ಬಸ್ ನಿಲ್ದಾಣದಲ್ಲಿ ಮಹಿಳೆಯರ ಚಿನ್ನಾಭರಣ, ಬ್ಯಾಗ್ ಕಳವು:ಮಡಿಕೇರಿ ಮೂಲದ ವ್ಯಕ್ತಿಯ ಬಂಧನ

ಬಸ್ ನಿಲ್ದಾಣದಲ್ಲಿ ಮಹಿಳೆಯರ ಚಿನ್ನಾಭರಣ, ಬ್ಯಾಗ್ ಕಳವು:ಮಡಿಕೇರಿ ಮೂಲದ ವ್ಯಕ್ತಿಯ ಬಂಧನ

ಕೋವರ್‌ ಕೊಲ್ಲಿ ಇಂದ್ರೇಶ್‌

ಮಂಗಳೂರು ; ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್‌ಗಳನ್ನೇ ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ ಅಂತರಜಿಲ್ಲಾ ಕಳ್ಳನೊಬ್ಬನನ್ನು ಮಂಗಳೂರಿನ ಬರ್ಕೆ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತನನ್ನು ಮಡಿಕೇರಿ ದಾಸವಾಳ ರಸ್ತೆ ನಿವಾಸಿ ಮಹಮ್ಮದ್ ಇಮ್ರಾನ್ (44) ಎಂದು ಗುರುತಿಸಲಾಗಿದೆ.

 ಈತನಿಂದ ಪೊಲೀಸರು 6,47,920 ರೂಪಾಯಿ ಮೌಲ್ಯದ 46.28 ಗ್ರಾಂ ಚಿನ್ನದ ಒಡವೆಗಳು ಹಾಗೂ 5,000 ರೂ. ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಅತ್ಯಂತ ಚಾಣಾಕ್ಷತನದಿಂದ ಕೃತ್ಯ ಎಸಗುವ ರೂಢಿಗತ ಕಳ್ಳನಾಗಿದ್ದಾನೆ. ಜನವರಿ 23ರಂದು ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬೆಂಗಳೂರಿಗೆ ತೆರಳಲು ಸಜ್ಜಾಗಿದ್ದ ಇಬ್ಬರು ವಯಸ್ಸಾದ ಮಹಿಳೆಯರು ಮತ್ತು ಹಿರಿಯ ನಾಗರಿಕರಿದ್ದ ತಂಡವನ್ನು ಈತ ಗಮನಿಸಿದ್ದ.

ಅವರು ಬಸ್ಸಿನಲ್ಲಿ ಕುಳಿತು ತಮ್ಮ ಟ್ರ್ಯಾಲಿ ಬ್ಯಾಗ್ ಅನ್ನು ಪಕ್ಕದಲ್ಲಿ ಇರಿಸಿದ್ದಾಗ, ಅವರ ಗಮನ ಬೇರೆಡೆ ಇದ್ದ ಸಮಯ ನೋಡಿ ಕ್ಷಣಾರ್ಧದಲ್ಲಿ ಬ್ಯಾಗ್ ಎಗರಿಸಿ ಪರಾರಿಯಾಗಿದ್ದ. ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರು ಮೈಮರೆತಾಗ ಅಥವಾ ಬಸ್ ಹತ್ತುವ ಧಾವಂತದಲ್ಲಿದ್ದಾಗ ಅವರ ಬೆಲೆಬಾಳುವ ಬ್ಯಾಗ್‌ಗಳನ್ನು ಎಗರಿಸುವುದೇ ಈತನ ಕೃತ್ಯದ ಪ್ರಮುಖ ಶೈಲಿಯಾಗಿದೆ.

ಅಲ್ಲದೆ ಈತನು ವಯಸ್ಸಾದ ಶ್ರೀಮಂತ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅವರು ದೂರದ ಊರುಗಳಿಗೆ ತೆರಳುವಾಗ ಅದೇ ಬಸ್‌ ಹತ್ತುತಿದ್ದ. ಮಧ್ಯದಲ್ಲಿ ಬಸ್‌ ಚಹಾ ವಿರಾಮಕ್ಕೆ ನಿಲ್ಲಿಸಿದಾಗ ಅವರು ವಾಷ್‌ ರೂಂ ಗೆ ತೆರಳುವುದನ್ನೇ ಕಾಯುತಿದ್ದ. ಅವರು ಬಸ್‌ ಇಳಿದು ವಾಷ್‌ ರೂಂ , ಹೋಟೆಲ್‌ ಗೆ ಹೋಗುತಿದ್ದಂತೆ ಅವರ ಲಗೇಜ್‌ ಎತ್ತಿಕೊಂಡು ಪರಾರಿ ಆಗುತಿದ್ದ ಎಂದು ಬರ್ಕೆ ಠಾಣೆ ಪಿಎಸ್‌ಐ ರವಿ ನಾಯಕ್‌ ತಿಳಿಸಿದ್ದಾರೆ.

ಬಂಧಿತ ಇಮ್ರಾನ್ ಕೇವಲ ಮಂಗಳೂರಿನಲ್ಲಿ ಮಾತ್ರವಲ್ಲದೆ ಹಾಸನ, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತನ್ನ ಕೃತ್ಯ ಮುಂದುವರಿಸಿದ್ದ. ಈತನ ಮೇಲೆ ಹಾಸನದ ವಿವಿಧ ಠಾಣೆಗಳಲ್ಲಿ 7, ಮೈಸೂರಿನಲ್ಲಿ 1 ಸೇರಿದಂತೆ ಒಟ್ಟು 11 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಬಸ್ ನಿಲ್ದಾಣದ ಬ್ಯಾಗ್ ಕಳ್ಳತನ ಮಾತ್ರವಲ್ಲದೆ ಮನೆಗಳ್ಳತನದ ಪ್ರಕರಣಗಳೂ ಸೇರಿವೆ.

ಈ ಹಿಂದೆ ಹಾಸನದಲ್ಲಿ ಮನೆಗಳ್ಳತನ ಪ್ರಕರಣದಲ್ಲಿ ಜಾಮೀನು ಪಡೆದು ಕೋರ್ಟ್‌ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಈತನ ವಿರುದ್ಧ ನ್ಯಾಯಾಲಯವು ವಾರೆಂಟ್ ಕೂಡ ಹೊರಡಿಸಿತ್ತು.

ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾರ್ಗದರ್ಶನದಲ್ಲಿ, ಎಸಿಪಿ ಕೇಂದ್ರ ಉಪವಿಭಾಗದ ಉಸ್ತುವಾರಿಯಲ್ಲಿ ಬರ್ಕೆ ಠಾಣಾ ಪಿಎಸ್ಐ ವಿನಾಯಕ ತೊರಗಲ್ ಮತ್ತು ಸಿಬ್ಬಂದಿಗಳಾದ ಸುಜನ್, ವಾಸುದೇವ, ರವಿ ಲಮಾಣಿ, ಸಿದ್ದು, ಹರೀಶ್, ನಿತಿಶ್ ಹಾಗೂ ಗಾಲಿಬ್ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿ ಅಂತರಜಿಲ್ಲಾ ಕಳ್ಳನನ್ನು ಸೆರೆಹಿಡಿದಿದೆ.