ವಿಜಯಪುರ: ಚಡಚಣ SBI ದರೋಡೆ ಪ್ರಕರಣ ಭೇದಿಸಿದ ಪೊಲೀಸರು; ಮೂವರ ಬಂಧನ, 9 ಕೆ.ಜಿ. ಚಿನ್ನ, 86 ಲಕ್ಷ ರೂ. ನಗದು ವಶ
ವಿಜಯಪುರ, ಅ.09: ಚಡಚಣ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಕಳೆದ ತಿಂಗಳು ನಡೆದಿದ್ದ ದರೋಡೆ ಪ್ರಕರಣವನ್ನು ವಿಜಯಪುರ ಪೊಲೀಸರು ಭೇದಿಸಿದ್ದಾರೆ. ಬಿಹಾರ ಮೂಲದ ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು, ಅವರ ಬಳಿಯಿಂದ 9 ಕೆ.ಜಿ. ಚಿನ್ನಾಭರಣ ಹಾಗೂ 86 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ರಾಕೇಶ್ಕುಮಾರ್ ಸಹಾನಿ (22), ರಾಜಕುಮಾರ್ ಪಾಸ್ವಾನ್ (21) ಮತ್ತು ರಕ್ಷಕಕುಮಾರ್ ಮಾತೋ (21) ಎಂದು ಗುರುತಿಸಲಾಗಿದೆ. ಇವರು ಬ್ಯಾಂಕ್ ದರೋಡೆಕೋರರಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ಸೆಪ್ಟೆಂಬರ್ 16ರಂದು ಸಂಜೆ 6 ಗಂಟೆ ಸುಮಾರಿಗೆ ನಡೆದ ದರೋಡೆಯಲ್ಲಿ ಮೂವರು ಗನ್ ಹಿಡಿದು ಬ್ಯಾಂಕ್ಗೆ ನುಗ್ಗಿ, ಮ್ಯಾನೇಜರ್, ಸಿಬ್ಬಂದಿ ಹಾಗೂ ಗ್ರಾಹಕರನ್ನು ಕಟ್ಟಿಹಾಕಿ 20 ಕೆ.ಜಿ. ಚಿನ್ನಾಭರಣ ಮತ್ತು 1.50 ಕೋಟಿ ರೂ. ನಗದು ದೋಚಿ ಪರಾರಿಯಾಗಿದ್ದರು. ಮಹಾರಾಷ್ಟ್ರದ ಮಂಗಳವೇಡ ತಾಲೂಕಿನ ಹುಲಜಂತಿ ಬಳಿ ಕಾರು ಅಪಘಾತಕ್ಕೀಡಾದ ನಂತರ, ದರೋಡೆಕೋರರು ಸ್ಥಳೀಯರನ್ನು ಬೆದರಿಸಿ ವಾಹನ ಬಿಟ್ಟು ಪರಾರಿಯಾಗಿದ್ದರು. ಇದೀಗ 20 ಕೆ.ಜಿ. ಚಿನ್ನದ ಪೈಕಿ 9 ಕೆ.ಜಿ. ಮತ್ತು 1.50 ಕೋಟಿಯಿಂದ 86 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.