ಬಲ್ಲಮಾವಟಿ ಪೇರೂರು ಮಂಜಾಟ್ ಕಾಲೋನಿಯಲ್ಲಿ ಕಾಡಾನೆಗಳ ಹಾವಳಿ:ಆಟೋ ಹಾಗೂ ಬೈಕ್ ದ್ವಂಸ
ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರು ಗ್ರಾಮದ ಮಂಜಾಟ್ ಕಾಲೋನಿಯಲ್ಲಿ ಸೋಮವಾರ ಮುಂಜಾನೆ ಕಾಡಾನೆಗಳು ದಾಳಿ ನಡೆಸಿದ್ದು ಎರಡು ಆಟೋರಿಕ್ಷಾ ಹಾಗೂ ದ್ವಿಚಕ್ರವಾಹನವನ್ನು ತುಳಿದು ಹಾನಿಪಡಿಸಿದ ಘಟನೆ ನಡೆದಿದ್ದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ಪೇರೂರು ಗ್ರಾಮದ ಮಂಜಾಟ್ ಕಾಲೋನಿ ನಿವಾಸಿಗಳಾದ ಕೆ.ಕೆ.ಅರ್ಜುನ, ಕೆ.ಬಿ.ಪೂವಯ್ಯ ಎಂಬುವವರ ಮನೆಯ ಸಮೀಪದ ರಸ್ತೆಯಲ್ಲಿ ನಿಲ್ಲಿಸಿದ್ದ ಎರಡು ಆಟೋರಿಕ್ಷಾದ ಮೇಲೆ ಕಾಡನೆಗಳ ಹಿಂಡು ದಾಳಿ ನಡೆಸಿದ್ದು ಇದರಿಂದ ಹಾನಿ ಸಂಭವಿಸಿದೆ. ಅದರಂತೆ ಇದೆ ರಸ್ತೆಬದಿಯಲ್ಲಿ ಪೂಣಚ್ಚ ಎಂಬುವವರ ದ್ವಿಚಕ್ರವಾಹನವನ್ನು ಕೂಡ ತುಳಿದು ಹಾನಿಪಡಿಸಿದ್ದು ನಷ್ಟಸಂಭವಿಸಿದೆ.
ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು ಗ್ರಾಮದ ಬೆಳೆಗಾರರ ತೋಟಗಳಿಗೆ ಹಾಗೂ ಗದ್ದೆಗಳಿಗೆ ನಿರಂತರ ದಾಳಿನಡೆಸಿ ಕೃಷಿ ಗಿಡಗಳನ್ನು ಹಾನಿ ಪಡಿಸುತ್ತಿದ್ದು ಅಪಾರ ನಷ್ಟ ಸಂಭವಿಸುತ್ತಿದೆ ಎಂದು ಗ್ರಾಮದ ಬೆಳೆಗಾರರು ಬೇಸರ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ನಿರಂತರ ಕಾಡಾನೆಗಳ ಹಾವಳಿ ಯಿಂದ ಜನರು ಸಂಚರಿಸಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಹಾವಳಿ ನಡೆಸುತ್ತಿರುವ ಕಾಡಾನೆಗಳನ್ನು ಕಾಡಿಗಟ್ಟುವ ಅಥವಾ ಹಿಡಿದು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ಅದರಂತೆ ಕಾಡಾನೆ ದಾಳಿಯಿಂದ ನಷ್ಟ ಸಂಭವಿಸಿದವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.