ಅಣ್ಣ ಬುದ್ದಿವಾದ ಹೇಳಿದ್ದೇ ತಪ್ಪಾಯಿತೇ?; ಮಧ್ಯರಾತ್ರಿ 1.30ಕ್ಕೆ ಮನೆಯಿಂದ ಹೊರಟ ಯುವತಿಯ ಮೃತದೇಹ ಕೆರೆಯಲ್ಲಿ ಪತ್ತೆ

ಅಣ್ಣ ಬುದ್ದಿವಾದ ಹೇಳಿದ್ದೇ ತಪ್ಪಾಯಿತೇ?; ಮಧ್ಯರಾತ್ರಿ 1.30ಕ್ಕೆ ಮನೆಯಿಂದ ಹೊರಟ ಯುವತಿಯ ಮೃತದೇಹ ಕೆರೆಯಲ್ಲಿ ಪತ್ತೆ
Photo credit: TV09 (ಫೋಟೋ:ಚಂದ್ರಿಕಾ)

ಗದಗ: ಶೈಕ್ಷಣಿಕ ಸಾಧನೆಯಲ್ಲಿ ಮುಂದಿದ್ದ 21 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಚಂದ್ರಿಕಾ ನಡುವಿನಮನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗದಲ್ಲಿ ನದೆದಿದೆ. ಭಾನುವಾರ ಮಧ್ಯರಾತ್ರಿ 1.30ರ ವೇಳೆಗೆ ಮನೆ ಬಿಟ್ಟಿದ್ದ ಚಂದ್ರಿ ಅವರ ಶವ ಬೆಳಗ್ಗೆ ಭೀಷ್ಮ ಕೆರೆಯಲ್ಲಿ ಪತ್ತೆಯಾಯಿತು.

ಬಾಗಲಕೋಟೆ ಜಿಲ್ಲೆಯ ಶಿರೂರಿನ ಮೂಲದ ಚಂದ್ರಿಕಾ, ಗದಗದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಪ್ರಥಮ ರ್ಯಾಂಕ್‌ ಗಳಿಸಿದ್ದ ಅವರಿಗೆ ಸರ್ಕಾರಿ ಕೋಟಾದಡಿ ಇಂಜಿನಿಯರಿಂಗ್ ಸೀಟ್ ದೊರೆತಿತ್ತು.

ಶನಿವಾರ ರಾತ್ರಿ ಅಣ್ಣ ಚೇತನ್ ಫೋನ್ ಮಾಡಿ, “ಇದು ಕೊನೆಯ ಸೆಮಿಸ್ಟರ್, ಚೆನ್ನಾಗಿ ಓದು. ಹಿಂದಿನ ಸೆಮಿಸ್ಟರ್ ಫಲಿತಾಂಶ ನಿರೀಕ್ಷೆಗೆ ಕಡಿಮೆ ಬಂದಿದೆ” ಎಂದು ಬುದ್ದಿವಾದ ಹೇಳಿದ್ದ ಎನ್ನಲಾಗಿದೆ. ಇತ್ತೀಚೆಗೆ ಸ್ನೇಹಿತೆಯರೊಂದಿಗೆ ಪ್ರವಾಸಕ್ಕೆ ಹೋಗಿದ್ದ ಚಂದ್ರಿಕೆಗೆ ಈ ಮಾತು ಹಿತವೆನಿಸಲಿಲ್ಲ ಎನ್ನಲಾಗಿದೆ. ಮನನೊಂದು ದುಡುಕಿನ ಹೆಜ್ಜೆಗೆ ಕಾರಣವಾಗಿರಬಹುದು ಎಂದು ಮನೆಯವರು ತಿಳಿಸಿದ್ದಾರೆ.

ಪ್ರತ್ಯೇಕ ಮನೆಯಲ್ಲಿ ಸ್ನೇಹಿತೆಯರ ಜೊತೆ ವಾಸಿಸುತ್ತಿದ್ದ ಚಂದ್ರಿಕಾ, ಶನಿವಾರ ರಾತ್ರಿ ಯಾರಿಗೂ ತಿಳಿಸದೆ ಮನೆಯಿಂದ ಹೊರಟಿದ್ದರು. ನಂತರ ಭೀಷ್ಮ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.

“ನನ್ನ ಮಾತು ಹೀಗೆ ಆಗಿಬಿಡುತ್ತದೆ ಎಂದು ಕನಸಲ್ಲಿಯೂ ಊಹಿಸಿರಲಿಲ್ಲ” ಎಂದು ಚಂದ್ರಿಕಾದ ಶವದ ಬಳಿ ಅಣ್ಣ ಚೇತನ್ ಅಳುತ್ತಿದ್ದ ದೃಶ್ಯ ಕಂಡು ಬಂತು. ಇನ್ನೇನು ಆರು ತಿಂಗಳು ಕಳೆದಿದ್ದರೆ ಚಂದ್ರಿಕಾ ಇಂಜಿನಿಯರಿಂಗ್‌ ಪದವಿ ಪೂರ್ಣಗೊಳಿಸುತ್ತಿದ್ದರು.

ಗದಗ ಟೌನ್‌ ಪೊಲೀಸ್‌ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.