ಈಜಲು ತೆರಳಿದ್ದ ಚೆನ್ನಮ್ಮ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಮೃತ್ಯು
ಮಡಿಕೇರಿ; ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸುಂಟಿಕೊಪ್ಪ ಸಮೀಪದ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದಾಪುರ ಹೊಳೆಯಲ್ಲಿ ಶನಿವಾರ ಮದ್ಯಾಹ್ನ ನಡೆದಿದೆ.
ಇಲ್ಲಿನ ಪಂಪ್ ಹೌಸ್ ನಿವಾಸಿ, ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎ.ಎಂ.ಶರೀಫ್ ಅವರ ಪುತ್ರ, ಮಾದಾಪುರ ಶ್ರೀಮತಿ ಡಿ ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಮಹಮ್ಮದ್ ರಾಹಿಜ್(16) ಹಾಗೂ ಪಂಪ್ ಹೌಸ್ ನಿವಾಸಿ ಸರ್ದಾರ್ ಅವರ ಪುತ್ರ ಮಾದಾಪುರ ಶ್ರೀಮತಿ ಡಿ ಚೆನ್ನಮ್ಮ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ನಿಹಾಲ್(16) ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಕಾಲೇಜು ಮುಗಿಸಿ ಮದ್ಯಾಹ್ನ 2 ಗಂಟೆಯ ಸುಮಾರಿಗೆ ಮನೆಗೆ ತೆರಳದ ಯುವಕರು ಹರದೂರು ಮಲ್ಲಿಕಾರ್ಜುನ ಕಾಲೋನಿಯಲ್ಲಿರುವ ಶ್ರೀ ಮಲ್ಲಿಕಾರ್ಜುನ ಮತ್ತು ಚಾಮುಂಡೇಶ್ವರಿ ದೇವಾಲಯದ ಬಳಿಯ ಮಾದಾಪುರ ಹೊಳೆ( ದೇವರ ಗುಂಡಿ)ಯಲ್ಲಿ ಈಜಲು ತೆರಳಿದ್ದಾರೆ.ಸರಿಯಾದ ಮಾಹಿತಿ ಇಲ್ಲದೇ ಹೊಳೆಗೆ ಇಳಿದ ಪರಿಣಾಮ ಸುಳಿಗೆ ಸಿಲುಕಿ ಇಬ್ಬರು ಯುವಕರು ಮೃತಪಟ್ಡಿದ್ದಾರೆ.
ಘಟನಾ ಸ್ಥಳಕ್ಕೆ ಸುಂಟಿಕೊಪ್ಪ ಪಿಎಸ್ ಐ ಮೋಹನ್ ರಾಜ್ ಹಾಗೂ ಸಿಬ್ಬಂದಿಗಳು ತೆರಳಿ ಸ್ಥಳೀಯ ಈಜು ತಜ್ಞರ ಸಹಾಯದಿಂದ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ನಂತರ ಮೃತದೇಹಗಳನ್ನು ಕುಶಾಲನಗರ ಸಮೂದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೆ ಬಳಿಕ ವಾರೀಸುದಾರರಿಗೆ ಒಪ್ಪಿಸಲಾಯಿತು.
ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.