೂ ಬರೆ ಹಾಕಿದ್ದಾಳೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಮಗುವಿನ ಎರಡೂ ಗಲ್ಲಗಳಲ್ಲಿ ಸುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಬಾಲಕ ಮನೆಗೆ ಬಂದು ಅತ್ತಾಗ ಪೋಷಕರಿಗೆ ವಿಷಯ ತಿಳಿದು, ತಕ್ಷಣ ಅಂಗನವಾಡಿಗೆ ತೆರಳಿದರೂ ಸಹಾಯಕಿ ಅಲ್ಲಿಂದ ಪರಾರಿಯಾಗಿದ್ದಾಳೆ. ಬಳಿಕ ಪೋಷಕರು ಸೊರಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಾಲಕನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
“ನಮ್ಮ ಮಗ ಅಂಗನವಾಡಿಯಲ್ಲಿ ಬೇರೆ ಹುಡುಗನ ಜೊತೆ ಜಗಳವಾಡಿದ್ದಕ್ಕೆ ಶಿಕ್ಷೆ ಹೆಸರಿನಲ್ಲಿ ಚಾಕು ಬಿಸಿ ಮಾಡಿ ಬರೆ ಹಾಕಿದ್ದಾರೆ. ಇಂಥ ಕ್ರೂರ ವರ್ತನೆ ಅಸಹ್ಯ,” ಎಂದು ಬಾಲಕನ ತಂದೆ ಚಂದ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.