ವಿರಾಜಪೇಟೆ;ಯುವಕನ ಕೊಲೆ ಪ್ರಕರಣ,ಮಹಿಳೆಗೆ ಜೀವಾವಧಿ ಶಿಕ್ಷೆ; 50ರ ಆಂಟಿಯೊಂದಿಗೆ ಆಟೋ ಚಾಲಕನಿಗೆ ಲವ್; 2021ರ ಫೆಬ್ರವರಿಯಲ್ಲಿ ನಡೆದದ್ದೇನು ಗೊತ್ತಾ!

ವಿರಾಜಪೇಟೆ;ಯುವಕನ ಕೊಲೆ ಪ್ರಕರಣ,ಮಹಿಳೆಗೆ ಜೀವಾವಧಿ ಶಿಕ್ಷೆ;  50ರ ಆಂಟಿಯೊಂದಿಗೆ ಆಟೋ ಚಾಲಕನಿಗೆ ಲವ್;  2021ರ ಫೆಬ್ರವರಿಯಲ್ಲಿ ನಡೆದದ್ದೇನು ಗೊತ್ತಾ!

ವೀರಾಜಪೇಟೆ, ಜ. 16: ಯುವಕನನ್ನು ಕೊಲೆಗೈದ ಮಹಿಳೆಗೆ ನ್ಯಾಯಾಲಯ ಜೀವಾವಧಿ ಶಿಕ್ಷೆಯೊಂದಿಗೆ ರೂ. 25 ಸಾವಿರ ದಂಡ ವಿಧಿಸಿದೆ. ವೀರಾಜಪೇಟೆಯ ಆರ್ಜಿ ಗ್ರಾಮದ ಕಲ್ಲುಬಾಣೆಯ ಬೇಬಿ (55) ಶಿಕ್ಷೆಗೆ ಗುರಿಯಾದ ಮಹಿಳೆ.

 2021ರ ಫೆಬ್ರವರಿ 23ರ ರಾತ್ರಿ ಯುವಕನೋರ್ವನನ್ನು ಬೇಬಿ ಹಾಗೂ ಫಜಲುದ್ದೀನ್ ಎಂಬವರು ಸೇರಿಕೊಂಡು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆದು ವೀರಾಜಪೇಟೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬೇಬಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇನ್ನೋರ್ವ ಆರೋಪಿ ಫಜಲುದ್ದೀನ್ ಮೃತಪಟ್ಟಿದ್ದಾನೆ.

 ಘಟನೆ ವಿವರ; ಕೇರಳ ರಾಜ್ಯದ ವಯನಾಡ್ ಜಿಲ್ಲೆಯ ಪುಲ್‌ಪಲ್ಲಿ ನಿವಾಸಿ ಶಿಂಟೋ ತಂಗಚ್ಚನ್‌ಗೆ (35) ವೀರಾಜಪೇಟೆಯ ಕಲ್ಲುಬಾಣೆಯ ಬೇಬಿಯ ಪರಿಚಯವಾಗಿತ್ತು. ಬಳಿಕ ಬೇಬಿಯ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದ ಶಿಂಟೋ ನಿರಂತರ ಸಂಪರ್ಕದಲ್ಲಿದ್ದ. ಬೇಬಿಯ ಪತಿ, ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದು, ಕಲ್ಲುಬಾಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮೃತ ಶಿಂಟೋ ಚಾಲಕ ವೃತ್ತಿ ಸೇರಿದಂತೆ ಕೂಲಿ ಕೆಲಸಗಳನ್ನು ಮಾಡುತ್ತಿದ್ದ. ಬೇಬಿಯ ಸಂಪರ್ಕವಾದ ಬಳಿಕ ಬೇಬಿಯ ಮನೆಗೆ ಬಂದು ಹೋಗುತ್ತಿದ್ದನು.

ಅಲ್ಲದೆ ಅಲ್ಲಿಯೇ ಆಶ್ರಯ ಪಡೆದು ಸುಮಾರು 9 ತಿಂಗಳುಗಳಿಂದ ವಾಸವಾಗಿದ್ದನು. ಈ ವೇಳೆ ಫಜಲುದ್ದೀನ್ ಎಂಬಾತನೊಂದಿಗೆ ಬೇಬಿಗೆ ಸ್ನೇಹ ಬೆಳೆದಿದೆ. ಇದನ್ನು ಸಹಿಸದ ಶಿಂಟೋ ಬೇಬಿ ಹಾಗೂ ಫಜಲುದ್ದೀನ್‌ನೊಂದಿಗೆ ಜಗಳ ಮಾಡಿದ್ದಾನೆ. 2021ರ ಫೆ.23ರ ರಾತ್ರಿ ಮೂವರ ಮಧ್ಯೆ ಜಗಳವಾಗಿದ್ದು, ಈ ವೇಳೆ ಶಿಂಟೋನನ್ನು ಇಬ್ಬರು ಸೇರಿ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಹತ್ಯೆ ಮಾಡಿದ್ದಾರೆ. ಬಳಿಕ ಫಜಲುದ್ದೀನ್ ಮನೆಗೆ ಹಿಂದಿರುಗುತ್ತಾನೆ.

ಮರುದಿನ ಯುವಕ ಮರಣ ಹೊಂದಿರುವ ಬಗ್ಗೆ ನಗರ ಪೊಲೀಸ್ ಠಾಣೆಗೆ ಮನೆ ಮಾಲೀಕರು ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ. ಕರೆಯ ಆಧಾರದ ಮೇಲೆ ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಮನೆಯ ಮಾಲೀಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೇಲ್ನೋಟಕ್ಕೆ ಆಕಸ್ಮಿಕ ಸಾವೆಂದು ತಿಳಿದು ಬಂದರೂ ಮೃತ ಶರೀರದ ಮೇಲಿರುವ ಗಾಯಗಳಿಂದ ಶಂಕೆ ವ್ಯಕ್ತಪಡಿಸಿದ್ದರು.

ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕೊಲೆ ಎಂದು ದೃಢಪಟ್ಟಿದೆ. ತನಿಖೆ ಕೈಗೊಂಡ ಸಂದರ್ಭ ಸತ್ಯಾಂಶ ಬಯಲಾಗಿದೆ. ತನಿಖೆ ನಡೆದು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಲಾಗಿತ್ತು.

ಕಲಂ 302 ರೆ/ವಿ 34ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು 25,000 ದಂಡ ವಿಧಿಸಲಾಗಿದ್ದು, ದಂಡವನ್ನು ಪಾವತಿಸಲು ತಪ್ಪಿದ್ದಲ್ಲಿ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ. ಕಲಂ 201 ಮತ್ತು 34ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಕ್ಕಾಗಿ 3 ವರ್ಷ ಸರಳ ಜೈಲು ಶಿಕ್ಷೆ, 5,000 ರೂ ದಂಡ ವಿಧಿಸಿದೆ. ದಂಡ ಪಾವತಿಸಲು ತಪ್ಪಿದ್ದಲ್ಲಿ 3 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದೆ. ಪ್ರಕರಣದ ವಿಚಾರಣೆಯನ್ನು ವೀರಾಜಪೇಟೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಸ್. ನಟರಾಜು ಅವರು ನಡೆಸಿದರು. ಸರಕಾರಿ ಅಭಿಯೋಜಕರಾದ ಯಾಸಿನ್ ಅಹಮ್ಮದ್ ವಾದ ಮಂಡಿಸಿದರು.