ಮೈಸೂರು ಮತ್ತು ಕುಶಾಲನಗರ ನಡುವೆ ರೈಲು ಮಾರ್ಗ ನಿರ್ಮಾಣ ಯೋಜನೆ ರದ್ದುಗೊಂಡಿದೆ.ಆದರೆ, ಸಂಸದರಾದ ಯದುವೀರ್ ಅವರು ರಾಜ್ಯ ಸರ್ಕಾರ ಭೂಸ್ವಾಧೀನ ಪಡಿಸಿಕೊಳ್ಳುವಲ್ಲಿ ವಿಳಂಬ ಮಾಡಿರುವುದು ಕಾರಣವೆಂದು ಜನರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ;ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್
ಮಡಿಕೇರಿ: ಮೈಸೂರು ಮತ್ತು ಕುಶಾಲನಗರ ನಡುವೆ ರೈಲು ಮಾರ್ಗ ನಿರ್ಮಾಣ ಯೋಜನೆ ರದ್ದುಗೊಂಡಿದೆ. ಆದರೆ, ಸಂಸದರಾದ ಯದುವಿರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರಾಜ್ಯ ಸರ್ಕಾರ ಭೂಸ್ವಾಧೀನ ಪಡಿಸಿಕೊಳ್ಳುವಲ್ಲಿ ವಿಳಂಬ ಮಾಡಿರುವುದು ಕಾರಣವೆಂದು ಜನರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೮-೧೯ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ನೈರುತ್ಯ ರೈಲ್ವೆಗೆ ಯೋಜನೆ ಆರಂಭಿಸಲು ಹಸಿರು ನಿಶಾನೆ ತೋರಿತ್ತು. ೧,೩೭೯ ಎಕರೆ ಭೂಸ್ವಾಧೀನ ಪಡೆಯುವ ಅಂದಾಜಿತ್ತು. ೨೦೨೨ರಲ್ಲಿ ಸಮೀಕ್ಷೆಯ ಅಂತಿಮ ಪ್ರಕ್ರಿಯೆ ಆರಂಭಗೊಂಡಿತ್ತು. ಅಲ್ಲದೆ, ೧೮೫೪ ಕೋಟಿ ಅಂದಾಜು ಮೊತ್ತವನ್ನು ಬಿಡುಗಡೆ ಮಾಡಿತ್ತು.
ಆದರೆ, ಹೆಚ್ಚಿನ ಅನುದಾನದ ಅವಶ್ಯಕತೆ ಮತ್ತು ದೀರ್ಘಾವಧಿಯಲ್ಲಿ ಲಾಭದಾಯಕವಲ್ಲ ಎಂಬ ಕಾರಣಕ್ಕೆ ರೈಲ್ವೆ ಇಲಾಖೆಯು ಈ ಯೋಜನೆಯನ್ನು ಕೈಬಿಟ್ಟಿದೆ. ಆದರೆ, ಸಂಸದ ಯದುವಿರ್ ಅವರು ಈ ಬಗ್ಗೆ ಮರುಪರಿಶೀಲನೆಗೆ ಮನವಿ ಮಾಡಲಾಗುವುದು ಎಂದು ಹೇಳುತ್ತಾರೆ. ಇತ್ತೀಚೆಗೆ ಸಂಸದರು ಕೂಡ ಸುಳ್ಳು ಹೇಳುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ ಎಂದ ಅವರು ಇದೇ ರೀತಿ ರೈಲು ಬಿಟ್ಟುಕೊಂಡೇ ಬಿಜೆಪಿ ಮೂರು ಚುನಾವಣೆ ಗೆದ್ದಿದೆ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು,ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಪಿ ಶಶಿಧರ್,ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ, ಪ್ರಮುಖರಾದ ಹೆಚ್.ಎಂ.ನಂದಕುಮಾರ್, ಸುರಯ್ಯ ಅಬ್ರಾರ್ ಇದ್ದರು.