ಕೊಡಗು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ: ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಬೇಕಾದರೆ, ಸಾಮಾಜಿಕ ಜಾಲತಾಣದಲ್ಲಿ ಪತ್ರಿಕಾ ಮಾಧ್ಯಮ ಹಿಡಿತ ಸಾಧಿಸಬೇಕು: ಮೇಚಿರ ರವಿಶಂಕರ್ ನಾಣಯ್ಯ

Jun 8, 2025 - 17:15
Jun 8, 2025 - 20:08
 0  34
ಕೊಡಗು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ:   ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಬೇಕಾದರೆ, ಸಾಮಾಜಿಕ ಜಾಲತಾಣದಲ್ಲಿ ಪತ್ರಿಕಾ ಮಾಧ್ಯಮ ಹಿಡಿತ ಸಾಧಿಸಬೇಕು:  ಮೇಚಿರ ರವಿಶಂಕರ್ ನಾಣಯ್ಯ

ಮಡಿಕೇರಿ: ಇತ್ತೀಚಿನ ಕಾಲಘಟ್ಟದಲ್ಲಿ ಅತೀ ವೇಗವಾಗಿ ಹರಡುತ್ತಿರುವ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಬೇಕಾದರೆ, ಸಾಮಾಜಿಕ ಜಾಲತಾಣದಲ್ಲಿ ಪತ್ರಿಕಾ ಮಾಧ್ಯಮ ಹಿಡಿತ ಸಾಧಿಸುವ ಅನಿವಾರ್ಯತೆ ಇದೆ ಎಂದು ಕೊಡಗು ವಿಶ್ವವಿದ್ಯಾನಿಲಯದ ವಿಶೇಷ ಅಧಿಕಾರಿ(ಪರೀಕ್ಷಾಂಗ) ಮೇಚಿರ ರವಿಶಂಕರ್ ನಾಣಯ್ಯ ಅಭಿಪ್ರಾಯಪಟ್ಟರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಕೊಡಗು ಪ್ರೆಸ್‌ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಬದುಕಿನ ಮೌಲ್ಯಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿತ್ತು. ಬದಲಾದ ಕಾಲಘಟ್ಟದಲ್ಲಿ ಮಾನವೀಯ ಮೌಲ್ಯಗಳನ್ನು ಮರೆತಿರುವುದು ಸಮಾಜದ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. ಜನರಲ್ಲಿ ಮತ್ತೆ ಮೌಲ್ಯಗಳನ್ನು ಮೂಡಿಸುವಲ್ಲಿ ಪತ್ರಿಕಾ ಮಾಧ್ಯಮದ ಪಾತ್ರ ಮಹತ್ತರವಾಗಿದೆ. ಮನೆಯೇ ಮೊದಲ ಪಾಠ ಶಾಲೆ ಎಂಬ ಮಾತಿನಂತೆ ಪೋಷಕರು ಮಕ್ಕಳಿಗೆ ಎಳೆ ವಯಸ್ಸಿನಿಂದಲೇ ಜೀವನದ ಮೌಲ್ಯಗಳನ್ನು ಕಲಿಸಿಕೊಡಬೇಕು ಎಂದರು.

ಪತ್ರಿಕೋದ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭ ಇದ್ದಂತೆ. ಈ ವೃತ್ತಿಯನ್ನು ಜವಾಬ್ದಾರಿಯುತವಾಗಿ ನಿಷ್ಠೆಯಿಂದ ನಿಭಾಯಿಸುವುದು ಕಷ್ಟಕರ. ಸಾಮಾಜಿಕ ಬದಲಾವಣೆಯನ್ನು ತರುವ ಮತ್ತು ಜನಾಭಿಪ್ರಾಯ ರೂಪಿಸುವ ಜವಾಬ್ದಾರಿ ಪತ್ರಕರ್ತರದ್ದಾಗಿರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳು ಜನರನ್ನು ಬೇಗ ತಲುಪುತ್ತಿರುವುದರಿಂದ, ಮುಖ್ಯ ವಾಹಿನಿಯಲ್ಲಿರುವ ಮಾಧ್ಯಮದ ಹಿಡಿತ ಸಡಿಲವಾಗ್ತಿದೆ. ಇದು ಸಮಾಜಕ್ಕೆ ಮಾರಕವಾಗಿದ್ದು, ಪತ್ರಿಕಾ ಮಾಧ್ಯಮವು ಸಾಮಾಜಿಕ ಜಾಲತಾಣಗಳಲ್ಲಿ ಹಿಡಿತ ಸಾಧಿಸುವ ಮೂಲಕ ಸಮಾಜದಲ್ಲಿ ಆರೋಗ್ಯಕರ ವಾತಾವರಣ ನಿರ್ಮಿಸಬೇಕೆಂದು ಸಲಹೆ ನೀಡಿದರು. 

ಮಡಿಕೇರಿ ತಾಲ್ಲೂಕು ಎಸ್‌ಎನ್‌ಡಿಪಿ ಅಧ್ಯಕ್ಷ ಟಿ.ಆರ್.ವಾಸುದೇವ್ ಮಾತನಾಡಿ, ಪತ್ರಿಕೋದ್ಯಮ ಜನರ ಧ್ವನಿಯಾಗಿದೆ. ಪತ್ರಕರ್ತರಿಗೆ ಸಮಾಜದಲ್ಲಿ ಮಹತ್ವದ ಸ್ಥಾನವಿದ್ದು, ಅವರು ಶಿಕ್ಷಕರಿದ್ದಂತೆ. ತಮ್ಮ ಶ್ರಮ ಹಾಗೂ ಬದ್ಧತೆಯಿಂದ ಸಾಮಾಜಿಕ ಅಭಿವೃದ್ದಿಗೆ ಕಂಕಣಬದ್ಧರಾಗಿದ್ದಾರೆ. ಖಡ್ಗಕ್ಕಿಂತ ಲೇಖನಿ ಹರಿತ ಎಂಬಂತೆ ತಮ್ಮ ಪ್ರಭಾವಶಾಲಿ ಬರಹಗಳಿಂದ ಸಮಾಜದ ಅಂಕು-ಡೊಂಕನ್ನು ತಿದ್ದುತ್ತಾ ಸದಾ ಸಮಾಜದ ಪರ ಕೆಲಸ ಮಾಡುವ ಪತ್ರಕರ್ತರ ಸೇವೆ ಶ್ಲಾಘನೀಯ ಎಂದು ಬಣ್ಣಿಸಿದರು.  

ಕೊಡಗು ಪ್ರೆಸ್‌ಕ್ಲಬ್ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷರು ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ‘ಸೋರುತಿಹುದು ಮೀನಾಳ ಮನೆಯ ಮಾಳಿಗೆ’ ಎಂಬ ಪತ್ರಕರ್ತ ಇಸ್ಮಾಯಿಲ್ ಕಂಡಕರೆ ಅವರ ವರದಿಯ ಫಲಶ್ರುತಿಯಾಗಿ ಶಾಸಕ ಮಂತರ್ ಗೌಡ ಅವರು ಮೀನಾ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಟ್ಟಿದ್ದು, ಜೂ.೯ರಂದು ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ. ಇಂತಹ ಪರಿಣಾಮಕಾರಿ ವರದಿಗಳು ಹೆಚ್ಚೆಚ್ಚು ಪ್ರಕಟಗೊಳ್ಳಬೇಕೆಂದು ಹೇಳಿದರು. 

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್ ಸವಿತಾ ರೈ ಮಾತನಾಡಿ, ಕೊಡಗಿನ ಆರಂಭದ ಪತ್ರಿಕೋದ್ಯಮಕ್ಕೂ ಇತ್ತೀಚಿನ ಪತ್ರಿಕೋದ್ಯಮಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಆಗಿನ ಪತ್ರಕರ್ತರಲ್ಲಿ ಇದ್ದ ಆಸಕ್ತಿ ಈಗಿನವರಲ್ಲಿ ಇಲ್ಲದಾಗಿದೆ. ಪ್ರಶಸ್ತಿಗಳು ಪತ್ರಕರ್ತರ ಇರುವಿಕೆ ಮತ್ತು ತೂಕವನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ ಪತ್ರಕರ್ತರು ವಿಶೇಷ ವರದಿಗಳ ಮೂಲಕ ಗಮನ ಸೆಳೆಯಬೇಕು. ಕೊಡಗು ಪ್ರೆಸ್‌ಕ್ಲಬ್ ಮತ್ತು ಕಾರ್ಯನಿರತ ಪತ್ರಕರ್ತರ ಸಂಘ ಒಂದೇ ನಾಣ್ಯದ ಎರಡು ಮುಖಗಳಂತೆ ಕಾರ್ಯಚರಿಸಬೇಕೆಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಕೊಡಗಿನ ಪತ್ರಕರ್ತರು ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಯುವ ಪತ್ರಕರ್ತರು ಪತ್ರಿಕೋದ್ಯಮದತ್ತ ಮುಖ ಮಾಡಬೇಕು. ಇಲ್ಲಿ ಸಾಕಷ್ಟು ಅವಕಾಶಗಳಿದ್ದು, ಸಮಾಜಮುಖಿಯಾಗಿ ಸೇವೆ ಸಲ್ಲಿಸಲು ಇದು ಉತ್ತಮ ಕ್ಷೇತ್ರ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅಧ್ಯಕ್ಷತೆಯಲ್ಲಿ ಸಂಘದ ಮಹಾಸಭೆ ನಡೆಯಿತು. ವೇದಿಕೆಯಲ್ಲಿ ಸಂಘದ ಪ್ರ.ಕಾರ್ಯದರ್ಶಿ ಆದರ್ಶ್ ಅದ್ಕಲೇಗಾರ್, ಹಿರಿಯ ಉಪಾಧ್ಯಕ್ಷ ನವೀನ್ ಡಿಸೋಜ, ಉಪಾಧ್ಯಕ್ಷೆ ವನಿತಾ ಚಂದ್ರಮೋಹನ್, ಖಜಾಂಚಿ ತೇಜಸ್ ಪಾಪಯ್ಯ, ಸಂಘಟನಾ ಕಾರ್ಯದರ್ಶಿ ಕೆ.ಜೆ.ಶಿವರಾಜ್, ಸಹ ಕಾರ್ಯದರ್ಶಿ ವಿ.ವಿ ಅರುಣ್ ಕುಮಾರ್, ನಿರ್ದೇಶಕರಾದ ರಮೇಶ್ ಕುಟ್ಟಪ್ಪ, ಬಿ.ಆರ್ ಸವಿತಾ ರೈ, ಕೆ.ಎಂ ವಿನೋದ್, ಮಾಗುಲು ಲೋಹಿತ್, ಕೆ.ಎಸ್ ಲೋಕೇಶ್, ಬಿ.ಜಿ ಮಂಜು, ಕೆ.ಎಂ ಇಸ್ಮಾಯಿಲ್ ಉಪಸ್ಥಿತರಿದ್ದರು. 

ಪ್ರಶಸ್ತಿ ಪ್ರದಾನ:

ಕೊಡಗು ಪ್ರೆಸ್ ಕ್ಲಬ್ ನೀಡುವ ವಾರ್ಷಿಕ ಪ್ರಶಸ್ತಿ ವಿಜೇತರಾದ ಜಿಲ್ಲೆಯ ಮೂವರು ಪತ್ರಕರ್ತರನ್ನು ಸನ್ಮಾನಿಸಲಾಯಿತು. ಹಿರಿಯ ಪತ್ರಕರ್ತ ಕೆ.ಬಿ.ಮಹಂತೇಶ್ ಅವರ ಸ್ಮರಣಾರ್ಥ ಕೊಡಗು ಪ್ರೆಸ್ ಕ್ಲಬ್ ವತಿಯಿಂದ ನೀಡುವ ಅತ್ಯುತ್ತಮ ಪರಿಣಾಮಕಾರಿ ವರದಿ ಪ್ರಶಸ್ತಿಗೆ ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ‘ರೂ.೭ ಕೋಟಿ ವೆಚ್ಚದ ಜರ್ಮನ್ ತಂತ್ರಜ್ಞಾನದ ತಡೆಗೋಡೆ ಪೂರ್ಣಗೊಳ್ಳುವುದು ಎಂದು?’ ಎಂಬ ವರದಿಗೆ ಹೆಚ್.ಜೆ.ರಾಕೇಶ್ ಪ್ರಶಸ್ತಿ ಪಡೆದರು.

ಕೋವರ್ ಕೊಲ್ಲಿ ಇಂದ್ರೇಶ್ ಮತ್ತು ಕುಟುಂಬವರ್ಗ ತಮ್ಮ ತಂದೆ ಬಿ.ವಿ.ಚಂದ್ರಶೇಖರ್ ಹಾಗೂ ತಾಯಿ ಪುಷ್ಪಲತಾ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ವರದಿ ಪ್ರಶಸ್ತಿಗೆ ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ "ಸೋರುತಿಹುದು ಮೀನಾಳ ಮನೆಯ ಮಾಳಿಗೆ" ಎಂಬ ವರದಿಗೆ ಕೆ.ಎಂ.ಇಸ್ಮಾಯಿಲ್ ಕಂಡಕರೆ ಪಡೆದುಕೊಂಡರು.

ಎಂ.ಎನ್.ಚಂದ್ರಮೋಹನ್ ಅವರು ತಮ್ಮ ತಂದೆ ಎಂ.ನಾರಾಯಣ ಹಾಗೂ ತಾಯಿ ಎನ್.ಪದ್ಮಾವತಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಪರಿಸರ ವರದಿ ಪ್ರಶಸ್ತಿಗೆ ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ "ಜಿಲ್ಲಾ ಕೇಂದ್ರದಲ್ಲಿ ವಾಕರಿಗೆ ತರಿಸುವ ಕೊಳಕು ಮಾಂಸ ಮಾರುಕಟ್ಟೆ!" ಎಂಬ ವರದಿಗೆ ಆನಂದ್ ಕೊಡಗು ಪ್ರಶಸ್ತಿ ಸ್ವೀಕರಿಸಿದರು. 

ಮೂರು ಪ್ರಶಸ್ತಿಯು ತಲಾ ೫ ಸಾವಿರ ರೂಪಾಯಿ ನಗದು ಹಾಗೂ ಫಲಕ ಒಳಗೊಂಡಿದೆ. ಫೀ.ಮಾ.ಕೆ.ಎಂ ಕಾರ್ಯಪ್ಪ ಕಾಲೇಜಿನ ಪ್ರೊ.ನಯನಾ ಕಶ್ಯಪ್, ಪ್ರಾಧ್ಯಾಪಕರಾದ ಕರುಣಾಕರ್, ಮೋನಿಕಾ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. 

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ೨೦೨೩-೨೪ನೇ ಸಾಲಿನ ಪ್ರಶಸ್ತಿಗಳಿಗೆ ಭಾಜನರಾದ ಕಾಯಪಂಡ ಶಶಿ ಸೋಮಯ್ಯ, ಪಿ.ವಿ.ಅಕ್ಷಯ್, ಯು.ಎಂ.ಜಯಂತಿ, ಇ.ಆರ್.ವಿಶ್ವಕುಮಾರ್ ಹಾಗೂ ಕಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದಿಂದ ನೀಡಲಾಗುವ ಹರ್ಷ ಮೇಲಾಂಟ ದತ್ತಿನಿಧಿ ಪ್ರಶಸ್ತಿಗೆ ಭಾಜನರಾದ ಕೆ.ಎಂ.ಇಸ್ಮಾಯಿಲ್ ಕಂಡಕರೆ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ನೀಡಲಾಗುವ ಮೈಸೂರು ದಿಗಂತ ದತ್ತಿನಿಧಿ ಪ್ರಶಸ್ತಿ ಪಡೆದ ಬಾಚರಣಿಯಂಡ ಅನು ಕಾರ್ಯಪ್ಪ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0