ರಾತ್ರಿಯಾದರೆ ನಾಗಿಣಿಯಂತೆ ವರ್ತಿಸುವ ಹೆಂಡತಿ; ನನ್ನನ್ನು ಕಾಪಾಡಿ ಎಂದು ಡಿಸಿಗೆ ಮೊರೆಯಿಟ್ಟ ಪತಿ!

ರಾತ್ರಿಯಾದರೆ ನಾಗಿಣಿಯಂತೆ ವರ್ತಿಸುವ ಹೆಂಡತಿ; ನನ್ನನ್ನು ಕಾಪಾಡಿ ಎಂದು ಡಿಸಿಗೆ ಮೊರೆಯಿಟ್ಟ ಪತಿ!
Photo credit:Etv Bharath

ಸೀತಾಪುರ (ಉತ್ತರ ಪ್ರದೇಶ): ಜಿಲ್ಲೆಯ ಸಾರ್ವಜನಿಕ ಕುಂದುಕೊರತೆಗಳ ಪರಿಹಾರಕ್ಕಾಗಿ ಆಯೋಜಿಸಲಾದ ಸಮಾಧಾನ ದಿವಸ್ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರು ತಮ್ಮ ವಿಚಿತ್ರ ಸಮಸ್ಯೆಯನ್ನು ಜಿಲ್ಲಾಧಿಕಾರಿಯ ಮುಂದೆ ಪ್ರಸ್ತಾಪಿಸಿದ ಘಟನೆ ಸ್ಥಳೀಯ ಆಡಳಿತ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

 ಮಹ್ಮದಾಬಾದ್ ತಹಸಿಲ್‌ನ ಲೋಧಾಸಾ ಗ್ರಾಮದ ನಿವಾಸಿ ಮೆರಾಜ್ ಎಂಬಾತ ಅಕ್ಟೋಬರ್ 4 ರಂದು ನಡೆದ ಸಭೆಗೆ ಹಾಜರಾಗಿ, “ರಾತ್ರಿ ವೇಳೆ ನನ್ನ ಹೆಂಡತಿ ನಾಗಿಣಿಯಾಗಿ ಬದಲಾಗುತ್ತಾಳೆ. ಹಾವಿನಂತೆ ‘ಹಿಸ್‌ ಹಿಸ್‌’ ಎಂದು ಸದ್ದು ಮಾಡುತ್ತಾ ನನಗೆ ಭಯ ಹುಟ್ಟಿಸುತ್ತಾಳೆ. ಇಡೀ ರಾತ್ರಿ ನಿದ್ರೆ ಮಾಡಲು ಆಗುತ್ತಿಲ್ಲ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ದಯವಿಟ್ಟು ಸಹಾಯ ಮಾಡಿ” ಎಂದು ಜಿಲ್ಲಾಧಿಕಾರಿ ಅಭಿಷೇಕ್ ಆನಂದ್ ಅವರ ಮುಂದೆ ಅಳಲನ್ನು ತೋಡಿಕೊಂಡಿದ್ದಾನೆ.

ಮೆರಾಜ್ ಹೇಳುವ ಪ್ರಕಾರ, ತನ್ನ ಪತ್ನಿ ನಸಿಮನ್ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ರಾತ್ರಿ ವೇಳೆ ಅಸಹಜವಾಗಿ ವರ್ತಿಸುತ್ತಾಳೆ. ಸ್ಥಳೀಯ ಪೊಲೀಸರಿಗೂ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಆತ ಈಗ ಜಿಲ್ಲಾಡಳಿತದ ಮೊರೆ ಹೋಗಿದ್ದಾನೆ.

 ಈ ವಿಚಿತ್ರ ದೂರು ಕೇಳಿ ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಕ್ಷಣಕಾಲ ಬೆರಗಾದರು. ಆದರೆ ಜಿಲ್ಲಾಧಿಕಾರಿ ಆತನನ್ನು ಸಮಾಧಾನ ಪಡಿಸಿ, ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದರು.

ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ಪ್ರಾರಂಭಿಸಿರುವುದಾಗಿ ತಿಳಿಸಿದ್ದು, “ದೂರಿನ ನೈಜತೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.

ಈ ಘಟನೆ ಜಿಲ್ಲೆಯಾದ್ಯಂತ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದ್ದು, ಸಭೆಯಲ್ಲಿ ಹಾಜರಿದ್ದ ಜನರು “ಇಂತಹ ರೀತಿಯ ದೂರು ಮೊತ್ತಮೊದಲು ಕೇಳುತ್ತಿದ್ದೇವೆ” ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.