ಸೋಮವಾರಪೇಟೆ ತಾಲ್ಲೂಕು ಪಂಚಾಯತ್ ಪ್ರಗತಿ ಪರಿಶೀಲನಾ ಸಭೆ: ಸಮಯ ಪಾಲನೆ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ: ಶಾಸಕ ಡಾ.ಮಂತರ್ ಗೌಡ

ಸೋಮವಾರಪೇಟೆ ತಾಲ್ಲೂಕು ಪಂಚಾಯತ್ ಪ್ರಗತಿ ಪರಿಶೀಲನಾ ಸಭೆ:  ಸಮಯ ಪಾಲನೆ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ: ಶಾಸಕ ಡಾ.ಮಂತರ್ ಗೌಡ

ಸೋಮವಾರಪೇಟೆ: ಸಾರ್ವಜನಿಕರಿಗೆ ಅತಿ ಅವಶ್ಯವಿರುವ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಂತೆ ದಿನವಾದ ಸೋಮವಾರದಂದು ಖಡ್ಡಾಯವಾಗಿ ಕಛೇರಿಯಲ್ಲಿ ಹಾಜರಿರಬೇಕು. ಸಾರ್ವಜನಿಕರಿಂದ ಅನೇಕ ದೂರುಗಳು ಬರುತ್ತಿದ್ದು.ಸಮಯ ಪಾಲನೆ ಮಾಡದ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳಲಾಗುವುದೆಂದು ಶಾಸಕರು ಹೇಳಿದರು.

 ಇಲ್ಲಿನ ತಾಲೂಕು ಪಂಚಾಯಿತಿಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಶಾಸಕ ಡಾ.ಮಂತರ್‌ಗೌಡ ಅಧ್ಯಕ್ಷತೆಯಲ್ಲಿ ಮಂಗಳವಾರದಂದು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. 

ತಾಲೂಕು ಕಛೇರಿಯಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕುತ್ತಿಲ್ಲ.ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ ಎಂದು ಕೆಡಿಪಿ ನಾಮನಿರ್ದೆಶಿತ ಸದಸ್ಯರಾದ ಸಬಿತಾ ಚನ್ನಕೇಶವ ಸಭೆಯ ಗಮನಕ್ಕೆ ತಂದರು.ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಕೃಷ್ಣಮೂರ್ತಿ ಮಧ್ಯವರ್ತಿಗಳಿಂದ ಕೆಲಸ ಮಾಡಿಸಬೇಡಿ.ಏನಾದರೂ ಸಮಸ್ಯೆ ಇದ್ದರೆ ನೇರವಾಗಿ ನನ್ನ ಗಮನಕ್ಕೆ ತನ್ನಿ ಎಂದರು.

ಕಂದಾಯ,ತೋಟಗಾರಿಕೆ ಮತ್ತು ಕಾಫಿಮಂಡಳಿ ಅಧಿಕಾರಿಗಳು ಅವಧಿಗೆ ಮುನ್ನವೇ ಬೆಳೆ ನಷ್ಟ ಸಮೀಕ್ಷೆ ನಡೆಸಿ ಸರಕಾರಕ್ಕೆ ವರದಿ ನೀಡಿದ್ದಾರೆ.ಅಕ್ಟೋಬರ್ ತಿಂಗಳ ಅಂತ್ಯದವರೆಗೂ ಅಕಾಲಿಕ ಮಳೆ ಸುರಿದಿದೆ.ಇದರಿಂದ ರೈತರಿಗೆ ಅನ್ಯಾಯವಾಗಿದೆ. ಅಧಿಕಾರಿಗಳು ತಾಲೂಕಿನಲ್ಲಿ ಎಷ್ಟು ಹೋಬಳಿ ಇದೆ.ಎಷ್ಟು ಮಳೆಯಾಗಿದೆ.ಬೆಳೆ ನಷ್ಟದ ಪ್ರಮಾಣ ಎಷ್ಟಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಿ ಶಾಸಕ ಡಾ.ಮಂತರ್‌ಗೌಡ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು ಎಂದರು.

ತಾಲೂಕಿನಲ್ಲಿ ಸರಕಾರ ನೀಡುತ್ತಿರುವ ಅಕ್ಕಿ ದುರುಪಯೋಗ ಆಗುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು,ಸೊಸೈಟಿಗಳು,ನ್ಯಾಯಬೆಲೆ ಅಂಗಡಿಗಳು ಹಾಗೂ ಫಲಾನುಭವಿಗಳಿಂದ ಅಕ್ಕಿ ಪಡೆದುಕೊಂಡು ಮಾರಾಟ ಮಾಡುತ್ತಿರುವವರ ಬಗ್ಗೆ ತನಿಖೆ ಆಗಬೇಕಿದೆ.ಹಲವು ಶ್ರೀಮಂತರು,ಸರಕಾರಿ ಇಲಾಖೆಯ ನೌಕರರ ಮನೆಯಲ್ಲೂ ಬಿಪಿಎಲ್ ಕಾರ್ಡ್ ಇದೆ.ಇದರ ಪರಿಶೀಲನೆ ಮಾಡಿ ವರದಿ ನೀಡಬೇಕೆಂದು ಶಾಸಕರು ಇಲಾಖೆಯ ಅಧಿಕಾರಿಗೆ ಸೂಚನೆ ನೀಡಿದರು.

ಸರ್ವೆ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರ ಆರ್ಭಟಜಾಸ್ತಿಯಾಗಿದೆ.ಗ್ರಾಮ ನಕಾಶೆಗಳನ್ನು ಸರಿಯಾಗಿ ಗುರುತಿಸುತ್ತಿಲ್ಲ.

ಎಡಿಎಲ್‌ಆರ್ ರವರ ಮಾತುಗಳನ್ನು ಸಿಬ್ಬಂದಿಗಳು ಕೇಳುತ್ತಿಲ್ಲ.ಆಹಾರ ಇಲಾಖೆಯಲ್ಲಿ ಸಿಬ್ಬಂದಿಗಳೇ ಇಲ್ಲ.ಜನನ ಮರಣ ನೋಂದಣಿ ವಿಭಾಗದ ಕಛೇರಿಯಲ್ಲೂ ಯಾರೂ ಇರುವುದಿಲ್ಲ ಎಂದು ಸೂಡಾ ಅಧ್ಯಕ್ಷಕೆ.ಎ.ಆದಂ ಸಭೆಯ ಗಮನಕ್ಕೆ ತಂದರು.

ಫಾರ್ಮ್ ನಂಬರ್ ೯ ಮತ್ತು ೧೧ರ ಪರಿವರ್ತನೆಗೆ ಸಂಬಂದಿಸಿದಂತೆ ಅಧಿಕಾರಿಗಳು ಲಂಚದ‌ಆಮಿಷ ಒಡ್ಡುತ್ತಿದ್ದಾರೆ ಎಂದು ಸಾಕಷ್ಟು ದೂರುಗಳು ಬರುತ್ತಿದ್ದು.ಆರೋಪ ಸಾಬೀತಾದರೆ ಸಂಬಂಧಿಸಿದವರ ಅಮಾನತ್ತಿಗೆ ಶಿಫಾರಸು ಮಾಡಲಾಗುವುದು ಎಂದು ಶಾಸಕರು ಎಚ್ಚರಿಕೆ ನೀಡಿದರು.

    ಕಟ್ಟಡ ಮತ್ತು ಇತರ ಕಾರ್ಮಿಕರ ಮಕ್ಕಳ ಶ್ರೇಯೋಭಿವೃದ್ದಿಗೆ ಸೋಮವಾರಪೇಟೆ ತಾಲೂಕಿನ ಚೆನ್ನಾಪುರ ಗ್ರಾಮದಲ್ಲಿ ವಸತಿ ಶಾಲೆ ನಿರ್ಮಾಣಕ್ಕೆ ಐದು ಏಕರೆ ಜಾಗ ಗುರುತಿಸಲಾಗಿದ್ದು,ಸುಮಾರು ೪೦ ಕೋಟಿ ಅನುದಾನ ನೀಡುವುದಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.ಆದರೆ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಅಸಡ್ಡೆಯಿಂದಾಗಿ ಇನ್ನೂ ಸಂಬಂಧಪಟ್ಟ ಜಾಗವನ್ನು ಇಲಾಖೆ ಸುಫರ್ದಿಗೆ ತೆಗೆದುಕೊಳ್ಳದಿರುವ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತ ಪಡಿಸಿದರು.

ಸೋಮವಾರಪೇಟೆ ಪಟ್ಟಣ ಹಾಗೂ ಸಮೀಪದ ಚೌಡ್ಲು ಮತ್ತು ಹಾನಗಲ್ ಪಂಚಾಯಿತಿ ವ್ಯಾಪ್ತಿಯಲ್ಲಿ ಅನಧಿಕೃತ ಬಹುಮಹಡಿ ಕಟ್ಟಡಗಳು ನಿರ್ಮಾಣವಾಗುತ್ತಿದೆ.ಪ್ರಾಧಿಕಾರದಿಂದ ಯಾವುದೇ ಅನುಮತಿಯನ್ನು ಪಡೆದಿಲ್ಲ.ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಯಾವ ಆಧಾರದಲ್ಲಿ ನಿರಾಕ್ಷೇಪಣಾ ಪತ್ರ ನೀಡಿದ್ದಾರೆ ಎಂದು ಸೂಡಾ ಅಧ್ಯಕ್ಷ ಕೆ.ಎ.ಆದಂ ಸಭೆಯ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಹಲವು ಬಾರ್‌ಗಳಲ್ಲಿ ಅಪ್ರಾಪ್ತ ಬಾಲಕರು ಮದ್ಯದ ಬಾಟಲಿ ಖರೀದಿಸುತ್ತಿರುವ ಬಗ್ಗೆ ಸಾರ್ವಜನಿಕರು ಹಾಗೂ ಪೋಷಕರಿಂದ ದೂರು ಬಂದಿದೆ.ಬಾರ್ ಮಾಲೀಕರು ಆಧಾರ್ ಕಾರ್ಡ್ಗಳನ್ನು ಪರಿಶೀಲಿಸುವ ಅಗತ್ಯವಿದೆ.ಗ್ರಾಮಾಂತರ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟದ ಪ್ರಕರಣಗಳೂ ಹೆಚ್ಚುತ್ತಿದ್ದು,ಅಬ್ಕಾರಿ ಇಲಾಖೆಯವರು ಕಾನೂನು ಕ್ರಮ ಕೈಗೊಳ್ಳಬೇಕೆಮದು ಶಾಸಕರು ಸೂಚನೆ ನೀಡಿದರು.

ಸಭೆಯಲ್ಲಿ ಆಡಳಿತಾಧಿಕಾರಿ ಅಬ್ದುಲ್ ನಭಿ,ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್,ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಎಂ.ಕಾಂತರಾಜ್ ಇದ್ದರು.