ಬಲಿಜ ಜನಾಂಗದ 2ಎ ಮೀಸಲಾತಿಗೆ ಬೆಂಬಲ:ಶಾಸಕ ಎ.ಎಸ್ ಪೊನ್ನಣ್ಣ

ಗೋಣಿಕೊಪ್ಪಲು: ಬಲಿಜ ಜನಾಂಗವು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಹಾಗೂ ಬಲಿಜರ ಹಕ್ಕೊತ್ತಾಯಕ್ಕೆ ಪೂರಕವಾಗಿ ಸ್ಪಂದಿಸುವ ಮೂಲಕ 2ಎ ಮೀಸಲಾತಿಯನ್ನು ಮತ್ತೆ ದೊರಕಿಸಿಕೊಡಲು ಶ್ರಮಿಸುವದಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಭರವಸೆ ನೀಡಿದ್ದಾರೆ.
ಕೊಡಗು ಬಲಿಜ ಸಮಾಜ ವತಿಯಿಂದ ತಾ.15 ರಂದು ಪೊನ್ನಂಪೇಟೆಯ 'ಕೇವ್ ಇನ್ ' ಸಭಾಂಗಣದಲ್ಲಿ ಜರುಗಿದ ಪ್ರಥಮ ವರ್ಷದ ಬಲಿಜ ವಿದ್ಯಾರ್ಥಿ ವೇತನ ಕಾರ್ಯಕ್ರಮವನ್ನು ಕಾಲಜ್ಞಾನಿ ಕೈವಾರ ತಾತಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಜ್ಯೋತಿ ಬೆಳಗಿಸಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಕೊಡಗು ಬಲಿಜ ಸಮಾಜದ ಮೂಲಕ ಇಂದು ತನಗೆ ಬಲಿಜರಿಗೆ 2 ಎ ತಾರತಮ್ಯದ ಕುರಿತು ನೀಡಲಾದ ಮನವಿ ನೈಜತೆಗೆ ಹತ್ತಿರವಾಗಿದೆ.ಈ ಹಿಂದೆ 2014 ರಲ್ಲಿ ಅತೀ ಹಿಂದುಳಿದ ವರ್ಗಗಳ ಆಯೋಗಗಳ ಸಮೀಕ್ಷೆಗಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸಚಿವ ಸಂಪುಟ ಕಾಂತರಾಜ್ ಆಯೋಗವನ್ನು ರಚಿಸಿದ್ದು ಹಿಂದುಳಿದ ವರ್ಗಗಳ ಸಮೀಕ್ಷಾ ವರದಿಯನ್ನು ನಂತರದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿಯೂ ಬಿಡುಗಡೆ ಮಾಡಿರುವುದಿಲ್ಲ.ಕಾಂತರಾಜ್ ಆಯೋಗದ ವರದಿ ಪುನರ್ ಪರಿಶೀಲಿಸುವ ಅಗತ್ಯವಿದೆ ಹಾಗೂ ಇದೀಗ ಮಧುಸೂದನ್ ನಾಯಕ್ ಆಯೋಗ ರಚಿಸಲಾಗಿದ್ದು ಪ್ರತೀ ಹತ್ತು ವರ್ಷಗಳಿಗೆ ಒಮ್ಮೆ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಸಮೀಕ್ಷೆ ನಡೆಸುವಂತೆ ಜೂ .12 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಿದೆ. ಮುಂದಿನ 90 ದಿನಗಳ ಅವಧಿಯಲ್ಲಿ ಸಮೀಕ್ಷೆ ಪೂರ್ಣಗೊಳ್ಳಲಿದ್ದು ಮಧುಸೂದನ್ ಆಯೋಗದ ಸಭೆಗೆ ಬಲಿಜ ಸಮಾಜದ ಪ್ರತಿನಿಧಿಗಳನ್ನು ಆಹ್ವಾನಿಸುವ ಮೂಲಕ 2ಎ ಅರ್ಹವಾಗಿ ಕೊಡಬೇಕಾಗಿರುವ ಬಗ್ಗೆ ಪುನರ್ ಪರಿಶೀಲನೆ ಮಾಡಲಾಗುವದು.ಅಗತ್ಯಬಿದ್ದಲ್ಲಿ ತಾನೂ ಬಲಿಜರ ನ್ಯಾಯೋಚಿತ ಬೇಡಿಕೆ ಪರವಾಗಿ ಆಯೋಗದ ಸಭೆಗೆ ಹಾಜರಾಗುವೆ. ಕೊಡಗು ಬಲಿಜ ಸಮಾಜದ ಮನವಿಯಲ್ಲಿ ಶಿಕ್ಷಣಕ್ಕೆ ಮಾತ್ರಾ 2ಎ ನೀಡಿರುವದು ತನಗೆ ತಿಳಿಯಿತು.ಬಲಿಜ ಜನಾಂಗದ ಪ್ರಾಮಾಣಿಕ ಬೇಡಿಕೆಗೆ ತಾನು ಮುಂದಿನ ದಿನಗಳಲ್ಲಿ ಪ್ರಾಮಾಣಿಕವಾಗಿ ಸ್ಪಂದಿಸುವದಾಗಿ ಹೇಳಿದರು.
ಬಲಿಜ ಸಮುದಾಯ ಅತಿ ಸಣ್ಣ ಸಮುದಾಯ ಹಾಗೂ ಅವರಿಗೆ ಮೀಸಲಾತಿಯಲ್ಲಿ ಆಗಿರುವ ತಾರತಮ್ಯವನ್ನು ಸಂವೀಧಾನ ಅಡಿಯಲ್ಲಿ ಪುನರ್ ಪರಿಶೀಲನೆ ಮಾಡಿ ನ್ಯಾಯದೊರಕಿಸಲು ಶ್ರಮಿಸುವದಾಗಿ ಹೇಳಿದರು.ಸರ್ವೊಚ್ಛ ನ್ಯಾಯಾಲಯದ ಆದೇಶದಲ್ಲಿ ದೇಶದ ಎಲ್ಲ ರಾಜ್ಯಗಳಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ರಚನೆ ಆಗಬೇಕು ಹಾಗೂ ಜಾತಿವಾರು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಪ್ರತಿ 10 ವರ್ಷಗಳಿಗೊಮ್ಮೆ ನಡೆಯಬೇಕಾದ ಹಿನ್ನೆಲೆ ನಮ್ಮ ಸರ್ಕಾರವೂ ನಿರ್ಧಾರ ಕೈಗೊಂಡಿದೆ ಎಂದರು.
ಇದೇ ಸಂದರ್ಭ ಬೆಟ್ಟದ ಪುರದ ಎರಡು ಸಂಪೂರ್ಣ ದೃಷ್ಠಿ ಕಳೆದುಕೊಂಡಿದ್ದ ಟಿ.ಆರ್.ರಾಣಿ ಅವರಿಗೆ ಸರ್ಕಾರಿ ಉದ್ಯೋಗವನ್ನು ಪೊನ್ನಣ್ಣ ಅವರು ಕಲ್ಪಿಸಿಕೊಟ್ಟ ಹಿನ್ನೆಲೆ ಕೊಡಗು ಬಲಿಜ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಕೇವಲ ಬಲಿಜರಲ್ಲ ಯಾವದೇ ಶೋಷಿತ ವರ್ಗದ ಮಕ್ಕಳಿಗೆ ಉದ್ಯೋಗ ಹಾಗೂ ಶೈಕ್ಷಣಿಕ ಪ್ರಗತಿಗೆ ತಾನು ಸ್ಪಂದಿಸುವದಾಗಿ ಇದೇ ಸಂದರ್ಭ ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಡಾ.ಬಿ.ಎಂ.ರವಿನಾಯ್ಡು ಅವರು , ರಾಜ್ಯದಲ್ಲಿ ಬಲಿಜ ಜನಾಂಗದಲ್ಲಿ ಒಗ್ಗಟ್ಟು ಹಾಗೂ ಸಂಘಟಿತ ಹೋರಾಟದ ಕೊರತೆ ಇದೆ.ಈ ನಿಟ್ಟಿನಲ್ಲಿ ಕೊಡಗು ಬಲಿಜ ಸಮಾಜ ಬಲಿಜ ಸಮುದಾಯ ಜನಪರ ಕೆಲಸವನ್ನು ಕಳೆದ 10 ವರ್ಷಗಳಿಂದ ಮಾಡುತ್ತಾ ಬಂದಿದೆ.ಕ್ರೀಡೋತ್ಸವ, ಉಚಿತ ಆರೋಗ್ಯ ತಪಾಸಣೆ,ವಿದ್ಯಾರ್ಥಿ ವೇತನ , ಶೋಷಿತ ವರ್ಗಕ್ಕೆ ಸಹಕಾರ ನೀಡುತ್ತಾ ಬಂದಿದ್ದು, ತಾವು ಮತ್ತು ಕುಟುಂಬ ಕೊಡಗು ಬಲಿಜ ಸಮಾಜದ ನೆರವಿಗೆ ಸದಾ ಸಿದ್ಧರಿದ್ದೇವೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಅವರು ಮಾತನಾಡಿ, ಕೊಡಗು ಬಲಿಜ ಸಮುದಾಯ ಸಣ್ಣ ಸಮುದಾಯವಾಗಿದ್ದರೂ ಬಲಿಜ ವಿದ್ಯಾರ್ಥಿ ಗಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಿರುವದು ಹೆಮ್ಮೆಯ ವಿಚಾರ.ಕೊಡಗು ಬಲಿಜ ಸಮಾಜ , ಪೋಷಕರಿಗೆ, ಸಮುದಾಯದ ಜನತೆಗೆ ನಮ್ಮ ಸಂಘದ ರೈತ ಕುಟುಂಬ ಸದಾ ಜತೆಗಿದ್ದು ಸಹಕಾರ ನೀಡಲಿದ್ದೇವೆ ಎಂದು ಹೇಳಿದರು.
ಕೊಡಗು ಗೌಡ ಸಮಾಜ ಒಕ್ಕೂಟದ ನಿರ್ದೇಶಕ ಕೆ.ಜಿ.ಅಶ್ವಿನಿಕುಮಾರ್ ಮಾತನಾಡಿ, ಸಮಾಜದ ಅಧ್ಯಕ್ಷರಿಂದ ಬಲಿಜ ಸಮುದಾಯದ ಬಗ್ಗೆ ಅರಿತುಕೊಂಡೆ.ಕೊಡಗಿನಲ್ಲಿ ರಾಜರ ಕಾಲದಲ್ಲಿ ಮಂಗಳದೃವ್ಯ ಇತ್ಯಾದಿ ವ್ಯಾಪಾರಕ್ಕಾಗಿ ಬಂದ ಬಲಿಜ ಜನಾಂಗದ ಹೆಸರಿನಲ್ಲಿ ತೆಲುಗರ ಬೀದಿ ಇತ್ಯಾದಿ ರಸ್ತೆಗಳಿವೆ.ರಾಜರ ಕಾಲದಿಂದಲೂ ನೆಲೆನಿಂತ ಸಣ್ಣ ಸಮುದಾಯಕ್ಕೆ ಎಲ್ಲರ ಬೆಂಬಲ ಅಗತ್ಯವಿದೆ ಎಂದು ಹೇಳಿದರು.
ವೀರಾಜಪೇಟೆ ಉಪ ಪೊಲೀಸ್ ಅಧೀಕ್ಷಕ ಎಸ್.ಮಹೇಶ್ ಕುಮಾರ್ ಅವರು ಮಾತನಾಡಿ, ವಿದ್ಯಾರ್ಥಿ ವೇತನ ನೀಡುವ ಮೂಲಕ ಶೈಕ್ಷಣಿಕ ಪ್ರಗತಿಗೆ ಉತ್ತೇಜನ ನೀಡುತ್ತಿರುವದು ಉತ್ತಮ ಸಮಾಜ ಮುಖಿ ಕೆಲಸ.ವಿದ್ಯಾರ್ಥಿ ವೇತನ ಒಂದು ಸಾಂಕೇತಿಕ ವಿಚಾರ.ಮುಂದೆ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ವಿದ್ಯಾರ್ಥಿ ಗಳು ಹೆಚ್ಚು ಹೊತ್ತು ನೀಡಬೇಕು.ಈ ನಿಟ್ಟಿನಲ್ಲಿ ಕೊಡಗು ಬಲಿಜ ಸಮಾಜ ಉತ್ತಮ ಕೆಲಸ ಮಾಡುತ್ತಿರುವದು ಕೇಳಿದ್ದೇನೆ. ಟಿ.ಎಲ್.ಶ್ರೀನಿವಾಸ್ ಅವರನ್ನು ದೂರುವವರೂ ಇದ್ದಾರೆ.ನಮ್ಮ ಪೊಲೀಸ್ ವ್ಯವಸ್ಥೆಯಲ್ಲಿ ಯಾರ ವಿರುದ್ಧ ಹೆಚ್ಚು ದೂರು ಬರುತ್ತದೆಯೋ ಅವರು ತುಂಬಾ ಕೆಲಸ ಮಾಡುತ್ತಿದ್ದಾರೆ ಎಂದು ಅರ್ಥ.ಇದೀಗ ಸಮಾಜ ಅಧ್ಯಕ್ಷರಿಗೂ ಈ ಮಾತು ಅನ್ವಯಿಸುತ್ತದೆ ಎಂದು ಹೇಳಿ ಶುಭ ಹಾರೈಸಿದರು.
ಹಾಕಿ ಕೂರ್ಗ್ ಉಪಾಧ್ಯಕ್ಷೆ ಯಮುನಾ ಚಂಗಪ್ಪ ಅವರು ಮಾತನಾಡಿ, ಬಲಿಜ ಜನಾಂಗದ ಬಗ್ಗೆ ನನಗೆ ಏನೇನೂ ಮಾಹಿತಿ ಇರಲಿಲ್ಲ. ಮಂಡ್ಯದಲ್ಲಿ ಲೋಕಸಭಾ ಚುನಾವಣೆ ಸಂದರ್ಭ ಸುಮಲತಾ ಅವರ ಬಗ್ಗೆ ಮಾಜಿ ಸಂಸದ ಶಿವರಾಮೇಗೌಡ ಅವರು ಅವಹೇಳನ ಮಾಡಿದ ಸಂದರ್ಭ ಕೊಡಗು ಬಲಿಜ ಸಮಾಜದ ಮೂಲಕ ಮಂಡ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಾನೂ ಪಾಲ್ಗೊಂಡಿದ್ದೆ.ಗೋಷ್ಠಿಯ ನಂತರ ಶಿವರಾಮೇಗೌಡರು ಸಮಾಜದ ಅಧ್ಯಕ್ಷ ಶೀನಿವಾಸ್ ಅವರಲ್ಲಿ ಕರೆ ಮಾಡಿ ಖುದ್ದು ನಾಯ್ಡು ಜನಾಂಗದ ಕ್ಷಮೆಯಾಚಿಸಿದ್ದು ವ್ಯಯಕ್ತಿಕವಾಗಿ ನನಗೆ ಆಶ್ಚರ್ಯವಾಗಿತ್ತು.ಇದೀಗ ಸಮಾಜ ಮುಖಿಯಾಗಿ ವಿದ್ಯಾರ್ಥಿ ವೇತನ ನೀಡುವ ಮೂಲಕ ಹಾಗೂ ಮುಂದೆಯೂ ಬಲಿಜ ವಿದ್ಯಾರ್ಥಿ ಗಳ ಶಿಕ್ಷಣ ಹಾಗೂ ಉದ್ಯೋಗ ದೊರಕಿಸಲು ಕೊಡಗು ಬಲಿಜ ಸಮಾಜ ನಿರ್ಧರಿಸಿರುವದು ಉತ್ತಮ ಪ್ರಯತ್ನ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಚಿಕ್ಕ ಬಳ್ಳಾಪುರ ಕಸಾಪ ಮಾಜಿ ಅಧ್ಯಕ್ಷ ಕೈವಾರ ಶ್ರೀನಿವಾಸ್ ಅವರು ಕಾಲಜ್ಞಾನಿ ಯೋಗಿನಾರೇಯಣ ಯತೀಂದ್ರರ ಮಹಿಮೆ ಬಗ್ಗೆ ವಿವರಿಸಿದರು.
ಪಡಿಕಲ್ ಕುಸುಮಾವತಿ ಅವರು, ಕೊಡಗಿನಲ್ಲಿ ಮಹಿಳಾ ದೌರ್ಜನ್ಯ ಹೆಸರಿನಲ್ಲಿ ಹಲವು ಮಹಿಳೆಯರು ಪುರುಷರ ಮೇಲೆ ಸುಳ್ಳು ದೌರ್ಜನ್ಯ ಪ್ರಕರಣ ದಾಖಲಿಸಿ ತೇಜೋವಧೆ ಮಾಡುವಂತ ಕೆಟ್ಟ ಪ್ರಸಂಗವಿದೆ.ಈ ಬಗ್ಗೆಯೂ ಮುಂದೆ ಹೋರಾಟ ಮಾಡುವದಾಗಿ ನುಡಿದರು.
ಕಾ
ರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಬಲಿಜ ಸಮಾಜ ಉಪಾಧ್ಯಕ್ಷೆ ಹಾಗೂ ಶನಿವಾರಸಂತೆ ಗ್ರಾ.ಪಂ.ಅಧ್ಯಕ್ಷೆ ಗೀತಾ ಹರೀಶ್ ಅವರು, ಕೊಡಗು ಬಲಿಜ ಸಮಾಜ ಕಳೆದ 10 ವರ್ಷಗಳಿಂದಲೂ ಸಮುದಾಯದ ಅಭಿವೃದ್ಧಿ ಗೆ ಶ್ರಮಿಸುತ್ತಾ ಬಂದಿದೆ.ಬೇಗನೆ ಸಂಘದ ನೋಂದಾವಣೆ ಮಾಡುವ ಮೂಲಕ ಮತ್ತಷ್ಟು ಪ್ರಗತಿಪರ ಕೆಲಸ ಮಾಡೋಣ ಎಂದರು.
ವಿಶೇಷ ಆಹ್ವಾನಿತರಾಗಿ ಸಾಯಿ ಶಂಕರ ವಿದ್ಯಾಸಂಸ್ಥೆ ಮುಖ್ಯಸ್ಥ ಝರು ಗಣಪತಿ, ಎನ್.ಎಸ್.ಕಂದಾ ದೇವಯ್ಯ, ಬಿ.ಎನ್.ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.ಇದೇ ಸಂದರ್ಭ ಪರಿಸರ ಸಂರಕ್ಷಣೆಗಾಗಿ ರಾಜ್ಯದ ವಿವಿಧೆಡೆ ಸುಮಾರು 1.50 ಲಕ್ಷ ಮರ ಬೆಳೆಸಲು ಸಸಿ ನೆಟ್ಟು ಪೊಷೀಸುತ್ತಿರುವ ಹಾಗೂ ಸಮಾಜ ಸೇವಕ ಬೆಂಗಳೂರಿ ಆರ್.ಲೀಲಾಕೃಷ್ಣ- ನಿವೇದಿತಾ ದಂಪತಿಯನ್ನು ಸನ್ಮಾನಿಸಲಾಯಿತು.
ಸಮಾಜದ ಪದಾಧಿಕಾರಿಗಳಾದ ಟಿ.ಸಿ.ಶ್ಯಾಮಲಾ, ಟಿ.ಆರ್.ವಿಜಯ, ಯತಿರಾಜ್, ಶೋಭ ಶಾಂತ್ ರಾಜ್, ದಿವ್ಯ ರಮೇಶ್,ದಿನೇಶ್, ಯೋಗೇಶ್, ಇಂಜಿಲಗೆರೆ ಭಗವತಿ ಬಲಿಜ ಕ್ರಿಕೇಟರ್ಸ್ ನ ಹರೀಶ್ ಉಪಸ್ಥಿತರಿದ್ದರು. ಕೊಡಗು ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್, ವಕೀಲೆ ಶೀತಲ್ ನಾಯ್ಡು ಕಾರ್ಯಕ್ರಮ ನಿರೂಪಣೆ ಮಾಡಿದರು.
.
What's Your Reaction?






