ಬಿವೈಬಿಎಫ್.ಸಿ ಮುಂಬೈ ಮಡಿಲಿಗೆ ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್ ಐತಿಹಾಸಿಕ ಫುಟ್ಬಾಲ್ ಪಂದ್ಯಾವಳಿಗೆ ವರ್ಣರಂಜಿತ ತೆರೆ
( ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ: ಆಲ್ ಸ್ಟಾರ್ ಯೂತ್ ಕ್ಲಬ್ ಗೋಣಿಕೊಪ್ಪ ಮೇ 01ರಿಂದ 04ರವರೆಗೆ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಕೊಡಗು ವರ್ಲ್ಡ್ ಕಪ್ ಆಲ್ ಇಂಡಿಯಾ ಸೂಪರ್ ಫೈವ್ಸ್ ಫುಟ್ಬಾಲ್ ಪಂದ್ಯವಾಳಿಯಲ್ಲಿ ಬಿವೈಬಿಎಫ್.ಸಿ ಮುಂಬೈ ತಂಡವು 3-1 ಗೋಲುಗಳ ಅಂತರದಿಂದ ಫೈನಲ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವುದರ ಮೂಲಕ ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ.ಕೇರಳದ ಮೂಲದ ಆಟಗಾರರನ್ನೊಳಗೊಂಡ ಕಲ್ಲುಬಾಯ್ಸ್ ಕಲ್ಲುಬಾಣೆ ಹಾಗೂ ಬಿವೈಬಿಎಫ್.ಸಿ ಮುಂಬೈ ತಂಡಗಳ ನಡುವಿನ ಜಿದ್ದಾಜಿದ್ದಿನ ಫೈನಲ್ ಪಂದ್ಯದಲ್ಲಿ ಮುಂಬೈ ತಂಡವು ಮೊದಲಾರ್ಧ ಆರಂಭದಲ್ಲೇ ಗೋಲು ಬಾರಿಸಿ ಮುನ್ನಡೆ ಪಡೆದರು.ಆದರೆ ಆಕ್ರಮಣಕಾರಿ ಆಟಕ್ಕೆ ಮುಂದಾದ ಕಲ್ಲುಬಾಯ್ಸ್ ತಂಡವು ಮೊದಲಾರ್ಧದಲ್ಲೇ ಮುಂಬೈ ತಂಡಕ್ಕೆ ಎದಿರೇಟು ನೀಡಿ ಗೋಲು ಬಾರಿಸಿ ಸಮಬಲ ಸಾಧಿಸಿತು.ದ್ವಿತೀಯಾರ್ಧ ಆರಂಭದಲ್ಲೇ ಮತ್ತಷ್ಟು ಲಾಂಗ್ ಪಾಸ್ ಮೂಲಕ ಆಕ್ರಮಣಕಾರಿ ಆಟಕ್ಕೆ ಮುಂದಾದ ಮುಂಬೈ ತಂಡವು 2 ಗೋಲುಗಳನ್ನು ಬಾರಿಸಿ ವಿಜಯದಮಾಲೆ ಖಚಿತಪಡಿಸಿಕೊಂಡರು.ಅಂತಿಮವಾಗಿ ನಿಗದಿತ ಸಮಯದಲ್ಲಿ 3-1 ಗೋಲುಗಳ ಅಂತರದಿಂದ ಮುಂಬೈ ತಂಡವು ಫೈನಲ್ ನಲ್ಲಿ ಗೆಲುವು ಸಾಧಿಸಿ ಕೊಡಗು ವರ್ಲ್ಡ್ ಕಪ್ ಪ್ರಶಸ್ತಿಗೆ ಮುತ್ತಿಟ್ಟಿತು.
ಮುಂಬೈ ಕೂಲ್ ಕೂಲ್ ಆಟ ಪ್ರೇಕ್ಷಕರು ಫಿದಾ!
ಮುಂಬೈ ತಂಡವು ತನ್ನ ಮೊದಲ ಪಂದ್ಯದಲ್ಲಿ ಮೊದಲಾರ್ಧದಲ್ಲಿ ಎರಡು ಗೋಲುಗಳಿಂದ ಸ್ಟಾರ್ಮ್ ಹಾತೂರು ತಂಡದ ವಿರುದ್ಧ ಹಿನ್ನಡೆ ಸಾಧಿಸಿತ್ತು. ಮುಂಬೈ ಮೂಲದ ತಂಡವಾಗಿರುವುದರಿಂದ ಬಹುತೇಕ ಪ್ರೇಕ್ಷಕರಿಗೆ ಹಾಗೂ ಕ್ರೀಡಾಭಿಮಾನಿಗಳಿಗೆ ದೊಡ್ಡ ನಿರೀಕ್ಷೆ ಇತ್ತು.ಆದರೆ ಮೊದಲ ಪಂದ್ಯದಲ್ಲೇ ಕಳಪೆ ಪ್ರದರ್ಶನ ನೀಡಿದ ಮುಂಬೈ, ಮೊದಲ ಪಂದ್ಯ ದ್ವಿತೀಯಾರ್ಧದಲ್ಲಿ 04 ಗೋಲುಗಳನ್ನು ಬಾರಿಸಿ ಗೆಲುವು ನಗೆ ಬೀರಿ ಪ್ರೇಕ್ಷಕರಿಗೆ ರಸದೌತಣ ನೀಡಿತ್ತು.ಆ ನಂತರದ ಎಲ್ಲಾ ಪಂದ್ಯಗಳಲ್ಲಿ ಇಡೀ ಪ್ರೇಕ್ಷಕರ ಮನಗೆದ್ದ ಮುಂಬೈ ತಂಡದ ಆಟಗಾರರು ಯಾವುದೇ ರೀತಿಯ ಒತ್ತಡದ ಆಟಕ್ಕೆ ಮುಂದಾಗದೆ ಶಿಸ್ತಿನ ಆಟದ ಮೂಲಕ ಇಡೀ ಗ್ಯಾಲರಿಯಲ್ಲಿ ನೆರೆದಿದ್ದ ಕ್ರೀಡಾಭಿಮಾನಿಗಳ ಮನೆಗೆಲ್ಲುವುದರೊಂದಿಗೆ ಕೊಡಗು ವರ್ಲ್ಡ್ ಕಪ್ ಕೂಡ ತನ್ನದಾಗಿಸಿಕೊಂಡಿದೆ.
ಮಳೆರಾಯನ ಮುನಿಸಿ, ಮಳೆಯನ್ನೇ ಎದುರಿಸಿ ನಿಂತ ಆಲ್ ಸ್ಟಾರ್ ತಂಡ!
ಕೊಡಗು ವರ್ಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿಯ ಎರಡನೇ ದಿನ ಶುಕ್ರವಾರ ದಿನ ಸಂಜೆ ಮಳೆ ಸುರಿದ ಕಾರಣ ಮೈದಾನ ಒದ್ದೆಯಾಗಿ ಆಡಲು ಸಾಧ್ಯವಾಗದೆ ಶುಕ್ರವಾರ "ಡಿ" ಪೂಲ್ ಪಂದ್ಯಗಳನ್ನು ಶನಿವಾರಕ್ಕೆ ಮುಂದೂಡಲಾಗಿತ್ತು.ಆದರೆ ಭಾನುವಾರ ದಿನ ಕ್ವಾಟರ್ ಫೈನಲ್, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಬೇಕಿತ್ತು.ಸಂಜೆ ನಾಲ್ಕು ಗಂಟೆಗೆ ಪಂದ್ಯವನ್ನು ಆರಂಭಿಸುವ ಸಿದ್ಧತೆಯಲ್ಲಿದ್ದ ಆಲ್ ಸ್ಟಾರ್ ತಂಡಕ್ಕೆ ಭಾನುವಾರ ಮಧ್ಯಾಹ್ನ ಎರಡು ಗಂಟೆಗೆ ಸುರಿದ ಗಾಳಿ,ಮಳೆಗೆ ಇಡೀ ಮೈದಾನದಲ್ಲಿ ಸಂಪೂರ್ಣ ನೀರು ನಿಂತು ಕೆಸರು ಮಯವಾಗಿತ್ತು.ಮೈದಾನವೂ ಸಂಪೂರ್ಣವಾಗಿ ಕೆಸರಿನಿಂದ ತುಂಬಿ,ಗದ್ದೆಯಾಗಿ ಪರಿವರ್ತನೆಗೊಂಡಿತು.ಮಳೆರಾಯನ ಆರ್ಭಟ ನಿಂತ ನಂತರ ಪಂದ್ಯಾಟವನ್ನು ಮುಂದುರಿಸಲು ಕಷ್ಟ ಸಾಧ್ಯ ಎಂಬ ಪರಿಸ್ಥಿತಿ ಮೈದಾನದಲ್ಲಿ ನಿರ್ಮಾಣವಾಗಿತ್ತು.ಆದರೆ ಮಳೆರಾಯನು ತಲೆಬಾಗುವಂತೆ ಆಲ್ ಸ್ಟಾರ್ ತಂಡವು ಮೈದಾನದಲ್ಲಿ ನಿಂತಿದ್ದ ನೀರು,ಕೆಸರನ್ನು ಸಂಪೂರ್ಣವಾಗಿ ತೆರವುಗೊಳಿಸಿ ಮತ್ತೆ ಮೈದಾನವನ್ನು ಸಜ್ಜುಗೊಳಿಸಿ ಆಟಕ್ಕೆ ಅನುವುಮಾಡಿಕೊಟ್ಟರು.ಆಲ್ ಸ್ಟಾರ್ ಯುವಕರೊಂದಿಗೆ ಮಳೆಯ ಸಂದರ್ಭದಲ್ಲಿ ಮೈದಾನ ಸಜ್ಜುಗೊಳಿಸಲು ಜಿಪಿಎಲ್ ಗೋಣಿಕೊಪ್ಪ ತಂಡ ಹಾಗೂ ಇಲ್ಲಿನ ಕ್ರಿಕೆಟ್ ತಂಡವೊಂದು ಕೂಡ ಕೈಜೋಡಿಸಿದ್ದರು.
ಬೆಳಗ್ಗಿನ ಜಾವ 4 ಗಂಟೆಗೆ ಫೈನಲ್ ಕಾದಾಟ!
ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿಯ ಕೊನೆಯ ದಿನ ಭಾನುವಾರ ಮಳೆರಾಯನ ಮುನಿಸಿನಿಂದ ಪಂದ್ಯವು ತಡವಾಗಿ ಆರಂಭಗೊಂಡಿತ್ತು.ಕ್ವಾಟರ್ ಫೈನಲ್ ಪಂದ್ಯ ಆರಂಭವಾಗುತ್ತಿದ್ದಂತೆ ಜನರು ಕಿಕ್ಕಿರಿದು ಸೇರುತ್ತಿದ್ದರು.ಇಡೀ ಗ್ಯಾಲರಿ ಸಂಪೂರ್ಣ ಭರ್ತಿಯಾಗಿ, ಪ್ರೇಕ್ಷಕರು ನಿಂತುಕೊಂಡೇ ಪಂದ್ಯವನ್ನು ವೀಕ್ಷಣೆ ಮಾಡುತ್ತಿದ್ದರು.ಬೆಳಗ್ಗಿನ ಜಾವ 4 ಗಂಟೆಗೆ ಫೈನಲ್ ಪಂದ್ಯ ನಡೆಯುವ ಸಂದರ್ಭದಲ್ಲಿ ಕೂಡ ಇಡೀ ಗ್ಯಾಲರಿ ಭರ್ತಿಯಾಗಿತ್ತು.ಕ್ರೀಡಾಭಿಮಾನಿಗಳು ರಾತ್ರಿ ಎಂಟು ಗಂಟೆಯಿಂದ ಬೆಳಗ್ಗಿನ ಜಾವ 4.45 ಗಂಟೆಯವರೆಗೂ ಕೂಡ ಪಂದ್ಯವನ್ನು ವೀಕ್ಷಣೆ ಮಾಡಿದ್ದು ವಿಶೇಷವಾಗಿತ್ತು.
ಸಿಡಿಮದ್ದುಗಳ ಆರ್ಭಟ,ಕುಣಿದು ಕುಪ್ಪಳಿಸಿದ ಜನತೆ!
ಕೊಡಗು ಜಿಲ್ಲೆಯ ಕ್ರೀಡಾ ಇತಿಹಾಸದಲ್ಲಿ ಐತಿಹಾಸಿಕ ಕ್ಷಣಕ್ಕೆ ಭಾನುವಾರ ಮಧ್ಯರಾತ್ರಿ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನ ಸಾಕ್ಷಿಯಾಗಿತ್ತು.ಒಂದೆಡೆ ಇಡೀ ಗ್ಯಾಲರಿಯಲ್ಲಿ ಜನಸ್ತೋಮ ಮತ್ತೊಂದೆಡೆ ಆಟಗಾರರ ಆಟದ ಕಾಲ್ಚಳಕದ ಮಧ್ಯೆ ಆಲ್ ಸ್ಟಾರ್ ತಂಡವು ನೆರೆದಿದ್ದ ಕ್ರೀಡಾ ಪ್ರೇಕ್ಷಕರಿಗೆ ಗೋಣಿಕೊಪ್ಪಲಿನ ದಸರಾ ಅನುಭವವನ್ನು ಮರುಕಳಿಸುವಂತೆ ಮಾಡಿದ್ದರು.ಮೈದಾನದಲ್ಲಿ ಪಟಾಕಿಗಳ ಆರ್ಭಟ ಒಂದೆಡೆಯಾದರೆ, ಡಿಜೆಗೆ ಇಡೀ ಗ್ಯಾಲರಿಯಲ್ಲಿ ಕುಳಿತಿದ್ದ ಜನತೆ ಕುಣಿದು ಕುಪ್ಪಳಿಸಿ ಕೊಡಗು ವರ್ಲ್ಡ್ ಫುಟ್ಬಾಲ್ ಪಂದ್ಯಾವಳಿಯನ್ನು ಎಂಜಾಯ್ ಮಾಡಿದರು. ಮಂಗಳೂರು,ಕೇರಳ,ಮೈಸೂರು,ಬೆಂಗಳೂರು ಹಾಗೂ ಕೊಡಗು ಜಿಲ್ಲೆಯ ವಿವಿಧ ಭಾಗಗಳಿಂದ ಒಟ್ಟು 20 ಸಾವಿರಕ್ಕೂ ಅಧಿಕ ಮಂದಿ ಕೊಡಗು ವರ್ಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿಯನ್ನು ವೀಕ್ಷಿಸಿದ್ದಾರೆ.
ಡ್ರಗ್ಸ್ ಬಿಡಿ,ಫುಟ್ಬಾಲ್ ಆಡಿ ಮಾದರಿ ಸಂದೇಶ ನೀಡಿದ ಆಲ್ ಸ್ಟಾರ್!
ಒಂದೆಡೆ ಗ್ಯಾಲರಿಯಲ್ಲಿ ಕುಣಿದು ಕುಪ್ಪಳಿಸುತ್ತಿರುವ ಕ್ರೀಡಾಭಿಮಾನಿಗಳು,ಮತ್ತೊಂದೆಡೆ ಮೈದಾನದಲ್ಲಿ ಕೊಡಗು ವರ್ಲ್ಡ್ ಕಪ್ ಪ್ರಶಸ್ತಿಗೆ ಕಾದಾಟ ನಡೆಯುತ್ತಿತ್ತು.ಆದರೆ ಮಧ್ಯರಾತ್ರಿಯಲ್ಲಿ ಜಿಎಂಪಿ ಶಾಲಾ ಮೈದಾನದಲ್ಲಿ ನೆರೆದಿದ್ದ ಜನತೆಯನ್ನು ಐದು ನಿಮಿಷಗಳ ಮೌನಕ್ಕೆ ಕೊಂಡೊಯ್ಯಿದಿದ್ದರು.ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಮಾದಕ ವ್ಯಸನಗಳಿಂದಾಗುತ್ತಿರುವ ದುಷ್ಪರಿಣಾಮದ ಬಗ್ಗೆ ಎಲ್.ಇ.ಡಿ ಪರದೆಯಲ್ಲಿ ಐದು ನಿಮಿಷಗಳ ಕಾಲ ಕಿರು ವಿಡಿಯೋ ಚಿತ್ರಣವನ್ನು ಪ್ರದರ್ಶಿಸಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಿದರು.ಆಲ್ ಸ್ಟಾರ್ ತಂಡದ ಮಾದಕ ವ್ಯಸನಗಳ ಜಾಗೃತಿ ಕಾರ್ಯಕ್ಕೆ ಕಿರು ವಿಡಿಯೋ ಪ್ರದರ್ಶನದ ನಂತರ ಮೈದಾನದಲ್ಲಿ ನೆರೆದಿದ್ದ ಜನತೆ ಎದ್ದು ನಿಂತು ಚಪ್ಪಾಳೆ ತಟ್ಟಿ SAY NOT DRUGS, SAY YES FOOTBALL ಎಂಬ ಘೋಷವಾಕ್ಯವನ್ನು ಕೂಗುವುದರ ಮೂಲಕ ಆಲ್ ಸ್ಟಾರ್ ತಂಡದ ಸಮಾಜಮುಖಿ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಸೆಮಿಫೈನಲ್ ಪಂದ್ಯದ ಫಲಿತಾಂಶ:
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕಲ್ಲುಬಾಯ್ಸ್ ತಂಡವು 04-0 ಗೋಲುಗಳ ಅಂತರದಿಂದ ಸಿದ್ದಾಪುರ ಫ್ರೆಂಡ್ಸ್ ತಂಡವನ್ನು ಮಣಿಸಿ ಫೈನಲ್ ಗೆ ಲಗ್ಗೆಯಿಟ್ಟಿತು.ಕಲ್ಲುಬಾಯ್ಸ್ ತಂಡದ ಇಚ್ಚು ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದರು.ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಬಿವೈಬಿಎಫ್.ಸಿ ಮುಂಬೈ ತಂಡವು ಪೆನಾಲ್ಟಿ ಶೂಟೌಟ್ ನಲ್ಲಿ ರೋಚಕ ಗೆಲುವು ಸಾಧಿಸಿ ಫೈನಲ್ ಗೆ ಅರ್ಹತೆ ಪಡೆದುಕೊಂಡಿತು.ಅಮಿಗೋಸ್ ಕಲ್ಲುಬಾಯ್ಸ್ ಹಾಗೂ ಮುಂಬೈ ತಂಡವು ನಿಗದಿತ ಸಮಯದಲ್ಲಿ 1-1 ಗೋಲು ಗಳಿಸಿ ಸಮಬಲ ಸಾಧಿಸಿತು.ಅಂತಿಮವಾಗಿ ಪೆನಾಲ್ಟಿಯಲ್ಲಿ 3-2 ಗೋಲುಗಳ ಅಂತರದಿಂದ ಗೆದ್ದು ಫೈನಲ್ ಪ್ರವೇಶಿಸಿತು. ಮುಂಬೈ ತಂಡದ ಗೋಲ್ ಕೀಪರ್ ಸುಹಾಸ್ ದ್ವಿತೀಯ ಸೆಮಿಫೈನಲ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.ತೃತೀಯ ಸ್ಥಾನಕ್ಕೆ ಟಾಸ್ ಮೂಲಕ ಆಯ್ಕೆ ನಡೆಯಿತು.ತೃತೀಯ ಸ್ಥಾನವನ್ನು ಅಮಿಗೋಸ್ ಕಲ್ಲುಬಾಣೆ ಪಡೆದುಕೊಂಡರು. ನಾಲ್ಕನೇ ಸ್ಥಾನವನ್ನು ಫ್ರೆಂಡ್ಸ್ ಎಫ್.ಸಿ ಸಿದ್ದಾಪುರ ಪಡೆದರು.
ವೈಯುಕ್ತಿಕ ಪ್ರಶಸ್ತಿಗಳ ವಿವರ:
ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್ ಆಲ್ ಇಂಡಿಯಾ ಸೂಪರ್ ಫೈವ್ಸ್ ಪಂದ್ಯಾವಳಿಯ ಬೆಸ್ಟ್ ಪ್ಲೇಯರ್ ಆಫ್-ದಿ ಮ್ಯಾಚ್ ಪ್ರಶಸ್ತಿಯನ್ನು ಬಿವೈಬಿಎಫ್.ಸಿ ಮುಂಬೈ ತಂಡದ ಸಚಿನ್ ಪಡೆದುಕೊಂಡರು.ಅತೀ ಹೆಚ್ಚು ಗೋಲುಬಾರಿಸಿದ ಆಟಗಾರ ಬಿವೈಬಿಎಫ್.ಸಿ ಸೌರಭ್,ಸ್ಟೈಲಿಶ್ ಆಟಗಾರ ಆತಿಥೇಯ ಆಲ್ ಸ್ಟಾರ್ ತಂಡದ ಮುನ್ನಡೆ ಆಟಗಾರ ಸುಹೈಲ್, ಉದಯೋನ್ಮುಖ ಆಟಗಾರ ಆಲ್ ಸ್ಟಾರ್ ತಂಡದ ಗೋಲ್ ಕೀಪರ್ ಇಚ್ಚಾಲು,ಬೆಸ್ಟ್ ಡಿಫೆಂಡರ್ ಕಲ್ಲುಬಾಯ್ಸ್ ತಂಡದ ಮೊಹಮ್ಮದ್, ಬೆಸ್ಟ್ ಸ್ಟ್ರೈಕರ್ ಕಲ್ಲುಬಾಯ್ಸ್ ತಂಡದ ಅಭಿ, ಬೆಸ್ಟ್ ಗೋಲ್ ಕೀಪರ್ ಬಿವೈಬಿಎಫ್.ಸಿ ತಂಡದ ಸಾಹಿಷ್, ಫೈನಲ್ ಪ್ಲೇಯರ್ ಆಫ್ ದಿ ಮ್ಯಾಚ್ ರೋಹನ್ ಬಿವೈಬಿಎಫ್.ಸಿ ಮುಂಬೈ ಹಾಗೂ ಅತ್ಯುತಮ ತಂಡದ ಪ್ರಶಸ್ತಿಯನ್ನು ಕ್ಯಾಪ್ಟನ್ಸ್ ಇಲೆವೆನ್ ಪಾಲಿಬೆಟ್ಟ ತಂಡ ಪಡೆದುಕೊಂಡಿತು.ನಾಲ್ಕು ದಿನಗಳ ಯಶಸ್ವಿಯಾಗಿ ಯಾವುದೇ ರೀತಿಯ ಗೊಂದಲಗಳಿಗೆ ಹಾಸ್ಪದ ನೀಡದೆ ತಮಿಳುನಾಡಿನ ಖ್ಯಾತ ತೀರ್ಪುಗಾರರಾದ ಕಾರ್ತಿಕೇಯನ್, ದಿನೇಶ್, ಮೋಹನ್ ಹಾಗೂ ಪ್ರಭು ಕಾರ್ಯನಿರ್ವಹಿಸಿದರು.
What's Your Reaction?






