ಸೋಮವಾರಪೇಟೆ: ಸರ್ಕಾರಿ ಆಸ್ಪತ್ರೆಯಲ್ಲಿ 1.60 ಕೋಟಿ ವೆಚ್ಚದಲ್ಲಿ ನವೀಕರಣ ಕಾಮಗಾರಿ

ಸೋಮವಾರಪೇಟೆ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಸಂಪೂರ್ಣ ಸುಸಜ್ಜಿತಗೊಂಡಿದ್ದು, ರೋಗಿಗಳಿಗೆ ಎಲ್ಲ ರೀತಿಯ ವೈದ್ಯಕೀಯ ಚಿಕಿತ್ಸೆ ಹಾಗೂ ಅಗತ್ಯ ಸೌಲಭ್ಯಗಳು ಲಭ್ಯವಿವೆ ಎಂದು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರು ತಿಳಿಸಿದ್ದಾರೆ.
ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸದಸ್ಯೆ ಮಂಜುಳಾ ಹರೀಶ್ ಅವರು, "ಪ್ರತಿ ಸೋಮವಾರ ಬೆಳಿಗ್ಗೆ 8 ರಿಂದ 9 ಗಂಟೆಯವರೆಗೆ ಆಸ್ಪತ್ರೆಯಲ್ಲಿ ವೈದ್ಯರು ಲಭ್ಯವಿದ್ದು, ರೋಗಿಗಳಿಗೆ ಎಲ್ಲಾ ಅಗತ್ಯ ಔಷಧಿ ಹಾಗೂ ಮಾತ್ರೆಗಳನ್ನು ಸ್ಥಳದಲ್ಲಿಯೇ ವಿತರಣೆ ಮಾಡಲಾಗುತ್ತಿದೆ," ಎಂದು ಹೇಳಿದರು.
ಆಸ್ಪತ್ರೆ ನವೀಕರಣ ಕೊನೆಯ ಹಂತದಲ್ಲಿ ಶಾಸಕ ಡಾ. ಮಂತರ್ ಘವಡ ಅವರು ರಕ್ಷಾ ಸಮಿತಿಯ ಅಧ್ಯಕ್ಷರಾಗಿದ್ದು, ಆಸ್ಪತ್ರೆಯನ್ನು ಇನ್ನಷ್ಟು ಸುಧಾರಿಸಲು ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಈಗಾಗಲೇ ರೂ. 1.60 ಕೋಟಿ ವೆಚ್ಚದಲ್ಲಿ ನವೀಕರಣ ಕಾಮಗಾರಿಗಳು ಅಂತಿಮ ಹಂತದಲ್ಲಿದ್ದು, 17 ಲಕ್ಷ ರೂ. ಮೌಲ್ಯದ ಔಷಧಿ, ಮಾತ್ರೆಗಳು ಹಾಗೂ ಹೈಟೆಕ್ ರಕ್ತ ಪರೀಕ್ಷಾ ಘಟಕಕ್ಕೆ ಅಗತ್ಯವಾದ ರಾಸಾಯನಿಕಗಳನ್ನು ಖರೀದಿ ಮಾಡಲಾಗಿದೆ.ರೋಗಿಗಳಿಗೆ ಎಲ್ಲಾ ರೀತಿಯ ಪರೀಕ್ಷೆಗಳು ಆಸ್ಪತ್ರೆಯಲ್ಲಿಯೇ ನಡೆಸಲಾಗುತ್ತಿದ್ದು, ಎಲ್ಲಾ ಔಷಧಿಗಳು ಲಭ್ಯವಿವೆ ಎಂದು ಅವರು ತಿಳಿಸಿದರು.
ವೈದ್ಯರ ತಂಡ ಮತ್ತು ವಿಶೇಷ ಸೇವೆಗಳು
ಆಸ್ಪತ್ರೆಯಲ್ಲಿ ಒಟ್ಟು 8 ಮಂದಿ ವೈದ್ಯರು ಸೇವೆ ನೀಡುತ್ತಿದ್ದಾರೆ. ಶೀಘ್ರದಲ್ಲೇ ಮಕ್ಕಳ ತಜ್ಞರ ಸೇವೆ ಲಭ್ಯವಾಗಲಿದೆ. ಶಸ್ತ್ರಚಿಕಿತ್ಸಕ, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ, ಇಎನ್ಟಿ ತಜ್ಞ, ಫಿಜಿಷಿಯನ್ ಹಾಗೂ ದಂತವೈದ್ಯರು ನಿಯಮಿತವಾಗಿ ಲಭ್ಯವಿದ್ದಾರೆ. ಕೀಲು ಮತ್ತು ಮೂಳೆ ತಜ್ಞರು ಸೋಮವಾರ, ಗುರುವಾರ, ಶನಿವಾರ ಮತ್ತು ಭಾನುವಾರದಂದು ಲಭ್ಯವಿದ್ದು, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ನೇತ್ರ ತಜ್ಞ, ಶ್ವಾಸಕೋಸ ತಜ್ಞ ಮತ್ತು ಮಕ್ಕಳ ತಜ್ಞರ ಸೇವೆ ಸೋಮವಾರದಂದು ದೊರೆಯುತ್ತದೆ.ವಾರದಲ್ಲಿ ಎರಡು ದಿನ ಅರವಳಿಗೆ ತಜ್ಞರು ಲಭ್ಯವಿದ್ದು, ಎಲ್ಲಾ ರೀತಿಯ ಶಸ್ತ್ರಚಿಕಿತ್ಸೆಗಳು ನಡೆಯುತ್ತವೆ ಎಂದು ತಿಳಿಸಿದರು.
ಡಯಾಲಿಸಿಸ್, ಕೋವಿಡ್ ಹಾಗೂ ಇತರ ಸೌಲಭ್ಯಗಳು
ಆಸ್ಪತ್ರೆಯ ಡಯಾಲಿಸಿಸ್ ಘಟಕದಲ್ಲಿ 6 ಯಂತ್ರಗಳು ಕಾರ್ಯನಿರ್ವಹಿಸುತ್ತಿದ್ದು, ತಿಂಗಳಿಗೆ ಸರಾಸರಿ 400 ಡಯಾಲಿಸಿಸ್ ಚಿಕಿತ್ಸೆ ನೀಡಲಾಗುತ್ತದೆ. 41 ರೋಗಿಗಳು ಸದಾ ಈ ಸೇವೆ ಪಡೆಯುತ್ತಿದ್ದಾರೆ ಎಂದು ಸಮಿತಿ ಸದಸ್ಯ ಕೆ.ಪಿ.ರವೀಶ್ ಮಾಹಿತಿ ನೀಡಿದರು.
ಕೋವಿಡ್ ಸೋಂಕಿಗೆ ಸಂಬಂಧಿಸಿದಂತೆ ಆಸ್ಪತ್ರೆಯಲ್ಲಿ ಕೋವಿಡ್ ವಾರ್ಡ್, ವೆಂಟಿಲೇಟರ್, ಆಕ್ಸಿಜನ್ ಕಾನ್ಸ್ಟ್ರೇಟರ್ ಸೇರಿದಂತೆ ಎಲ್ಲಾ ಅಗತ್ಯ ಸೌಲಭ್ಯಗಳು ಲಭ್ಯವಿವೆ. ಟಿ.ಬಿ. ಕಾಯಿಲೆ ಪತ್ತೆ ಹಚ್ಚಲು ಅತ್ಯಾಧುನಿಕ ಸಿಬಿ ನ್ಯಾಟ್ ಯಂತ್ರವನ್ನು ಬಳಸಲಾಗುತ್ತಿದೆ. ಅನಸ್ತೇಷಿಯಾ ವರ್ಕ್ ಸ್ಟೇಷನ್ ಸಹ Hospitals ನಲ್ಲಿ ಸಕ್ರಿಯವಾಗಿದೆ.ಸದ್ಯಕ್ಕೆ 3 ಅಂಬ್ಯುಲೆನ್ಸ್ ವಾಹನಗಳು ಲಭ್ಯವಿದ್ದು, ತುರ್ತು ಸಂದರ್ಭದಲ್ಲೂ ತಕ್ಷಣ ಸೇವೆ ಒದಗಿಸಲಾಗುತ್ತದೆ.
ಖಾಲಿ ಹುದ್ದೆಗಳ ಭರ್ತಿ ಶೀಘ್ರ
ಜೂನ್ 27 ರಂದು ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳ ಆಯ್ಕೆ ಕೌನ್ಸಿಲಿಂಗ್ ನಡೆಯಲಿದೆ. ಇದರೊಂದಿಗೆ ಸೋಮವಾರಪೇಟೆ ಆಸ್ಪತ್ರೆಯಲ್ಲಿನ ಖಾಲಿ ಹುದ್ದೆಗಳು ಭರ್ತಿಯಾಗಲಿದ್ದು, ಆರೋಗ್ಯ ಸೇವೆ ಇನ್ನಷ್ಟು ಬಲಪಡೆಯಲಿದೆ.ಗೋಷ್ಠಿಯಲ್ಲಿ ಎನ್.ಎನ್.ರಮೇಶ್, ಎಚ್.ಕೆ.ಲೋಕೇಶ್ ಮತ್ತು ಜೇಕಬ್ ಸೈಮನ್ ಉಪಸ್ಥಿತರಿದ್ದರು.