ಸುಂದರನಗರ ವಾರ್ಡ್ ಸಭೆ: ಸಾರ್ವಜನಿಕರ ಸಮಸ್ಯೆ ಬಗೆಹರಿಸುವ ಭರವಸೆ!

ಸುಂದರನಗರ ವಾರ್ಡ್ ಸಭೆ: ಸಾರ್ವಜನಿಕರ ಸಮಸ್ಯೆ ಬಗೆಹರಿಸುವ ಭರವಸೆ!

ಕುಶಾಲನಗರ,ನ18: ಕೂಡುಮಂಗಳೂರು ಗ್ರಾ.ಪಂ ನ‌ ಸುಂದರನಗರ ವಾರ್ಡ್ ಸಭೆಯು ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರ ಅಧ್ಯಕ್ಷತೆಯಲ್ಲಿ ಸುಂದರನಗರ ಸಮುದಾಯ ಭವನದಲ್ಲಿ ನಡೆಯಿತು. ‌ ಸುಂದರನಗರದಲ್ಲಿ ಸ್ಮಶಾನದ ಜಾಗದ ದಾಖಲೆಗಳನ್ನು ಮಾಡಿಸುವ ಬಗ್ಗೆ ಗ್ರಾಮಸ್ಥರು ಸಭೆಯ ಗಮನಕ್ಕೆ ತಂದರು.

ವಾರ್ಡ್ ನಲ್ಲಿ ಬೀದಿ ನಾಯಿಗಳ ಸಮಸ್ಯೆಯ ಪರಿಹಾರ ಕಂಡುಕೊಡುವ ಬಗ್ಗೆ ಪ್ರಸ್ತಾಪಿಸಲಾಯಿತು. ಸುಂದರನಗರ ಸರ್ಕಲ್ ನಲ್ಲಿ ಬಸ್ ತಂಗುದಾಣ ಮಧ್ಯವ್ಯಸನಿಗಳ ತಾಣವಾಗಿದ್ದು, ಈ ಬಗ್ಗೆ ಕ್ರಮಕ್ಕೆ ಆಗ್ರಹಿಸಲಾಯಿತು. ಸುಂದರನಗರ ಅಂಗನಾಡಿಯಲ್ಲಿ ಬಳಕೆಯಾಗದ ಟ್ಯಾಂಕ್ ತೆರವುಗೊಳಿಸುವ ಬಗ್ಗೆ ಸಾರ್ವಜನಿಕರು ಆಗ್ರಹಿಸಿದರು.

 ಸುಂದರನಗರ ಅಂಗನವಾಡಿಯಲ್ಲಿ ಮಕ್ಕಳಿಗೆ ಆಟವಾಡಲು ಅನಾನುಕೂಲವಿರುವುದರಿಂದ ಅಂಗನವಾಡಿಯನ್ನು ಸಮುದಾಯ ಭವನದ ಜಾಗಕ್ಕೆ ಸ್ಥಳಾಂತರಿಸುವ ಬಗ್ಗೆ ಸಲಹೆ ನೀಡಲಾಯಿತು. ರಸ್ತೆಯಲ್ಲಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವಂತೆ ಹಾಗೂ ಶಿಥಿಲಗೊಂಡಿರುವ ಕಂಬಗಳನ್ನು ಬದಲಾಯಿಸುವ ಬಗ್ಗೆ ಆಗ್ರಹಿಸಲಾಯಿತು.

ಕಸದ ಗಾಡಿ ತಡವಾಗಿ ಆಗಮಿಸುತ್ತಿದ್ದು, ಆದಷ್ಟು ಬೇಗನೇ ಕಸದ ಗಾಡಿಯನ್ನು ಕಳುಹಿಸುವಂತೆ ತಿಳಿಸಲಾಯಿತು. ಸಭೆಯಲ್ಲಿ ಕಳೆದ ವಾರ್ಡ್ ಸಭೆಯ ನಡಾವಳಿಯನ್ಜು ಮಂಡಿಸಲಾಯಿತು. ‌ವಾರ್ಡ್ ಈವರೆಗೆಗ ಆಗಿರುವ ಕಾಮಗಾರಿಗಳ ಬಗ್ಗೆ ಸಾರ್ವಜನಿಕರ ಗಮನಕ್ಕೆ ತರಲಾಯಿತು. ವಾರ್ಡ್ ನಲ್ಲಿ ಆಗಬೇಕಾಗಿರುವ ರಸ್ತೆ ಅಭಿವೃದ್ಧಿ,‌ ಚರಂಡಿ ಸೇರಿದಂತೆ ಇನ್ನಿತರ ಕಾಮಗಾರಿಗಳ ಬಗ್ಗೆ ಪಟ್ಟಿ ಮಾಡಲಾಯಿತು. ಈ ಸಂದರ್ಭ ಮಾತನಾಡಿದ ವಾರ್ಡ್ ಸದಸ್ಯ ಕೆ.ಬಿ.ಶಂಶುದ್ಧೀನ್, ವಾರ್ಡ್ ನ‌ಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ‌ಮಾಡಲಾಗಿದೆ.

ಹಾಗೆಯೇ ಜನರ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ವಾರ್ಡ್ ಸಭೆಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಪಟ್ಟಿ ಮಾಡಲಾಗಿದ್ದು, ಸಮಸ್ಯೆಗಳನ್ನು ಪರಿಹರಿಸುವ ಕೆಲಸಕ್ಕೆ ಮುಂದಾಗಲಾಗುವುದು.

ಹಾಗೆಯೇ ವಾರ್ಡ್ ಅಭಿವೃದ್ಧಿ ಕೆಲಸಗಳಿಗೆ ಕ್ರಮ ಕೈಗೊಳ್ಳಲಾಗುವು್ಉ ಎಂದರು. ಈ ಸಂದರ್ಭ ವಾರ್ಡ್ ಸದಸ್ಯೆ ಆಶಾ ವೆಂಕಟೇಶ್, ಪಿಡಿಒ ಸಂತೋಷ್, ಬಿಲ್‌ ಕಲೆಕ್ಟರ್ ಅವಿನಾಶ್, ನೀರುಗಂಟಿ ಕುಮಾರ್, ಮಹದೇವ್, ಗ್ರಾ.ಪಂ ಮಾಜಿ ಸದಸ್ಯೆ ಜಯಮ್ಮ, ಅಂಗನವಾಡಿ ಶಿಕ್ಷಕಿ ಬೋಜಮ್ಮ ಹಾಗೂ ಇನ್ನಿತರರು ಇದ್ದರು.