ಚೆರಿಯಪರಂಬು: ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಸಂಭ್ರಮದ ಬಕ್ರೀದ್ ಆಚರಣೆ

ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ನಾಪೋಕ್ಲು ಬಳಿಯ ಚೆರಿಯಪರಂಬುವಿನ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಮುಸಲ್ಮಾನ ಭಾಂದವರು ತ್ಯಾಗ ಬಲಿದಾನದ ಸಂಕೇತವಾಗಿ ಆಚರಿಸಲ್ಪಡುವ ಪವಿತ್ರ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.ಮಸೀದಿಯ ಖತೀಬರಾದ ಮೊಹಮ್ಮದ್ ಶಫೀಕ್ ಸಿರಾಜಿ ಅವರು ಈದ್ ನಮಾಜಿಗೆ ನೇತೃತ್ವ ವಹಿಸಿ ಮಾತನಾಡಿ ಇಸ್ಲಾಂ ಧರ್ಮವು ಸಮಾಜದಲ್ಲಿ ಜಾತಿ,ಮತ ಭೇದವಿಲ್ಲದೆ ಎಲ್ಲರೂ ಪರಸ್ಪರ ಅನ್ಯೂನತೆ,ಶಾಂತಿ ಸಹಬಾಳ್ವೆಗೆ ಪ್ರಾಮುಖ್ಯತೆಯನ್ನು ನೀಡಿದೆ. ಅದೇ ರೀತಿ ಪ್ರಪಂಚದಲ್ಲಿರುವ ಎಲ್ಲಾ ಧರ್ಮವು ಅದನ್ನೇ ಪ್ರತಿಪಾದಿಸುತ್ತದೆ. ನಮ್ಮ ಪೂರ್ವಜರು ನೀಡಿದ ಸಂದೇಶದಂತೆ ಸಮಾಜದಲ್ಲಿ ಎಲ್ಲರೂ ಪರಸ್ಪರ ಸೌಹಾರ್ದತೆಯಿಂದ ಜೀವನ ನಡೆಸಬೇಕೆಂದು ಈದ್ ಸಂದೇಶ ಸಾರಿದರು.
ಬಳಿಕ ಚೆರಿಯಪರಂಬು ದರ್ಗಾ ಕ್ಕೆ ತೆರಳಿದ ಸಮುದಾಯ ಬಾಂಧವರು ನಾಡಿನ ಸುಭೀಕ್ಷಕ್ಕಾಗಿ ಮತ್ತು ನಾಡಿನಲ್ಲಿ ಮರಣ ಹೊಂದಿದವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸಂಭ್ರಮದಿಂದ ಬಕ್ರೀದ್ ಹಬ್ಬವನ್ನು ಆಚರಿಸಿದರು.
ಈ ಸಂದರ್ಭ ಚೆರಿಯಪರಂಬು ಜಮಾಅತ್ ಅಧ್ಯಕ್ಷರಾದ ಪಿ. ಎ. ಅಹಮದ್, ಪ್ರಧಾನ ಕಾರ್ಯದರ್ಶಿ ಪರವಂಡ ಸಿರಾಜ್, ಉಪಾಧ್ಯಕ್ಷರಾದ ಇಬ್ರಾಹಿಂ ಪಿ ಎಂ, ಕೋಶಾಧಿಕಾರಿ ಬಶೀರ್, ಸಹಕಾರ್ಯದರ್ಶಿ ಪಿ. ಎಂ.ಅಲಿ ಸೇರಿದಂತೆ ಆಡಳಿತ ಮಂಡಳಿ ಪದಾಧಿಕಾರಿಗಳು, ಸರ್ವ ಸದಸ್ಯರು ಪಾಲ್ಗೊಂಡಿದ್ದರು.
What's Your Reaction?






