ಕುಶಾಲನಗರ : ಸಿಐಟಿಯು ಕಾರ್ಮಿಕ ಸಂಘಟನೆ ವತಿಯಿಂದ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

ಕುಶಾಲನಗರ : ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬುಧವಾರ ಪಟ್ಟಣದಲ್ಲಿ ಸಿಐಟಿಯು ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ವಿವಿಧ ಕಾರ್ಮಿಕ ಸಂಘಟನೆ ನೌಕರರು ಪ್ರತಿಭಟನೆ ನಡೆಸಿದರು.ಸಿಐಟಿಯು ಕಾರ್ಮಿಕ ಸಂಘಟನೆ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ನೂರಾರು ಕಾರ್ಮಿಕರು ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಜಮಾಯಿಸಿ ಮಳೆಯ ನಡುವೆಯೇ ಪ್ರತಿಭಟನೆ ನಡೆಸಿ ಕಾರ್ಮಿಕರನ್ನು ಗುಲಾಮಗಿರಿ ತಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ದಿಕ್ಕಾರ,ದಿಕ್ಕಾರ, ನಾಲ್ಕು ಕಾರ್ಮಿಕ ಸಹಿಂತೆಗಳನ್ನು ರದ್ದು ಪಡಿಸಬೇಕು ಎಂದು ಆಗ್ರಹಿಸಿದರು.
ಕಾರ್ಯಪ್ಪ ವೃತ್ತದಿಂದ ರಥಬೀದಿ ಮೂಲಕ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಮಿಕರು ತಹಶೀಲ್ದಾರ್ ಕಚೇರಿ ಮುಂದೆ ಕೂಡ ಕೆಲಕಾಲ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಅಂಗನವಾಡಿ, ಬಿಸಿಯೂಟ,ಆಶಾ ಮುಂತಾದ ನೌಕರರಿಗೆ ಕನಿಷ್ಠ ವೇತನ ಕಾಯ್ದೆ ಕಾರಿಯಾಗಬೇಕು.ಗುತ್ತಿಗೆ ಮುಂತಾದ ಕಾಯಂಯೇತರ ನೌಕರರ ಕಾಯಂಗೆ ಶಾಸನ ರೂಪಿಸಬೇಕು.
ಗುತ್ತಿಗೆ ನೌಕರರ ಮೇಲೆ ಆಗುತ್ತಿರುವ ಶೋಷಣೆ ತಡೆಯಬೇಕು.ಕೃಷಿ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಖಾತ್ರಿಪಡಿಸುವ ಶಾಸನ ರೂಪಿಸಬೇಕು.ಕೃಷಿ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಯಿಂದ ಹೊರಗಿಡಬೇಕು.ಫಲವತ್ತಾದ ಕೃಷಿ ಭೂಮಿಯ ಬಲವಂತದ ಭೂಸ್ವಾಧೀನ ನಿಲ್ಲಿಸಬೇಕು.ಅಸಂಘಟಿತ ಕಾರ್ಮಿಕರಿಗೆ ಭವಿಷ್ಯನಿಧಿ, ಪಿಂಚಣಿ, ಕನಿಷ್ಟ ವೇತನ, ಶಿಕ್ಷಣ ಸಹಾಯ, ವಸತಿ, ನಿವೃತ್ತಿ ಹಾಗೂ ಮರಣ ಪರಿಹಾರಗಳು ಸೇರಿದಂತೆ ಸಮಗ್ರ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಜಾರಿ ಮಾಡಬೇಕು.ಜೀವನ ಯೋಗ್ಯ ಕನಿಷ್ಟ ವೇತನ ಜೀವನ ರೂ. 36 ಸಾವಿರ ನಿಗಧಿಯಾಗಲಿ ಹಾಗೂ
ಸಾರ್ವತ್ರಿಕ ಪಿಂಚಣಿ ಜಾರಿಗೊಳಿಸಿ ಕನಿಷ್ಟ ರೂ. 8000 ಪಿಂಚಣಿ ನೀಡಬೇಕು ಎಂಬ ಬೇಡಿಕೆಯನ್ನು ಈಡೇರಿಸಲು ಒತ್ತಾಯಿಸಿ ತಹಶೀಲ್ದಾರ್ ಕಿರಣ್ ಗೌರಯ್ಯ ಅವರ ಮೂಲಕ ಕೇಂದ್ರ ಸರ್ಕಾರ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭ ಸಿಐಟಿಯು ಜಿಲ್ಲಾಧ್ಯಕ್ಷ ಪಿ.ಆರ್.ಪ್ರತಾಪ್,ಕರ್ನಾಟಕ ಪ್ರಾಂತ್ಯ ರೈತ ಸಂಘದ ಮುಖಂಡ ಟಿ.ಟಿ.ಉದಯಕುಮಾರ್, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮುನಾ,ತಾಲ್ಲೂಕು ಅಧ್ಯಕ್ಷೆ ಸಾವಿತ್ರಿ,ಕಾರ್ಯದರ್ಶಿ ಚಂದ್ರೀಕಾ,ಮಡಿಕೇರಿ ತಾಲ್ಲೂಕು ಅಧ್ಯಕ್ಷೆ ಯಶೋಧ,ಬಿಸಿ ಊಟ ನೌಕರರ ಸಂಘದ ಕುಶಾಲನಗರ ತಾಲ್ಲೂಕು ಅಧ್ಯಕ್ಷೆ ರಾಣಿ,ಮಡಿಕೇರಿ ತಾಲ್ಲೂಕು ಅಧ್ಯಕ್ಷೆ ಲಲಿತಾಮ್ಮ,ಆದಿವಾಸಿ ಮುಖಂಡ ರಘು,ಅಮಾಲಿ ಕಾರ್ಮಿಕ ಸಂಘಟನೆ ಗಿರೀಶ್, ಕಟ್ಟಡ ಕಾರ್ಮಿಕರ ಸಂಘದ ಯೋಗೇಶ್,ಪ್ಲಾಂಟೇಷನ್ ಸಂಘದ ಕೃಷ್ಣಕುಮಾರ್,ಸಿಐಟಿಯು ಜಯಣ್ಣ ಮತ್ತು ಮಂಜುನಾಥ್ ಇತರರು ಪಾಲ್ಗೊಂಡಿದ್ದರು.