ಪ್ರೀತಿಸಿ ಮದುವೆಯಾದ್ದಕ್ಕೆ ಯುವಕನ ತಾಯಿಗೆ ಬೆಂಕಿ ಹಚ್ಚಿದ ಯವಕನ ಕುಟುಂಬ!
ಬಾಗೇಪಳ್ಳಿ:ಪ್ರೀತಿಸಿ ಓಡಿ ಹೋಗಿ ಮದುವೆಯಾಗಿದ್ದಕ್ಕೆ ಯುವಕನ ತಾಯಿಗೆ ಬೆಂಕಿ ಹಚ್ಚಿದ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಳ್ಳಿ ತಾಲ್ಲೂಕಿನ ಸಂಗಟಪಳ್ಳಿ ಗ್ರಾಮದಲ್ಲಿ ನಡೆದಿದೆ.
ಸಂಗಟಪಳ್ಳಿಯ ಅಂಬರೀಶ್ ಹಾಗೂ ಸಿಂಗಪ್ಪಗಾರಿಪಳ್ಳಿಯ ಪ್ರತಿಭಾ ಪರಸ್ಪರ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಪ್ರತಿಭಾಳ ಮನೆಯವರು ಈ ಸಂಬಂಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅವರ ವಿರೋಧದ ನಡುವೆಯೇ ಇಬ್ಬರೂ ಓಡಿ ಹೋಗಿ ದೇವಸ್ಥಾನವೊಂದರಲ್ಲಿ ವಿವಾಹವಾಗಿ ಸಪ್ತಪದಿ ತುಳಿದರು.
ಈ ವಿಷಯ ತಿಳಿದ ಪ್ರತಿಭಾಳ ಪೋಷಕರು ರೊಚ್ಚಿಗೆದ್ದು ಅಂಬರೀಶನ ಮನೆಗೆ ದೌಡಾಯಿಸಿ ಗಲಾಟೆ ನಡೆಸಿದರು. ತಮ್ಮ ಮಗಳ ಬಟ್ಟೆ, ಪುಸ್ತಕಗಳನ್ನು ತಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾದಾಗ, ಅಂಬರೀಶನ ತಾಯಿ ಬಯ್ಯಮ್ಮ ಅಡ್ಡಹೋದರು. ಆಗ ಪ್ರತಿಭಾಳ ಕುಟುಂಬದವರು ಬಯ್ಯಮ್ಮ ಮೇಲೆಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರೆಂದು ತಿಳಿದುಬಂದಿದೆ.
ಈ ದಾಳಿಯಲ್ಲಿ ಬಯ್ಯಮ್ಮ ತೀವ್ರವಾಗಿ ಸುಟ್ಟು ಗಾಯಗೊಂಡಿದ್ದು, ಅವರನ್ನು ತಕ್ಷಣವಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಬಂಧ ಪಾತಪಾಳ್ಯ ಠಾಣೆ ಪೊಲೀಸರು ಪ್ರತಿಭಾಳ ಪೋಷಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ. ಪ್ರೀತಿ ವಿವಾಹದ ಹಿನ್ನಲೆಯಲ್ಲಿ ನಡೆದ ಈ ಘಟನೆ ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದೆ.