ನಾಗರಹೊಳೆ-ಅತ್ತೂರು ಕೊಲ್ಲಿ:ಆದಿವಾಸಿಗಳ ಗುಡಿಸಲು ತೆರವು

Jun 18, 2025 - 20:43
 0  170
ನಾಗರಹೊಳೆ-ಅತ್ತೂರು ಕೊಲ್ಲಿ:ಆದಿವಾಸಿಗಳ ಗುಡಿಸಲು ತೆರವು

 ಪೊನ್ನಂಪೇಟೆ: ಅತ್ತೂರುಕೊಲ್ಲಿ ನಾಗರಹೊಳೆ ವನ್ಯಜೀವಿ ವಲಯ ವ್ಯಾಪ್ತಿಯ ಅತ್ತೂರು ಕೊಲ್ಲಿ ಅರಣ್ಯ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿ ಹೆಚ್ಚುವರಿಯಾಗಿ ನಿರ್ಮಿಸಿಕೊಂಡಿದ್ದ ಆರು ಗುಡಿಸಲುಗಳನ್ನು ಪೊಲೀಸ್ ಇಲಾಖೆ ಸಹಕಾರದಲ್ಲಿ ಅರಣ್ಯ ಇಲಾಖೆ ತೆರವುಗೊಳಿಸಿತು. ಹೊಸದಾಗಿ ನಿರ್ಮಿಸಿದ್ದ ಆರು ಗುಡಿಸಲುಗಳನ್ನು ತೆರವುಗೊಳಿಸುವಂತೆ ಆದಿವಾಸಿ ಮುಖಂಡರಿಗೆ ಅರಣ್ಯ ಇಲಾಖೆ ನೋಟೀಸ್ ಜಾರಿ ಮಾಡಿತ್ತು. ಮಾತ್ರವಲ್ಲದೇ ಕಾರ್ಯಾಚರಣೆಗೂ ಮುನ್ನ ಸ್ವಯಂ ಪ್ರೇರಿತರಾಗಿ ಹೊಸ ಗುಡಿಸಲುಗಳನ್ನು ತೆರವುಗೊಳಿಸಲು ಅವಕಾಶ ನೀಡಲಾಗಿತ್ತು. ಆದರೆ ಆದಿವಾಸಿಗಳು ಗುಡಿಸಲುಗಳನ್ನು ತೆರವು ಮಾಡಲು ನಿರಾಕರಿಸಿ ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿಗಳಿಗೆ ಅರಣ್ಯಕ್ಕೆ ಪ್ರವೇಶ ಮಾಡದಂತೆ ತಡೆ ಒಡ್ಡಿದ್ದರು. ಅರಣ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು ಮತ್ತೊಂದು ಮಾರ್ಗದ ಮೂಲಕ ಹಾಡಿ ಪ್ರದೇಶದ ಅರಣ್ಯಕ್ಕೆ ಪ್ರವೇಶಿಸಿ ಕಾರ್ಯಾಚರಣೆ ಆರಂಭಿಸಿದರು. ಈ ವೇಳೆ ಆದಿವಾಸಿಗಳು ಅರಣ್ಯ ಹಾಗೂ ಪೊಲೀಸ್ ಇಲಾಖೆ ವಿರುದ್ದ ತೀವ್ರ ಆಕ್ರೋಷ ವ್ಯಕ್ತಪಡಿಸಿದರು. ಇಲಾಖೆಗಳು ಆದಿವಾಸಿಗಳ ಮೇಲೆ ದೌರ್ಜನ್ಯ ಮತ್ತು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿ ಗುಡಿಸಲು ತೆರವು ಕಾರ್ಯಾಚರಣೆ ಅಡ್ಡಿಪಡಿಸಲು ಯತ್ನಿಸಿದ ಘಟನೆಯೂ ನಡೆಯಿತು. ಹೀಗಿದ್ದರೂ ಅತ್ತೂರು ಕೊಲ್ಲಿ ಅರಣ್ಯ ಪ್ರದೇಶದಲ್ಲಿ ಮೊಕ್ಕಾಂ ಹೂಡಿರುವ ಆದಿವಾಸಿಗಳು ಈ ಹಿಂದೆ ನಿರ್ಮಿಸಿದ್ದ ತಾತ್ಕಾಲಿಕ ಗುಡಿಸಲುಗಳನ್ನು ಹಾಗೆಯೇ ಬಿಡಲಾಯಿತು. ನೂತನವಾಗಿ ಯಾವುದೇ ಶೆಡ್ ನಿರ್ಮಿಸಿದರೆ ತೆರವು ಮಾಡಲಾಗುತ್ತದೆ ಎಂದು ಅಧಿಕಾರಿಗಳು ಸೂಚಿಸಿದರು. 

ಈ ಸಂದರ್ಭ ಜಮ್ಮಪಾಳೆ ಹಕ್ಕು ಸ್ಥಾಪನಾ ಸಮಿತಿಯ ಕಾರ್ಯದರ್ಶಿ ಶಿವು ಅವರು ಮಾತನಾಡಿ, ಅರಣ್ಯ ಇಲಾಖೆ ಏಕಾಏಕಿ ಹಾಡಿಗೆ ನುಗ್ಗಿ ಮಳೆಯಿಂದ ರಕ್ಷಸಿಕೊಳಲು ನಿರ್ಮಿಸಿಕೊಂಡಿದ್ದ ಗುಡಿಸಲುಗಳನ್ನು ಕಿತ್ತುಹಾಕಿ ದೌರ್ಜನ್ಯ ಎಸಗಿದ್ದಾರೆ. ಅರಣ್ಯ ಹಕ್ಕು ಕಾಯಿದೆ, 2019ರ ಸುಪ್ರೀಂ ಕೋರ್ಟ್ ಆದೇಶ, ಬುಡಕಟ್ಟು ವ್ಯವಹಾರ ಇಲಾಖೆಯ ದಾಖಲೆಗಳನ್ನು ಕಡೆಗಣಿಸಿ ಮೇಲಧಿಕಾರಿಗಳ ಆದೇಶ ಪಾಲಿಸಬೇಕು ಎಂದು ಗುಡಿಸಲುಗಳನ್ನು ತೆರೆವುಗೊಳಿಸಿದ್ದಾರೆ. ನಮ್ಮ ವಿರೋಧದ ನಡುವೆಯೂ ಆದಿವಾಸಿಗಳ ಬದುಕಿಗೆ ಆಶ್ರಯಕ್ಕಾಗಿ ಇರುವಂತಹ ಗುಡಿಸಲುಗಳನ್ನು ಸಂಪೂರ್ಣವಾಗಿ ನೆಲಸಮ ಮಾಡಿ ಟಾರ್ಪಾಲ್ ಹಾಗೂ ಇತರ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ತಮ್ಮ ಪರವಾಗಿ ನಿಲ್ಲುತ್ತಿಲ್ಲ. ಸರಕಾರ ಹಾಗೂ ಆಡಳಿತ ವ್ಯವಸ್ಥೆ ಆದಿವಾಸಿ ಜನಾಂಗದ ವಿರುದ್ಧವಾಗಿದೆ. ಹಾಡಿ ಜನಾಂಗದವರು ಮುಂದಿನ ದಿನಗಳಲ್ಲಿ ಅರಣ್ಯ ಹಾಗೂ ಪೊಲೀಸ್ ಇಲಾಖೆ ವಿರುದ್ದ ಪ್ರಕರಣ ದಾಖಲಿಸಲು ಮುಂದಾಗುತ್ತೇವೆ ಎಂದು ಹೇಳಿದರು. 

 ಜಮ್ಮಪಾಳೆ ಹಕ್ಕು ಸ್ಥಾಪನಾ ಸಮಿತಿಯ ಅಧ್ಯಕ್ಷ ಜೆ.ಕೆ.ತಿಮ್ಮ ಹಾಜರಿದ್ದರು.

ನಾಗರ ಹೊಳೆ ವನ್ಯಜೀವಿ ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜೆ.ಅನನ್ಯ ಕುಮಾರ್ ಅವರು ಮಾತನಾಡಿ, ನಾಗರಹೊಳೆ ವನ್ಯಜೀವಿ ಅರಣ್ಯದ ಅತ್ತೂರುಕೊಲ್ಲಿ ಅರಣ್ಯ ಪ್ರದೇಶದಲ್ಲಿ ಮೇ.5ರಂದು ಆದಿವಾಸಿಗಳು ಅಕ್ರಮ ಪ್ರವೇಶ ಮಾಡಿ ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದಾರೆ. ಇದೀಗ ಹೊಸದಾಗಿ 6 ಶೆಡ್ ನಿರ್ಮಿಸಿರುವುದನ್ನು ತೆರವುಗೊಳಿಸಿದ್ದೇವೆ. ಈ ಹಿಂದೆಯೇ ಹೊಸದಾಗಿ ಕಾರ್ಯ ಚಟುವಟಿಕೆ ನಡೆಸಬಾರದೆಂದು ಆದೇಶ ನೀಡಲಾಗಿತ್ತು. ಹೊಸದಾಗಿ ಶೆಡ್ ನಿರ್ಮಿಸಿದ ಕಾರಣ ಅರಣ್ಯ ಇಲಾಖೆ ಸಿಬ್ಬಂದಿಗಳು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ತೆರವು ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು. ಈ ಪ್ರಕರಣ ಇತ್ಯರ್ಥವಾಗುವವರೆಗೂ ಹೊಸದಾಗಿ ಯಾವುದೇ ಶೆಡ್ ನಿರ್ಮಿಸಲು ಅವಕಾಶ ನೀಡಲು ಸಾಧ್ಯವಿಲ್ಲ. ಮತ್ತೆ ಶೆಡ್ ನಿರ್ಮಿಸಿದರೆ ಅರಣ್ಯ ಇಲಾಖೆಯ ವತಿಯಿಂದ ತೆರವುಗೊಳಿಸಲಾಗುವುದು ಎಂದರು.

ಕಾರ್ಯಾಚರಣೆ ಸಂದರ್ಭ ನಾಗರಹೊಳೆ ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅನನ್ಯ ಕುಮಾರ್.ಜಿ, ಹುಣಸೂರು ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮಿಕಾಂತ್.ಎನ್, ನಾಗರಹೊಳೆ ವನ್ಯಜೀವಿ ವಲಯದ ಅರಣ್ಯಾಧಿಕಾರಿ ಮಂಜುನಾಥ ಹೆಚ್.ಎಂ. ಮೇಟಿಕುಪ್ಪೆ ವನ್ಯಜೀವಿ ವಲಯ ಅರಣ್ಯಾಧಿಕಾರಿ ರಶ್ಮಿ ಎಂ.ಆರ್, ಕೊಡಗು ಆಡಿಷನಲ್ ಎಸ್.ಪಿ. ಬಾರಿಕೆ ದಿನೇಶ್ ಕುಮಾರ್ , ಮಡಿಕೇರಿ ಡಿವೈಎಸ್‌ಪಿ ಸೂರಜ್, ವಿರಾಜಪೇಟೆ ಡಿವೈಎಸ್‌ಪಿ ಮಹೇಶ್, ಕುಟ್ಟ ವೃತ್ತ ನಿರೀಕ್ಷಕ ಶಿವರುದ್ರ, ವಿರಾಜಪೇಟೆ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಕುಟ್ಟ ಎಸ್.ಐ. ಮಹದೇವ್ ಹೆಚ್.ಕೆ, ಶ್ರೀಮಂಗಲ ಎ.ಎಸ್.ಐ ಸಾಲ್ದಾನ, ಪೊನ್ನಂಪೇಟೆ ವೃತ್ತ ನಿರೀಕ್ಷಕ ನವೀನ್.ಕೆ, ಗೋಣಿಕೊಪ್ಪ ಎಸ್.ಐ. ಪ್ರದೀಪ್ ಕುಮಾರ್ ಸೇರಿದಂತೆ ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 1
Sad Sad 0
Wow Wow 0