ಜಾತಿ ವರದಿಯನ್ನು ಕಸದಬುಟ್ಟಿಗೆ ಹಾಕಿದ ಸಿಎಂ, ಡಿಸಿಎಂ, ಕೋಟ್ಯಂತರ ರೂ. ಹಣ ನಷ್ಟ: ಯದುವೀರ್ ಒಡೆಯರ್ ಆರ್ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತ ಘಟನೆ ಮರೆಮಾಚಲು ಕಾಂಗ್ರೆಸ್ ಹುನ್ನಾರ: ಸಂಸದರ ಆರೋಪ
ಮೈಸೂರು: ಹಲವು ವರ್ಷಗಳಿಂದ ಜಾತಿ ಗಣತಿಯ ವರದಿಯನ್ನು ಹಿಡಿದುಕೊಂಡು ಕಾಲಹರಣ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆ ವರದಿಯನ್ನು ಕಸದಬುಟ್ಟಿಗೆ ಹಾಕಿ ಹೊಸದಾಗಿ ಜಾತಿ ಗಣತಿ ನಡೆಸಲು ಮುಂದಾಗಿರುವುದು ಅತ್ಯಂತ ದಡ್ಡತನದ ಮತ್ತು ಬೇಜವಾಬ್ದಾರಿಯ ಪರಮಾವಧಿ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಿಡಿಕಾರಿದ್ದಾರೆ.ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದರು, ಕಾಂಗ್ರೆಸ್ ಸರ್ಕಾರವನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.
ಹದಿನೆಂಟು ವರ್ಷಗಳ ಬಳಿಕ ಆರ್ಸಿಬಿ ತಂಡ ಕಪ್ ಗೆದ್ದ ಹಿನ್ನೆಲೆಯಲ್ಲಿ ನಡೆದ ವಿಜಯೋತ್ಸವದ ವೇಳೆ ಸಂಭವಿಸಿದ ದುರಂತದಲ್ಲಿ ಹನ್ನೊಂದು ಜನ ಮೃತಪಟ್ಟಿರುವ ಘಟನೆಯನ್ನು ಮರೆ ಮಾಚಲು ಕಾಂಗ್ರೆಸ್ ಸರ್ಕಾರ ಹುನ್ನಾರ ಮಾಡಿದೆ ಎಂದು ಆರೋಪಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಬಾರಿ ವಿವಾದ ಉಂಟಾದಾಗ ಜಾತಿ ಗಣತಿ ಎಂಬ ವರದಿಯ ಅಸ್ತ್ರವನ್ನು ಪ್ರಯೋಗಿಸುತ್ತಿದ್ದಾರೆ. ಈ ಬಾರಿಯೂ ಅದೇ ತಂತ್ರ ಮಾಡಿದ್ದಾರೆ. ಕಾಂತರಾಜ್ ಆಯೋಗದ ವರದಿ ಅವೈಜ್ಞಾನಿಕ, ಅಪೂರ್ಣ ಎಂದು ಎಲ್ಲ ವರ್ಗದಿಂದ ವಿರೋಧ ಬಂದರೂ ಹಠ ಹಿಡಿದು ವರದಿ ಸೋರುವಂತೆ ಮಾಡಿದರು. ಈಗ ಹೈಕಮಾಂಡ್ ಹೇಳಿದ ಕೂಡಲೇ ಈಗ ಹೊಸದಾಗಿ ಗಣತಿ ಮಾಡಲು ನಿರ್ಧರಿಸಿದ್ದಾರೆ. ಇದು ಜನತೆಗೆ ಮಾಡುತ್ತಿರುವ ಮೋಸ ಎಂದು ಯದುವೀರ್ ಕುಟುಕಿದರು.
ಕಾಂಗ್ರೆಸ್ ಸಚಿವ ಸಂಪುಟದಲ್ಲೇ ಜಾತಿ ಗಣತಿ ವರದಿಯ ಬಗ್ಗೆ ತೀವ್ರ ವಿರೋಧವಿತ್ತು. ಅದನ್ನು ಸರಿ ಮಾಡಿಕೊಳ್ಳಲು ಈಗ ಕಾಂಗ್ರೆಸ್ ಮತ್ತೆ ಕೋಟ್ಯಂತರ ರೂ. ವೆಚ್ಚದಲ್ಲಿ ಜಾತಿ ಗಣತಿಗೆ ಮುಂದಾಗಿರುವುದು ಅದ ದಡ್ಡತನವನ್ನು ತೋರುತ್ತದೆ. ಈ ಜಾತಿ ಗಣತಿಗೆ ಕಾಂಗ್ರೆಸ್ ಸರ್ಕಾರ 165.51 ಕೋಟಿ ರೂ. ಖರ್ಚು ಮಾಡಿದೆ. ಅದೀಗ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ಸಂಸದರು ತಿಳಿಸಿದರು.
ನಮ್ಮ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ ಮಹತ್ವದ ನಿರ್ಧಾರ ಕೈಗೊಂಡಿದ್ದು, ಜನಗಣತಿಯ ಜೊತೆಗೆ ಜಾತಿ ಗಣತಿ ಮಾಡುವುದಾಗಿ ಪ್ರಕಟಿಸಿದೆ. ಕಾಂಗ್ರೆಸ್ ಸರ್ಕಾರ ಇದನ್ನು ತಿಳಿದುಕೊಂಡರೆ ಒಳ್ಳೆಯದು. ಈ ಪ್ರಕ್ರಿಯೆಯನ್ನು ಮತ್ತೆ ಮಾಡುವ ಅಗತ್ಯವಿಲ್ಲ ಎಂದರು.
ಜಾತಿ ಗಣತಿಯ ಪ್ರಕ್ರಿಯೆಯನ್ನು ನಡೆಸಲು ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಯೋಗ್ಯತೆ ಇಲ್ಲ, ಸಾಮರ್ಥ್ಯ ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಹತ್ತು ವರ್ಷವಾದರೂ ಇದನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಕೆಲವು ರಾಜ್ಯಗಳು ಈಗಾಗಲೇ ಪೂರ್ಣಗೊಳಿಸಿದೆ. ನಮ್ಮ ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಇದು ಯಾಕೆ ಸಾಧ್ಯವಾಗಿಲ್ಲ ಎಂದು ಯುದವೀರ್ ಪ್ರಶ್ನಿಸಿದರು.
ರಾಹುಲ್, ಕೆಸಿವಿ ನಿರ್ಧರಿಸೋದು ಯಾಕೆ!?
ಜಾತಿ ಗಣತಿ ಬಗ್ಗೆ ಕರ್ನಾಟಕದಲ್ಲಿ ತೀರ್ಮಾನವಾಗಿಲ್ಲ. ಹೊಸದಿಲ್ಲಿಯಲ್ಲಿಯಲ್ಲಿ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ನಿರ್ಧರಿಸಿದ್ದು ಏಕೆ? ಇಬ್ಬರು ಕಾಂಗ್ರೆಸ್ ವರಿಷ್ಠ ನಾಯಕರು ಸರಿ. ಆದರೆ ಕರುನಾಡಿನ ಜನತೆ ಇವರಿಬ್ಬರನ್ನು ಆಯ್ಕೆ ಮಾಡಿಲ್ಲ. ಇವರಿಬ್ಬರು ಸರ್ಕಾರವನ್ನು ರಿಮೋಟ್ ಕಂಟ್ರೋಲ್ ಮೂಲಕ ನಡೆಸುತ್ತಿದ್ದಾರಾ ಎಂಬ ಅನುಮಾನ ಮೂಡಿದೆ ಎಂದು ಸಂಸದ ಯದುವೀರ್ ತಿಳಿಸಿದರು.
ನೋ ಗ್ಯಾರಂಟಿ ಸರ್ಕಾರ ದಿವಾಳಿ!
ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ದಿವಾಳಿಯಾಗಿರುವ ರಾಜ್ಯ ಸರ್ಕಾರ, ಈಗಾಗಲೇ 165 ಕೋಟಿ ರೂ. ಕಸದಬುಟ್ಟಿಗೆ ಹಾಕಿದೆ. ಈಗ ಹೊಸ ಜಾತಿ ಗಣತಿಗೆ ಇನ್ನಷ್ಟು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತೆ. ಆದರೆ ಅಭಿವೃದ್ಧಿ ಕಾರ್ಯಗಳು ರಾಜ್ಯದಲ್ಲಿ ಸಂಪೂರ್ಣ ಸ್ಥಗಿತಗೊಂಡಿವೆ ಎಂದರು.ಮೈಸೂರಿನಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲ. ನೀರಿನ ಯೋಜನೆ ಆಗಿಲ್ಲ, ಬೆಳಗೊಳ-ಕುಶಾಲನಗರ ರೈಲ್ವೆ ಯೋಜನೆ ಸ್ಥಗಿತಗೊಂಡಿದೆ. ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ ಸಂಬಂಧ ನೀರಾವರಿ ನಾಲೆ ಮತ್ತು ಹೈ ಟೆನ್ಷನ್ ವಿದ್ಯುತ್ ತಂತಿ ಸ್ಥಳಾಂತರಕ್ಕೆ 120 ಕೋಟಿ ರೂ. ಬೇಕಾಗಿದೆ ಎಂದು ಸಂಸದರು ತಿಳಿಸಿದರು.
ಕೇಂದ್ರ ಸರ್ಕಾರ ಅತ್ಯಂತ ಕ್ರಮಬದ್ಧವಾಗಿ, ವೈಜ್ಞಾನಿಕವಾಗಿ ಜಾತಿ ಗಣತಿ ಮಾಡಲು ಮುಂದಾಗಿದೆ. ನಮ್ಮ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಈ ಗಣತಿಯನ್ನು ನಡೆಸಲಿದೆ ಎಂದರು.
ಆರ್ಸಿಬಿ ವಿಜಯೋತ್ಸವ ವೇಳೆಯ ದುರಂತವನ್ನು ಮುಚ್ಚಿ ಹಾಕುವುದೇ ಸರ್ಕಾರದ ಅಜೆಂಡಾ. ಅದಕ್ಕಾಗಿಯೇ ಈಗ ಜಾತಿ ಗಣತಿಯ ನಾಟಕವಾಡುತ್ತಿರುವುದು ಸ್ಪಷ್ಟವಾಗಿದೆ. ಕಾಂಗ್ರೆಸ್ ಸರ್ಕಾರ ಇನ್ನಾದರೂ ಅಭಿವೃದ್ಧಿ ಪರ, ಜನಪರ ಆಡಳಿತವನ್ನು ನಡೆಸಲಿ, ಹೊಸ ಜಾತಿ ಗಣತಿ ಮಾಡುವುದನ್ನು ನಿಲ್ಲಿಸಲಿ ಎಂದು ಆಗ್ರಹಿಸುತ್ತೇನೆ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದರು.
What's Your Reaction?






