ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಕ್ಷೇಮಾಭಿವೃದ್ಧಿ ಸಂಘದಿಂದ ನೀಡಲಾಗುತ್ತಿದ್ದ ಮರಣ ನಿಧಿಯ ಮೊತ್ತ ರೂ.5ಸಾವಿರ ರೂ.10 ಸಾವಿರಕ್ಕೆ ಏರಿಕೆ
ಮಡಿಕೇರಿ ಫೆ.೧೯ : ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಕ್ಷೇಮಾಭಿವೃದ್ಧಿ ಸಂಘದಿಂದ ನೀಡಲಾಗುತ್ತಿದ್ದ ಮರಣ ನಿಧಿಯ ಮೊತ್ತ ರೂ.೫ ಸಾವಿರವನ್ನು ರೂ.೧೦ ಸಾವಿರಕ್ಕೆ ಏರಿಕೆ ಮಾಡಲಾಗಿದ್ದು, ಸದಸ್ಯರು ಇದರ ಲಾಭ ಪಡೆದುಕೊಳ್ಳುವಂತೆ ಸಂಘದ ಉಪಾಧ್ಯಕ್ಷ ಚೊಕ್ಕಾಡಿ ಎನ್.ಅಪ್ಪಯ್ಯ ಮನವಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ೨೦ ವರ್ಷಗಳಿಂದ ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಕ್ಷೇಮಾಭಿವೃದ್ಧಿ ಸಂಘವು ನಿವೃತ್ತ ಪೊಲೀಸರ ಯೋಗಕ್ಷೇಮಕ್ಕೆ ಬದ್ಧವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಸದಸ್ಯರು ಮರಣ ಹೊಂದಿದಾಗ ಮೃತರ ಕುಟುಂಬಕ್ಕೆ ಸಂಘವು ಮರಣ ನಿಧಿಯ ಮೂಲಕ ರೂ.೫ ಸಾವಿರವನ್ನು ಅಂತ್ಯಕ್ರಿಯೆಯ ಸಂದರ್ಭ ನೀಡುತ್ತಿದೆ.
ಈಗ ಇರುವ ರೂ.೫ ಸಾವಿರದ ಮೊತ್ತವನ್ನು ೧೦ ಸಾವಿರಕ್ಕೆ ಏರಿಕೆ ಮಾಡಲು ಸಂಘ ನಿರ್ಧರಿಸಿದೆ. ಏರಿಕೆಯಾದ ಮೊತ್ತವನ್ನು ೨೦೨೭ ಜನವರಿ ೨೭ ರ ನಂತರ ಮರಣ ಹೊಂದುವ ಸದಸ್ಯರ ಕುಟುಂಬಕ್ಕೆ ನೀಡುವ ನಿಯಮವನ್ನು ಜಾರಿಗೆ ತರಲಾಗುವುದು ಎಂದರು. ಈ ಹಿಂದೆ ಮರಣ ನಿಧಿಯಲ್ಲಿ ಪಡೆದ ಸದಸ್ಯತ್ವಕ್ಕೆ ರೂ.೫ ಸಾವಿರವನ್ನು ನೀಡಲಾಗುತ್ತಿತ್ತು. ಇದೀಗ ಮರಣ ನಿಧಿ ಮೊತ್ತದ ಏರಿಕೆಗೆ ಅನುಗುಣವಾಗಿ ಮತ್ತೊಮ್ಮೆ ಸದಸ್ಯತ್ವ ಪಡೆಯಲು ನಿವೃತ್ತ ಪೊಲೀಸರು ತಲಾ ರೂ.೧ ಸಾವಿರ ಜೀವಮಾನ ಶುಲ್ಕವನ್ನು ಪಾವತಿಸಬೇಕು.
ಪತಿ ಹಾಗೂ ಪತ್ನಿ ತಲಾ ರೂ.೧ ಸಾವಿರ ನೀಡಿ ಸದಸ್ಯತ್ವ ಪಡೆಯಬೇಕು. ಪತಿ ಅಥವಾ ಪತ್ನಿ ಇವರಿಬ್ಬರಲ್ಲಿ ಒಬ್ಬರು ಮಾತ್ರ ಇದ್ದರೆ ರೂ.೧ ಸಾವಿರ ಪಾವತಿಸಿ ಸದಸ್ಯತ್ವ ಪಡೆಯಬೇಕು. ಮರಣ ನಿಧಿಯ ಲಾಭವನ್ನು ಪತಿ ಹಾಗೂ ಪತ್ನಿ ಇಬ್ಬರಿಗೂ ರೂ.೧೦ ಸಾವಿರದಂತೆ ನೀಡಲಾಗುವುದು. ಆದ್ದರಿಂದ ಸದಸ್ಯತ್ವ ಪಡೆಯುವ ಮೂಲಕ ಮರಣ ನಿಧಿಯ ಲಾಭ ಪಡೆದುಕೊಳ್ಳುವಂತೆ ಕೋರಿದರು. ೨೦೨೭ ಜನವರಿ ೨೭ ರೊಳಗೆ ಸದಸ್ಯರು ಮರಣ ಹೊಂದಿದರೆ ಈ ಹಿಂದಿನ ನಿಯಮದಂತೆ ರೂ.೫ ಸಾವಿರವನ್ನು ಮೃತರ ಕುಟುಂಬಕ್ಕೆ ನೀಡಲಾಗುವುದು ಮತ್ತು ಹೊಸದಾಗಿ ಪಾವತಿಸಿರುವ ಸದಸ್ಯತ್ವ ಶುಲ್ಕ ರೂ.೧ ಸಾವಿರವನ್ನು ಹಿಂದಿರುಗಿಸಲಾಗುವುದು.
ಈ ಕುರಿತು ಸಂಘದ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು. ಪ್ರತಿ ವರ್ಷ ಮಾರ್ಚ್ ೩೧ ರೊಳಗೆ ಆರೋಗ್ಯ ಭಾಗ್ಯ ವಿಮಾ ಶುಲ್ಕವನ್ನು ಪಾವತಿಸುವ ಮೂಲಕ ಸದಸ್ಯರು ಆರೋಗ್ಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಚೊಕ್ಕಾಡಿ ಎನ್.ಅಪ್ಪಯ್ಯ ತಿಳಿಸಿದರು. ಸಂಘದ ಕಾರ್ಯದರ್ಶಿ ಕಾವೇರಪ್ಪ ಎಂ.ಕೆ ಮಾತನಾಡಿ ಸಂಘದಲ್ಲಿ ೧೦೫೦ ಸದಸ್ಯರಿದ್ದು, ಮರಣ ನಿಧಿಯ ಮೊತ್ತವನ್ನು ೧೦ ಸಾವಿರಕ್ಕೆ ಏರಿಕೆ ಮಾಡಿರುವ ಕ್ರಮವನ್ನು ೯೦೦ ಕ್ಕೂ ಅಧಿಕ ಸದಸ್ಯರು ಒಪ್ಪಿಕೊಂಡಿದ್ದಾರೆ. ಈ ಯೋಜನೆಯ ಸದುಪಯೋಗಕ್ಕಾಗಿ ಈಗಾಗಲೇ ಸುಮಾರು ೨೦೦ ಸದಸ್ಯರು ತಲಾ ರೂ.೧ ಸಾವಿರ ಪಾವತಿಸಿ ಸದಸ್ಯತ್ವ ಪಡೆದುಕೊಂಡಿದ್ದಾರೆ.
ಮರಣ ನಿಧಿಗಾಗಿ ಸದಸ್ಯತ್ವ ಪಡೆಯಲು ಆಸಕ್ತಿ ಇರುವವರು ಜೂ.೩೦ ರೊಳಗೆ ಹೆಸರು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು. ಆಸಕ್ತರು ಮೊ.ಸಂ ೯೪೪೮೫೮೭೯೭೫ ನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು. ೨೦೨೭ ಜನವರಿ ೨೭ ರೊಳಗೆ ಮರಣ ಹೊಂದಿದವರಿಗೂ ರೂ.೧೦ ಸಾವಿರ ನೀಡಬೇಕೆ ಎನ್ನುವ ಬಗ್ಗೆ ಸಂಘದ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರುಗಳಾದ ಕೆ.ವೈ.ಹಮೀದ್ ಹಾಗೂ ಎನ್.ಎ.ಜಗದೀಶ್ ಉಪಸ್ಥಿತರಿದ್ದರು.