ಕೂಡುಮಂಗಳೂರು ಗ್ರಾ.ಪಂ: ಅಧ್ಯಕ್ಷರಿಂದ ಸದಸ್ಯರ ಹಸ್ತಕ್ಷೇಪ, ಪ್ರತಿಭಟನೆಯ ಎಚ್ಚರಿಕೆ

ಕುಶಾಲನಗರ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಾಸ್ಕರ್ ನಾಯಕ್ ಅವರು ವಿಶ್ಬಾಸಕ್ಕೆ ತೆಗೆದುಕೊಳ್ಳದೇ ಸರ್ವಾಧಿಕಾರಿ ಧೋರಣೆಯನ್ನು ತೋರುತ್ತಿದ್ದಾರೆ ಎಂದು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ಕೆ.ಬಿ.ಶಂಶುದ್ಧೀನ್ ಅವರು ಆರೋಪಿಸಿದ್ದಾರೆ.
ಪತ್ರಕರ್ತರೊಡನೆ ಮಾತನಾಡಿದ ಅವರು, ಅಧ್ಯಕ್ಷರು ಸದಸ್ಯರ ಕೆಲಸ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದು ಅಧ್ಯಕ್ಷರಿಗೆ ಶೋಭೆ ತರುವಂತಹದ್ದಲ್ಲ. ಅಧ್ಯಕ್ಷರಾದವರು ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನಪರವಾದ ಕೆಲಸಗಳನ್ನು ಮಾಡಬೇಕು ಎಂದ ಅವರು, ಅಧಿಕಾರ ಶಾಶ್ವತವಲ್ಲ ಎಂಬುದನ್ನು ಅಧ್ಯಕ್ಷರು ಮನಗಾಣಬೇಕು ಎಂದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಕಸ ವಿಲೇವಾರಿ ಸಪರ್ಪಕವಾಗಿ ಆಗುತ್ತಿಲ್ಲ. ಚರಂಡಿ ಸ್ವಚ್ಚತೆ ಆಗುತ್ತಿಲ್ಲ. ಮಳೆಗಾಲದ ಸಮಯ ಚರಂಡಿ ಕಸದಿಂದ ಕಟ್ಟಿ ನಿಲ್ಲುತ್ತಿವೆ. ಸೊಳ್ಳೆಗಳು ನಿಂತು ಸಾರ್ವಜನಿಕರಿಗೆ ರೋಗರುಜಿನಗಳು ಹರಡುವ ಸಾಧ್ಯತೆಗಳಿವೆ. ಬೀದಿ ದೀಪ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ. ಅಂತ್ಯ ಸಂಸ್ಕಾರದ ಹಣ ಪಡೆಯಲು ಅಧ್ಯಕ್ಷರು ನಿಗಧಿಪಡಿಸಿದ ಸಮಯಕ್ಕೆ ಬರಬೇಕು. ತಿಂಗಳುಗಳು ಕಳೆದರೂ ಫಲಾನುಭವಿಗಳಿಗೆ ಚೆಕ್ ನೀಡುವುದಿಲ್ಲ. ಸಾರ್ವಜನಿಕರು ಕಚೇರಿಗೆ ಅಲೆದಾಡುಂತಾಗಿದೆ. ಅಧ್ಯಕ್ಷರು ಅಂತ್ಯ ಸಂಸ್ಕಾರ ಹಣವನ್ನು ಯಾವ ಉದ್ದೇಶಕ್ಕೆ ನೀಡುತ್ತಾತೆ ಎಂಬುದನ್ನೇ ಮರೆತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಬಹುಮುಖ್ಯವಾದ ಸಮಸ್ಯೆಗಳನ್ನು ಕೂಡಾ ಗಮನಹರಿಸುತ್ತಿಲ್ಲ. ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ಪಂಚಾಯಿತಿ ಮಾರುಕಟ್ಟೆ ಸ್ಥಳಾಂತರಿಸಬೇಕು. ಪಂಚಾಯಿತಿ ಕಟ್ಟಡ ನಿರ್ಮಿಸಲು ನಿವೇಶನ ಗುರುತಿಸಬೇಕು. ನಿವೇಶನ ರಹಿತರಿಗೆ ಈವರೆಗೆ ನಿವೇಶನ ನೀಡಲು ಆಗಲಿಲ್ಲ. ಜಲ್ ಜೀವನ್ ಮಿಷನ್ ಯೋಜನೆಯ ಕೆಲಸ ಪೂರ್ಣಗೊಂಡಿಲ್ಲ. ಹಾರಂಗಿ ಜಲಾಶಯಕ್ಕೆ ಆಗಮಿಸುವ ವಾಹನಗಳ ಪಾರ್ಕಿಂಗ್ ಶುಲ್ಕವನ್ನು ಪಂಚಾಯಿತಿಗೆ ಸಿಗುವ ಕೆಲಸವನ್ನು ಮಾಡಬೇಕು. ಈ ರೀತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬಹಳಷ್ಟು ಗಂಭೀರ ಸಮಸ್ಯೆಗಳಿವೆ. ಇವುಗಳ ಬಗ್ಗೆ ಸಭೆಗಳಲ್ಲಿ ಬಹಳಷ್ಟು ಬಾರಿ ಪ್ರಸ್ತಾಪಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಾರ್ವಜನಿಕರು ಅಧ್ಯಕ್ಷರ ಕಾರ್ಯವೈಖರಿಯನ್ನು ಗಮನಿಸುತ್ತಿದ್ದಾರೆ. ಇರುವ ಅಲ್ಪ ಅವಧಿಯಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಮಾಜಿ ಅಧ್ಯಕ್ಷರಾಗಿದ್ದ ಇಂದಿರಾ ರಮೇಶ್ ಅವರು ಅಧ್ಯಕ್ಷರಾಗಿದ್ದ ಸಮಯದಲ್ಲಿ ಸದಸ್ಯರ ಹಸ್ತಕ್ಷೇಪವಿರಲಿಲ್ಲ. ಹಿರಿಯರ, ಅನುಭವಿಗಳ ಸಲಹೆಗಳನ್ನು ಪಡೆಯಬೇಕು. ತಾನು ಅಧ್ಯಕ್ಷ ಎಂಬ ಅಹಂ ಬಿಟ್ಟು ಜನರ ಸಮಸ್ಯೆಗಳಿಗೆ ಸ್ಪಂಧಿಸಬೇಕು ಎಂದು ಒತ್ತಾಯಿಸಿದ ಅವರು, ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಿ ಊರಿನ ಸಮಾನ ಮನಸ್ಕರೊಡೆನೆ ಒಗ್ಗೂಡಿ ಪ್ರತಿಭಟನೆ ನಡೆಸಲಾಗುವುದು ಎಂದು ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಎಚ್ಚರಿಕೆ ನೀಡಿದ್ದಾರೆ.
What's Your Reaction?






