ಪಡೆದ ಜ್ಞಾನ ಸಂಪತ್ತು ಸಮಾಜಕ್ಕೆ ಹಿಂದಿರುಗಿಸುವ ಗುಣ ಹೊಂದಬೇಕು: ಶ್ರೀ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ ಅಭಿಪ್ರಾಯಪಟ್ಟರು; ಡೊನೇಟರ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ 11 ನೇ ವರ್ಷದ ಉಚಿತ ನೋಟ್ ಪುಸ್ತಕ ವಿತರಣೆ
ವಿರಾಜಪೇಟೆ: ಜ್ಞಾನವು ಸಂಪತ್ತು, ಅಜ್ಞಾನವು ಬಡತನ ಎಂಬುದು ಜನ ಸಾಮಾನ್ಯರು ಅರಿಯುವಂತಾಗಬೇಕು. ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಮುಖ್ಯ ಎಂದು ಅರಮೇರಿ ಕಳಂಚೇರಿ ಮಠದ ಪಿಠಾಧೀಪತಿಗಳಾದ ಶ್ರೀ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಅಭಿಪ್ರಾಯಪಟ್ಟರು
ಡೊನೇಟರ್ಸ್ ಚಾರಿಟೇಬಲ್ ಟ್ರಸ್ಟ್ (ರಿ) ಎ.ಪಿ.ಜೆ ಅಬ್ದುಲ್ ಕಲಾಂ ರಸ್ತೆ ವಿರಾಜಪೇಟೆ ಆಶ್ರಯದಲ್ಲಿ ನಗರದ ಸುಣ್ಣದ ಬೀದಿಯ ಈದ್ಗಾ ಮೈದಾನದ ಸಭಾಂಗಣದಲ್ಲಿ 11 ನೇ ವರ್ಷದ, ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಆಗಮಿಸಿ ಆರ್ಶಿವಚನ ನೀಡಿ ಮಾತನಾಡಿದ, ಸ್ವಾಮೀಜಿಗಳು, ಬಿತ್ತಿದ ಬೀಜವನ್ನು ನೋಡಬೇಡ ಬದಲಿಗೆ ಫಲವನ್ನು ಆರಿಸಿಕೊ ಎಂಬುದು ಹಿರಿಯ ವಚನವಾಗಿದೆ. ಸಂಘ ಸಂಸ್ಥೆಗಳಿಂದ ಪಡೆದ ದಾನವನ್ನು ಸಮಾಜಕ್ಕೆ ಹಿಂದಿರುಗಿಸುವ ಪ್ರವೃತ್ತಿ ವಿದ್ಯಾರ್ಥಿಗಳಲ್ಲಿ ಜಾಗೃತವಾಗಬೇಕು. ಶಿಕ್ಷಣ ಜ್ಞಾನ ಸಂಪಾದನೆ ಹೊರತು ಸಮಾಜಕ್ಕೆ ಕೆಡುಕು ಬಯಸಲು ಬಳಕೆಯಾಗಬಾರದು. ಈ ನಿಟ್ಟಿನಲ್ಲಿ ಶಿಕ್ಷಣಕ್ಕೆ ಮಹತ್ವ ನೀಡಿ ಸತತ 11 ವರ್ಷಗಳು ನಿಶ್ವಾರ್ಥ ಸೇವೆ ಮಾಡುವ ಸಂಘ ಸಂಸ್ಥೆಗಳ ಪ್ರಗತಿಗೆ ಮೆಚ್ಚುಗೆ ವ್ಯಕ್ತಪಡಿಸುವಂತಾಗಬೇಕು ಎಂದು ಹೇಳಿದರು.
ಸಂತ ಅನ್ನಮ್ಮ ಪಿ.ಯು. ಕಾಲೇಜು ವಿರಾಜಪೇಟೆ ಪ್ರಾಂಶುಪಾಲರು ಮತ್ತು ಧರ್ಮಗುರುಗಳಾದ ರೇ.ಫಾ, ಮದುಲೈ ಮುತ್ತು ಅವರು ಮಾತನಾಡಿ, ಪಡೆದುಕೊಳ್ಳುವ ಕೈಗಳಿಕ್ಕಿಂತ ದಾನ ನೀಡುವ ಕೈಗಳಿಗೆ ಧನ್ಯಾತಭಾವ ಕರುಣಿಸುತ್ತಾನೆ. ವಿದ್ಯಾವಂತರಾಗಿ, ಹೃದಯವಂತರಾಗಿ ಸಮಾಜಕ್ಕೆ ಪಡೆದ ಜ್ಞಾನವನ್ನು ಹಿಂದಿರುಗಿಸುವ ಪ್ರಮೇಯಕ್ಕೆ ಮುಂದಾಗಿ, ಸುಶಿಕ್ಷಿತ ಸಮಾಜ ನಿರ್ಮಾಣ ಮಾಡಲು ಮುಂದಾಗಿ ಎಂದು ಕರೆ ನೀಡಿದರು.
ಶಾದುಲಿ ಜುಮಾ ಮಸೀದಿಯ ಖತೀಬರಾದ ಜ.ಶುಹೈಬ್ ಫೈಜಿ ಮಾತನಾಡಿ, ಶಿಕ್ಷಣ ಪಡೆಯುವ ವ್ಯಕ್ತಿಗೆ ಜಾತಿ, ಧರ್ಮದ ಪರಿಮಿತಿಯಿಲ್ಲ. ಸರ್ವ ಧರ್ಮದಲ್ಲಿ ಶಿಕ್ಷಣಕ್ಕೆ ಮಹತ್ವ ನೀಡಿದೆ. ಸರ್ವಾಂಗೀಯ ಉನ್ನತ್ತಿಯಾಗಲು ವಿದ್ಯಾ ಸಂಪನ್ನನಾಗಬೇಕು. ಇತ್ತಿಚಿನ ದಿನಗಳಲ್ಲಿ ಯುವ ಸಮದಾಯವು ಮಾದಕ ವ್ಯಸನಕ್ಕೆ ದಾಸರಾಗುತ್ತಿದ್ದಾರೆ. ವ್ಯಸನಗಳನ್ನು ಬಿಟ್ಟು ಸಮಾಜಕ್ಕೆ ಒಳಿತಾಗುವ ಕಾರ್ಯಕ್ಕೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಡೊನೇಟರ್ಸ್ ಚಾರಿಟೇಬಲ್ ಸಂಸ್ಥೆ ತನ್ನ ಧ್ಯೇಯೆ ಉದ್ದೇಶಗಳನ್ನು ಸಮಾಜ ಸೇವೆಗಾಗಿ ಮುಡಿಪಾಗಿಟ್ಟಿದೆ. ಇವರ ಸೇವೆಯು ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.
ಡೊನೇಟರ್ಸ್ ಚಾರಿಟೇಬಲ್ ಟ್ರಸ್ಟ್ ನ ಗೌ.ಅಧ್ಯಕ್ಷರಾದ ಮೊಹಮ್ಮದ್ ರಾಫಿ ಅವರು ಪ್ರಸ್ತಾವಿಕ ಭಾಷಣ ಮಾಡಿದರು. ಡೊನೇಟರ್ಸ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಆಲೀರ ಪವಿಲ್ ಉಸ್ಮಾನ್ ಅವರು ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ವಿರಾಜಪೇಟೆ ನಗರದ ವಿವಿಧ ಶಾಲೆಗಳಲ್ಲಿ ಓದುತ್ತಿರುವ ಸುಮಾರು 350 ಮಂದಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟು ಪುಸ್ತಕ ವಿತರಣೆ ಮಾಡಲಾಯಿತು. ಶೈಕ್ಷಣಿಕ ಕ್ಷೇತ್ರ, ಧರ್ಮ, ಶಿಕ್ಷಣ ಮತ್ತು ಸಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಸನ್ಮಾನ ಮಾಡಲಾಯಿತು.
ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರಾದ ಎಂ.ಕೆ. ಸಂಕೇತ್ ಪೂವಯ್ಯ, ಪುರಸಭೆಯ ಅಧ್ಯಕ್ಷರಾದ ಮನೆಪಂಡ ದೇಚಮ್ಮ ಕಾಳಪ್ಪ, ಪುರಸಭೆಯ ಸದಸ್ಯರಾದ ಪಟ್ಟಡ ರಂಜಿ ಪೂಣಚ್ಚ, ಎಲ್.ಎಸ್.ಎ. ಅಕಾಡೆಮಿಯ ಅಧ್ಯಕ್ಷರಾದ ಪೂಜಾ ರವೀಂದ್ರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಅಕ್ರಮ ಸಕ್ರಮ ಸಮಿತಿ ವಿರಾಜಪೇಟೆ ಅಧ್ಯಕ್ಷರಾದ ಆರ್.ಕೆ. ಅಬ್ದುಲ್ ಸಲಾಂ, ಉದ್ಯಮಿ, ಅಲ್ತಾಫ್, ನಾಗರಾಜ್ ಚುಪ್ಪ, ಆರ್.ಎಸ್.ಎಲ್ ರಶೀದ್ ಡೊನೇಟರ್ಸ್ ಚಾರಿಟೇಬಲ್ ಟ್ರಸ್ಟ್ ( ಯೂತ್ ವಿಂಗ್) ಅಧ್ಯಕ್ಷರಾದ ಮೊಹಮ್ಮದ್ ಫಾಹಿಸ್ ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡೊನೇಟರ್ಸ್ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳು ಸದಸ್ಯರು ವಿವಿಧ ಶಾಲೆಯ ವಿದ್ಯಾರ್ಥಿಗಳು, ಪೋಷಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ವರದಿ: ಕಿಶೋರ್ ಕುಮಾರ್ ಶೆಟ್ಟಿ
What's Your Reaction?






