ಮಾ14ರಂದು ಮಲೆತಂಬ್ರಾನ್ ಎಂಬ ಅಪಾರ ಶಕ್ತಿನೆಲೆ ಎನಿಸಿರುವ ಈಶ್ವರ ದೇವಾಲಯದ ವಾರ್ಷಿಕೋತ್ಸವ
ವಿರಾಜಪೇಟೆ: ಅಪಾರಶಕ್ತಿ ದೇವನೆಲೆಯಾದ ಮಲೆತಿರಿಕೆ ದೇವಾಲಯದಲ್ಲಿನ ಮಲೆತಂಬ್ರಾನ್ ಎಂಬ ಅಪಾರ ಶಕ್ತಿನೆಲೆ ಎನಿಸಿರುವ ಈಶ್ವರ ದೇವಾಲಯದ ವಾರ್ಷಿಕೋತ್ಸವ ಮಾ. ೧೪ ರಂದು ನಡೆಯಲಿದೆ.
ವಿರಾಜಪೇಟೆ ಹತ್ತಿರದ ಕರಡ ಗ್ರಾಮದ ಸೋಮಗಿರಿ ಬೆಟ್ಟದ ಮೇಲಿರುವ ಮಲೆತಿರಿಕೆ ದೇವಸ್ಥಾನ ಒಂದು ಸುಂದರ, ಪ್ರಾಕೃತಿಕ ಶಿವನ ದೇವಸ್ಥಾನವಾಗಿದೆ.
ಇಲ್ಲಿ ಯಾವುದೇ ನಿರ್ಮಿತ ಕಟ್ಟಡವಿಲ್ಲ, ಬದಲಾಗಿ ಮರದ ಕೆಳಗೆ ೫ ಸ್ವಯಂಭೂ ಶಿವಲಿಂಗಗಳಿವೆ. ಪಾಂಡವರು ಇಲ್ಲಿ ಪೂಜೆ ಸಲ್ಲಿಸಿದ್ದರು ಎಂಬ ನಂಬಿಕೆ ಇದೆ. ಇಲ್ಲಿನ ಪರಿಸರ, ಗಂಟೆಗಳು ಭಕ್ತರನ್ನು ಆಕರ್ಷಿಸುತ್ತವೆ. ಕರಡ ಎಂಬಲ್ಲಿ ಬೆಟ್ಟದ ತುದಿಯಲ್ಲಿ ತೆರೆದ ಆವರಣದಲ್ಲಿರುವ ೫ ಶಿವಲಿಂಗಗಳಿರುವ ದೇವ ನೆಲೆ ಇದಾಗಿದ್ದು, ಭಕ್ತರು ತಮ್ಮ ಹರಕೆ ಸಲ್ಲಿಸಲು ಇಲ್ಲಿ ಗಂಟೆಗಳನ್ನು ಕಟ್ಟುತ್ತಾರೆ.
ಶಕ್ತಿನೆಲೆ;
ವಿಶೇಷ ಶಕ್ತಿ ನೆಲೆಯಾದ ಈ ದೇವಸ್ಥಾನಕ್ಕೆ ಅತ್ಯಂತ ಶುದ್ದಮುದ್ರಿಕೆಯಲ್ಲಿ ತೆರಳಿ, ಪೂಜಾ ವಿಧಿವಿಧಾನಗಳಲ್ಲಿ ಭಕ್ತರು ಪಾಲ್ಗೊಳ್ಳಬೇಕು. ಹಿಂದಿನ ಕಾಲದಲ್ಲಿ ಮಲೆತಂಬ್ರಾನ್ ಬಳಿ ತೆರಳುವ ಹಿಂದಿನ ದಿನವೇ ತಾವು ಧರಿಸುವ ಬಟ್ಟೆಗಳನ್ನು ಮನೆಯ ಹೊರಗಡೆ ಇಬ್ಬನಿಯಲ್ಲಿ ಇಟ್ಟು, ಬೆಳಗ್ಗೆದ್ದು ಸ್ನಾನ ಮಾಡಿ ಮನೆಯೊಳಗೆ ಪ್ರವೇಶ ಮಾಡದೆ ಹೊರಗಡೆಯಿಂದಲೇ ದೇವಸ್ಥಾನಕ್ಕೆ ತೆರಳುವ ಸಂಪ್ರದಾಯವಿತ್ತು. ಶುದ್ದವಾಗಿಲ್ಲದೆ ಇದ್ದಲ್ಲಿ ಜೇನುನೋಣಗಳು ಕಚ್ಚುತ್ತವೆ ಎನ್ನುವ ನಂಬಿಕೆ ಹಾಗೂ ದೇವರಲ್ಲಿ ಪೂಜನೀಯ ಭಾವವಿತ್ತು. ಇಂದಿಗೂ ದೇವರ ನಂಬಿಕೆ ಚಾಲ್ತಿಯಲ್ಲಿದ್ದು ಇಲ್ಲಿ ಹೊತ್ತ ಹರಕೆಗಳು ಎಂದಿಗೂ ಭಕ್ತರ ಕೈಬಿಟ್ಟಿಲ್ಲ ಅನ್ನುವುದು ಅಷ್ಟೆ ಸತ್ಯ.
ಸ್ಥಳ;ಕರಡ ಗ್ರಾಮದಿಂದ ಕಾಡಿನ ನಡುವೆ ನಡೆದು ಇಲ್ಲಿಗೆ ತಲುಪಬಹುದು. ಜೀಪು, ಕಾರು ಮತ್ತು ಬೈಕ್ಗಳ ಮೂಲಕ ಬೆಟ್ಟದ ಮೇಲ್ಭಾಗದವರೆಗೂ ಹೋಗಬಹುದು.
ವೀರಾಜಪೇಟೆಯಿಂದ ಸುಮಾರು ೧೪ ಕಿ.ಮೀ. ಕ್ರಮಿಸಿದರೆ ಕರಡ ಗ್ರಾಮವಿದೆ. ಇಲ್ಲಿಂದ ೪ ಕಿಮಿ. ಸಾಗಿದರೆ ಬೆಟ್ಟದ ತುದಿಯಲ್ಲಿ ದೇವರ ಸ್ಥಾನವಿದೆ.
ಇತಿಹಾಸ ಹಾಗೂ ನಂಬಿಕೆ;
ಇತಿಹಾಸದ ಪ್ರಕಾರ ಪಾಂಡವರು ವನವಾಸದ ಸಮಯದಲ್ಲಿ ಇಲ್ಲಿ ಪೂಜೆ ಸಲ್ಲಿಸಿದ್ದರು ಎಂಬ ಪ್ರತೀತಿ ಇದೆ. ಹಗಲಿನ ವೇಳೆ ದೇವರ ದರ್ಶನ ಪಡೆಯಲು ಅವಕಾಶವಿದೆ.
ಕೆಲವರು ಹೇಳುವ ಪ್ರಕಾರ ಕೊಡಗು-ಕೇರಳಗಡಿ ಭಾಗದಲ್ಲಿರುವ ಚೋಮಕುಂದ್ನಲ್ಲಿ ಕೊಡಗಿನ ಕುಲದೇವರು ಸೃಷ್ಟಿಯಾಗುವ ಮೊದಲೇ ಈ ನೆಲೆಯಲ್ಲಿ ಐದು ಕರಿಕಲ್ಲುಗಳು ಉದ್ಭವವಾಯಿತಂತೆ. ಪಂಚಪಾಂಡವರು ಮಾಹಾದೇವರನ್ನು ಪೂಜೆ ಸಲ್ಲಿಸಲು ಈ ಐದು ಲಿಂಗವನ್ನು ಪ್ರತಿಷ್ಠಾಪಿಸಿ ಲಿಂಗಕ್ಕೆ ಅಭಿಷೇಕ ಮಾಡಲು ದೇವನೆಲೆಯ ಪಕ್ಕದ ಬಾಣಬಿಟ್ಟ ಜಾಗದಲ್ಲಿ ೫ ಕೆರೆಯನ್ನು ನಿರ್ಮಿಸಿ ಅಭಿಷೇಕ ಮಾಡುತ್ತಿದ್ದ ಬಗ್ಗೆಯೂ ಪ್ರತೀತಿ ಇದೆ. ಹರಕೆಯಾಗಿ ಒಪ್ಪಿಸಿದ ಮಣ್ಣಿನ ಬೇಟೆ ನಾಯಿಯ ರೂಪಗಳು, ಗಂಟೆಗಳು ಈ ದೇವನೆಲೆಯಲ್ಲಿ ಹೇರಳವಾಗಿ ಕಂಡುಬರುತ್ತಿವೆ.
ಮತ್ತೊಂದು ಪುರಾತನ ಕಥೆಯಂತೆ ಪೂಜೆಗೆ ತಡವಾಗಿ ಬಂದ ಕೇರಳದ ಕಾಳೆಘಾಟ್ ತಂತ್ರಿ ಅಸಮಾಧಾನಗೊಂಡು ದೇವರನ್ನು ತನ್ನ ಶಂಖದಲ್ಲಿ ತೆಗೆದುಕೊಂಡ ಬಗ್ಗೆ ಮತ್ತೊಂದು ಪುರಾಣ ಕಥೆ ಹೇಳುತ್ತದೆ.
ಮಲೆತಿರಿಕೆ;
ಮಲೆ ಎಂದರೆ ಬೆಟ್ಟದ ತಪ್ಪಲು, ತಿರಿಕೆ ಎಂದರೆ ದೇವನೆಲೆ. ಆದ್ದರಿಂದಲೇ ಈ ನೆಲೆಯನ್ನು ಮಲೆತಿರಿಕೆ ಎಂದೇ ಕರೆಯಲಾಗುತ್ತಿದೆ. ಕೊಡಗಿನಲ್ಲಿ ಎರಡು ಮಲೆತಿರಿಕೆ ದೇವಾಲಯವಿದೆ. ಇನ್ನೊಂದು ವಿರಾಜಪೇಟೆಯ ಮಗ್ಗುಲದಲ್ಲಿರುವ ಮಲೆತಿರಿಕೆ.
ವಾರ್ಷಿಕ ಹಬ್ಬ;
ಬಹಳಷ್ಟು ಪುರಾಣ, ಇತಿಹಾಸ, ಶಕ್ತಿ ದೇವರೆನಿಸಿದ ಈಶ್ವರ ಸ್ಥಾನದಲ್ಲಿ ವಾರ್ಷಿಕೋತ್ಸವ ಜರುಗುತ್ತಿದ್ದು ಮಾರ್ಚ್ ೧ ರಿಂದ ಊರಿನವರು ದೇವರ ಸನ್ನಿಧಿಯಲ್ಲಿ ದೇವತಕ್ಕ ಮುಖ್ಯಸ್ಥರ ಸಮ್ಮುಖದಲ್ಲಿ ಸಂಪ್ರದಾಯದಂತೆ ಹಬ್ಬಕ್ಕೆ ಕಟ್ಟು ಬಿದ್ದಿದೆ. ಅಂದು ದೇವಾಲಯದ ಶುದ್ಧ ಕಾರ್ಯ, ಕೆರೆಯ ಶದ್ಧೀಕಾರ್ಯ ನಡೆದಿದೆ.ಮಾ.೫ರಂದು ಕುಯ್ಯಪೊರೆಗೆ ಹುಲ್ಲು ಹಾಕುವ ಶಾಸ್ತç ನಡೆದಿದೆ. ಮಾ.೧೨ರಂದು ಬನಕ್ಕೆ ತೆರಳುವುದು, ೧೩ ರಂದು ನೆಟ್ಟಿ ಪಾಯಿ ಚಪ್ಪರ, ೧೪ ರಂದು ದೊಡ್ಡ ಹಬ್ಬ ನಡೆಯಲಿದೆ.
ದೇವರೊಬ್ಬ, ನಾಮ ಹಲವು
ಮಲೆತಿರಿಕೆ ಶಾಸ್ತಾವುವನ್ನು ಮಲೆತಂಬ್ರಾನ್ ಎಂದೂ, ಜೊತೆಗೆ ಬೆಟ್ಟ ಸಾಲುಗಳಲ್ಲಿರುವ ತುಂಬೆ ಹೂವಿನ ಪ್ರಿಯವಾದರಿಂದ ತುಂಬೆಮಲೆ ದೇವಯ್ಯನೆಂದು ಕರೆಯುತ್ತಾರೆ.ಈ ವಿಶೇಷ ನೆಲೆಯಲ್ಲಿ ಒಂದು ರಾತ್ರಿಯೊಳಗೆ ದೇವಾಲಯ ನಿರ್ಮಾಣ ಆಗಲೇಬೇಕೆಂಬ ನಿಯಮವಾದ್ದರಿಂದ ಅಂದಿನಿಂದ ಇಂದಿನವರೆಗೂ ದೇವಾಲಯ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ.
ದೇವಾಲಯ ಹೊರತುಪಡಿಸಿ ಸುತ್ತಮುತ್ತಲು ಮೂಲಭೂತ ಸೌಕರ್ಯಗಳನ್ನು ಒದಗಿಸಿ ದೇವಾಲಯದ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ.
ಸಂಪ್ರದಾಯ;
ಇಲ್ಲಿನ ಸಂಪ್ರದಾಯದಂತೆ ವಾರ್ಷಿಕೋತ್ಸವದ ಮುಂಚಿತವಾಗಿ ತಂದಂತಹ ಮಣ್ಣಿನ ಕುಯ್ಯಮಡಿಕೆಯನ್ನು ಉತ್ಸವದ ಬೆಳಗಿನ ಜಾವ ಆ ವರ್ಷದ ಕುಯ್ಯತೆರಿಗೆಯ ಕುಟುಂಬದವರು ಮಡಕೆಯಲ್ಲಿ ದೇವಾಲಯದ ಸಮೀಪ ಕುಯ್ಯಕ್ಕಿಕೂಳ್ (ಅನ್ನ), ಚೆಕ್ಕೆಪಾರ (ಹಲಸಿನ ಹಣ್ಣಿನ ಉಪ್ಪಿನಕಾಯಿ), ಚಪ್ಪಲೆಪುಟ್ಟ್ ಮಾಡಿ ದೇವರ ಸನ್ನಿಧಿಯಲ್ಲಿ ಅರ್ಪಿಸಿದ ನಂತರವೇ ಉತ್ಸವಕ್ಕೆ ಬರುವ ಎಲ್ಲಾ ಭಕ್ತಾದಿಗಳಿಗೆ ನೀಡುವ ಸಂಪ್ರದಾಯ ಇಲ್ಲಿನ ವಿಶೇಷವಾಗಿದೆ.
ಹಿಂದೆ ಪಾಂಡವರು ವನವಾಸದಲ್ಲಿದ್ದಾಗ ಈ ದೇವಾಲಯದ ಸಮೀಪವೇ ಅಡುಗೆ ಮಾಡಿ ಭೋಜನ ಮಾಡುತ್ತಿದ್ದ ಬಗ್ಗೆ ಪ್ರತೀತಿ ಇಂದು ನಡೆದು ಬರುತ್ತಿದೆ.
ದೊಡ್ಡ ಹಬ್ಬ;
ಮಾ. ೧೪ ರ ಬೆಳಗ್ಗಿನ ಜಾವ ೪ ಗಂಟೆಗೆ ಪಟ್ರಪಂಡ ಕುಟುಂಬದಿಂದ ಜೋಡೆತ್ತು ಪೋರಾಟವನ್ನು ದೇವಾಲಯಕ್ಕೆ ಒಪ್ಪಿಸಿದ ನಂತರ ನಾಡಿನವರು ಎತ್ತು ಪೋರಾಟವನ್ನು ದೇವರಿಗೆ ಅರ್ಪಿಸುವರು. ಕರಡದ ಭಗವತಿ ದೇವಾಲಯದಿಂದ ದೇವರ ಭಂಡಾರವನ್ನು ತಂದು ದೇವರ ಸನ್ನಿಧಿಯಲ್ಲಿ ಇಡಲಾಗುವುದು. ಊರಿನ ಹಿರಿಯರು ದುಡಿಕೊಟ್ಟ್ ಹಾಡನ್ನು ಹಾಡುವ ಮೂಲಕ ದೇವರನ್ನು ಕೊಂಡಾಡುವರು.
೧೪ ರಂದು ಮಧ್ಯಾಹ್ನ ೧೨ ಗಂಟೆಗೆ ವಿಶೇಷ ಅಲಂಕೃತ ದೇವನೆಲೆಯಲ್ಲಿ ವಿಶೇಷ ಮಹಾಪೂಜೆ ನೆರವೇರಿಸುವರು. ಆ ಸಂದರ್ಭದಲ್ಲಿ ಹಲವರಿಗೆ ದೇವರು ಮೈಯಿಗೆ ಬರುವ ಮೂಲಕ ಅನುವಾದ ನೀಡುವರು. ನೆರೆದಿದ್ದ ಊರಿನವರು, ಭಕ್ತಾದಿಗಳು ಹರಕೆ ಭಂಡಾರವನ್ನು ಒಪ್ಪಿಸಿ ತೀರ್ಥ ಪ್ರಸಾದವನ್ನು ಪಡೆಯುವರು. ನೆರೆದ ಭಕ್ತಾಧಿಗಳಿಗೆ ಎಲ್ಲರಿಗೂ ಪಾಯಸವನ್ನು ನೀಡಲಾಗುತ್ತದೆ.ಸಂಜೆ ಭಂಡಾರದ ಲೆಕ್ಕಾಚಾರ ಮುಗಿದ ನಂತರ ದೇವ ಭಂಡಾರವನ್ನು ಕರಡ ಭಗವತಿ ನೆಲೆಯಲ್ಲಿ ಒಪ್ಪಿಸುವ ಮೂಲಕ ಉತ್ಸವಕ್ಕೆ ತೆರೆ ಎಳೆಯಲಾಗುತ್ತದೆ.
ಸೂಚನೆ;
ಇದು ಅಪಾರ ಶಕ್ತಿ ಹೊಂದಿರುವ ಈಶ್ವರನ ನೆಲೆಯಾಗಿದೆಯೇ ಹೊರತು ಯಾವುದೇ ಮೋಜು ಮಸ್ತಿಗಳ ತಾಣವಲ್ಲ. ಪ್ರವಾಸಿ ತಾಣವೂ ಅಲ್ಲ. ಯಾರೇ ಅಲ್ಲಿಗೆ ತೆರಳುವುದಿದ್ದರೂ ಭಕ್ತಿಯಿಂದ, ನಂಬಿಕೆಯಿಂದ ತೆರಳಬೇಕಿದೆ. ಧಾರ್ಮಿಕ, ಶ್ರದ್ದಾಭಕ್ತಿಯ ತಾಣವಾದ ಮಲೆತಿರಿಕೆಯ ಮಲೆತಂಬ್ರಾನ್, ಈಶ್ವರನ ಪಾವಿತ್ರ್ಯತೆಯನ್ನು ಎಲ್ಲರೂ ಕಾಪಾಡಿಕೊಳ್ಳೋಣ.
ವಿಶೇಷ ವರದಿ:ರಜಿತ ಕಾರ್ಯಪ್ಪ ವಿರಾಜಪೇಟೆ