ವಿರಾಜಪೇಟೆ;ಮದುವೆ ಮಂಟಪದಲ್ಲೇ ಅಂತ್ಯ: ಸಂಬಂಧಿಕರ ಮದುವೆಗೆ ಬಂದ ವ್ಯಕ್ತಿ ಹೃದಯಾಘಾತದಿಂದ ಸಾವು
ವಿರಾಜಪೇಟೆ: ಸಂಬಂಧಿಕರ ಮದುವೆ ಸಂಭ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದ ವ್ಯಕ್ತಿಯೊಬ್ಬರು ಮದುವೆ ಮಂಟಪದಲ್ಲೇ ಹೃದಯಾಘಾತಕ್ಕೆ ತುತ್ತಾಗಿ ಮೃತಪಟ್ಟ ದುರಂತ ಘಟನೆ ವಿರಾಜಪೇಟೆ ನಗರ ಹೊರವಲಯದ ಬಿಟ್ಟಂಗಾಲದ ಕಲ್ಯಾಣ ಮಂಟಪದಲ್ಲಿ ನಡೆದಿದೆ.
ವಿರಾಜಪೇಟೆ ನಗರದ ತೆಲುಗರ ಬೀದಿ ನಿವಾಸಿ ದಿವಂಗತ ಈಶ್ವರ್ ರಾವ್ ಅವರ ಪುತ್ರ ಮೋಹನ್ ಕುಮಾರ್, 59 ವರ್ಷ ಹೃದಯಾಘಾತದಿಂದ ಮೃತರಾದ ವ್ಯಕ್ತಿ.
ವಿರಾಜಪೇಟೆ ನಗರದ ತೆಲುಗರ ಬೀದಿ ನಿವಾಸಿಯಾಗಿದ್ದ ಮೃತ ಮೋಹನ್ ಕುಮಾರ್ ಅವರು ವಿವಾಹಿತರಾಗಿದ್ದು, ಪತ್ನಿ ಮಮತಾ ಹಾಗೂ ಎರಡು ಹೆಣ್ಣು ಮಕ್ಕಳು ಹಾಗೂ ಓರ್ವ ಗಂಡು ಮಗನನ್ನು ಹೊಂದಿದ್ದಾರೆ.
ಜೂನ್ 13-06-2026 ಮತ್ತು 14 ರಂದು ಬಿಟ್ಟಂಗಾಲದ ಕಲ್ಯಾಣ ಮಂಟಪ ಒಂದರಲ್ಲಿ ಸಂಬಂಧಿಕರ ಮದುವೆ ಸಮಾರಂಭ ನಿಗದಿಗೊಳಿಸಲಾಗಿತ್ತು. ಮದುವೆ ಸಮಾರಂಭಕ್ಕೆ ಮೃತ ವ್ಯಕ್ತಿ ಮತ್ತು ಕುಟುಂಬ ಮದುವೆಗೆ ತೆರಳಿದ್ದರು. ಅಂದು ರಾತ್ರಿ ಮದುವೆ ಸಮಾರಂಭದಲ್ಲಿ ವ್ಯಕ್ತಿಯು ಅಲ್ಪ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡಿದ್ದರು ಎನ್ನಲಾಗಿದೆ. ಈ ಮಧ್ಯೆ ಮೃತರ ಕುಟುಂಬ ವರ್ಗವು ಮನೆಗೆ ತೆರಳಿದ್ದರು.
ಮುಂಜಾನೆ ಕಳೆದರೂ ಮನೆಗೆ ಬಾರದಿರುವ ಪತಿಗೆ ಹುಡುಕಾಟ ನಡೆಸಿದ ಕುಟುಂಬ ವರ್ಗ ಮದುವೆ ಮಂಟಪಕ್ಕೆ ತೆರಳಿದೆ. ಮಲಗಿರುವ ಭಂಗಿಯಲ್ಲಿ ಮೋಹನ್ ಅವರ ಮೃತದೇಹ ಪತ್ತೆಯಾಗಿದೆ. ತಕ್ಷಣವೇ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ವೈದ್ಯರಿಂದ ಪರೀಕ್ಷೆ ಮಾಡಿದರು.
ವೈದ್ಯರ ವರದಿಯಂತೆ ರಾತ್ರಿ ಮತ್ತು ಮುಂಜಾನೆಯ ಮಧ್ಯೆ ವ್ಯಕ್ತಿ ಅಸುನೀಗಿದ್ದಾರೆ ಎಂದು ದೃಢಪಡಿಸಿದ್ದಾರೆ. ಮೃತರ ಪತ್ನಿ ಮಮತಾ ನೀಡಿರುವ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

