ನಾಪೋಕ್ಲುವಿನ ವಿದ್ಯುತ್ ಉಪ ಕೇಂದ್ರಕ್ಕೆ ಅಗತ್ಯ ಸಿಬ್ಬಂದಿಗಳನ್ನು ತುರ್ತಾಗಿ ನೇಮಿಸಿ: ಅಸ್ಕರ್ ಸೇಟ್ ಒತ್ತಾಯ

ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು: ಗುಡ್ಡಗಾಡು ಪ್ರದೇಶ ಮತ್ತು ಅತೀ ಹೆಚ್ಚು ಮಳೆಯಾಗುವ ವ್ಯಾಪ್ತಿಯಾಗಿರುವ ನಾಪೋಕ್ಲುವಿನಲ್ಲಿರುವ, ವಿದ್ಯುತ್ ಉಪ ಕೇಂದ್ರದಲ್ಲಿ ಹಲವು ವರ್ಷಗಳಿಂದ ಸಿಬ್ಬಂದಿಗಳ ಕೊರತೆ ಇದ್ದು ಇದರಿಂದ ನಾಪೋಕ್ಲುವಿಭಾಗದ ಗ್ರಾಮಗಳ ನಿವಾಸಿಗಳು ನಿರಂತರ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದು ಕೂಡಲೆ ಸಂಬಂಧಪಟ್ಟ ಇಲಾಖೆಯವರು ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸ ಬೇಕೆಂದು ನಾಪೋಕ್ಲುವಿನ ಕಟ್ಟಡ ನಿರ್ಮಾಣ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಸ್ಕರ್ ಸೇಟ್ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅಸ್ಕರ್ ಮಳೆಗಾಲ ಬಂತೆಂದರೆ ನಾಪೋಕ್ಲು ವಿಭಾಗದ ಗ್ರಾಮಸ್ಥರು ಬೆಚ್ಚಿ ಬೀಳುವ ಪರಿಸ್ಥಿತಿ ಇದೆ. ಕಾರಣ ಅತಿ ಹೆಚ್ಚು ಮಳೆಯಿಂದ ಮರಗಳ ಕೊಂಬೆ ಮುರಿದು ಬಿದ್ದು ಹಾಗೂ ಗಾಳಿ ಮಳೆಯಿಂದ ವಿದ್ಯುತ್ ಕಂಬಗಳು ಪದೇ ಪದೇ ಧರೆಗುರುಳಿ ಬಿದ್ದು ಈ ವ್ಯಾಪ್ತಿಯ ನಿವಾಸಿಗಳು ಕತ್ತಲೆಯಲ್ಲಿ ಕಾಲ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಲ್ಲದೆ ಪಟ್ಟಣ ಸೇರಿದಂತೆ ವಿಭಾಗದಲ್ಲಿ ಅಂಗಡಿ ಮುಂಗಟ್ಟುಗಳನ್ನು ಇಟ್ಟ ವ್ಯಾಪಾರಿಗಳು ಕೂಡ ವಿದ್ಯುತ್ ಸಮಸ್ಯೆಯಿಂದ ನಷ್ಟವನ್ನು ಅನುಭವಿಸುವಂತಾಗಿದೆ.
ಇದಕ್ಕೆಲ್ಲ ಕಾರಣ ಸೆಸ್ಕ್ ಇಲಾಖೆಯ ನಾಪೋಕ್ಲು ಉಪ ಕೇಂದ್ರದಲ್ಲಿನ ಸಿಬ್ಬಂದಿಗಳ ಕೊರತೆಯಾಗಿದೆ.35 ಸಿಬ್ಬಂದಿಗಳು ಇರಬೇಕಾದಂತಹ ಈ ಉಪ ಕೇಂದ್ರದಲ್ಲಿ ಕೇವಲ 5 ಜನ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ಕೆಲವು ದಿನಗಳು ಮಾತ್ರ ಬೆರಣಿಕೆಯಷ್ಟು ಸಿಬ್ಬಂದಿಯನ್ನು ಇಲಾಖೆ ನೇಮಿಸುತ್ತಿದ್ದಾರೆ. ಮಳೆಗಾಲ ಸಂದರ್ಭದಲ್ಲಿ ಇಲ್ಲಿರುವ ಐದು ಜನ ಸಿಬ್ಬಂದಿಗಳೇ ನಾಪೋಕ್ಲು ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆಉಂಟಾದರೆ ತೆರಳ ಬೇಕಾಗಿದೆ.ತುರ್ತು ಸಂದರ್ಭದಲ್ಲಿ ತಾತ್ಕಾಲಿಕ ಬೆರಳಣಿಕೆ ಯಷ್ಟು ಸಿಬ್ಬಂದಿಗಳನ್ನು ನೇಮಿಸಿ ಇಲಾಖೆಯು ಜನರ ಕಣ್ಣೊರೆಸುವ ತಂತ್ರಮಾಡುತ್ತಿದ್ದಾರೆ ಎಂದು ಅಸ್ಕರ್ ಆರೋಪಿಸಿದ್ದಾರೆ. ಈ
ಹಿಂದೆ ಕೂಡ ಹಲವು ಬಾರಿ ಮನವಿ ಹಾಗೂ ಮಾಧ್ಯಮಗಳ ಮೂಲಕ ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸುವಂತೆ ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ.ಆದ್ದರಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇನ್ನಾದರು ಎಚ್ಚೆತ್ತುಕೊಂಡು ತುರ್ತಾಗಿ ನಾಪೋಕ್ಲು ವಿದ್ಯುತ್ ಉಪ ಕೇಂದ್ರಕ್ಕೆ ಶಾಶ್ವತ ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡಬೇಕೆಂದು ಅಸ್ಕರ್ ಸೇಟ್ ಒತ್ತಾಯಿಸಿದ್ದಾರೆ.
What's Your Reaction?






