ಸೋಮವಾರಪೇಟೆ:ದಾರಿ ಕೇಳುವ ನೆಪದಲ್ಲಿ ಮಹಿಳೆಯ ಕತ್ತಿನಿಂದ ಸರ ಎಗರಿಸಿದ್ದ ಫುಡ್ ಡೆಲಿವರಿ ಬಾಯ್ ಬಂಧನ
ಸೋಮವಾರಪೇಟೆ: ಕೊಡಗು ಜಿಲ್ಲೆಯ ಗಡಿಯ ಕಲ್ಲಳ್ಳಿ ಗ್ರಾಮದಲ್ಲಿ ಮಹಿಳೆಯ ಕತ್ತಿನಿಂದ ಸರ ಎಗರಿಸಿದ ಪ್ರಕರಣವನ್ನು ಭೇದಿಸಿದ ಪೊಲೀಸರು, ಅಪರಾಧಕ್ಕೆ ಸಂಬಂಧಿಸಿದಂತೆ ಫುಡ್ ಡೆಲಿವರಿ ಮಾಡುವ ಯುವಕನೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ಸೋಮವಾರಪೇಟೆ ತಾಲ್ಲೂಕಿನ ದೊಡ್ಡತೊಳೂರು ಗ್ರಾಮದ ಆದರ್ಶ್ ಎಂದು ಗುರುತಿಸಲಾಗಿದೆ. ಅ.23ರಂದು ಬೈಕ್ ಸವಾರನೊಬ್ಬ ಮಹಿಳೆಯ ಕತ್ತಿನಿಂದ 25 ಗ್ರಾಂ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದ ಘಟನೆ ನಡೆದಿತ್ತು.
ಘಟನೆ ನಡೆದ ದಿನ ಮಹಿಳೆಯು ಕಲ್ಲಳ್ಳಿಯ ಮನೆ ಸಮೀಪ ನಡೆದುಕೊಂಡು ಹೋಗುತ್ತಿದ್ದಾಗ, ಮಲ್ಲಳ್ಳಿ ಜಲಪಾತಕ್ಕೆ ಹೋಗುವ ಮಾರ್ಗ ವಿಚಾರಿಸುವ ನೆಪದಲ್ಲಿ ಬಂದಿದ್ದ ಸವಾರ, ಕ್ಷಣಾರ್ಧದಲ್ಲಿ ಅವರ ಕತ್ತಿನಿಂದ ಸರವನ್ನು ಎಗರಿಸಿ ತಂಬಲಗೇರಿ ರಸ್ತೆ ಕಡೆಗೆ ಪರಾರಿಯಾಗಿದ್ದ ಎಂದು ತಿಳಿದು ಬಂದಿದೆ.
ಘಟನೆರ ಬಳಿಕ, ಪೊಲೀಸರು ಬಿಸಿಲೆ ಮತ್ತು ಚಂಗಡಹಳ್ಳಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಯ ಸುಳಿವು ಸಿಕ್ಕಿದೆ. ನಂತರ ನಡೆದ ಕಾರ್ಯಾಚರಣೆಯಲ್ಲಿ, ಮಂಗಳೂರಿನಲ್ಲಿ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದ ಆದರ್ಶ್ ನನ್ನು ಬಂಧಿಸಲಾಯಿತು. ಊರಿಗೆ ಭೇಟಿ ನೀಡಿದ್ದ ವೇಳೆ ಆತ ಸರ ಕಳವು ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಾಸನದ ಆಭರಣ ಅಂಗಡಿಯಲ್ಲಿ ಕಳ್ಳತನ ಮಾಡಿದ ಸರವನ್ನು ಅಡವಿಟ್ಟಿರುವುದು ಪತ್ತೆಯಾಗಿದ್ದು, ಪೊಲೀಸರು ಸರವನ್ನು ವಶಪಡಿಸಿಕೊಂಡಿದ್ದಾರೆ.