ಗೋಲ್ಡ್ ಕಪ್ ಫುಟ್ಬಾಲ್: ವಾಲ್ಪರೆ ಎಫ್.ಸಿ.ತಮಿಳುನಾಡು, ಟಿಬೆಟಿಯನ್ ಬೈಲುಕೊಪ್ಪೆ, ಕ್ಯಾಲಿಕಟ್ ಎಫ್.ಸಿ. ಹಾಗೂ ಟ್ರೆಡಿಶನಲ್ ಟೂರಿಸಂ ಎಫ್.ಸಿ.ತಿರುಚ್ಚಿ ತಂಡಗಳು ಕ್ವಾಟರ್ ಫೈನಲ್ ಗೆ ಲಗ್ಗೆ
ಸುಂಟಿಕೊಪ್ಪ: ಜಿಎಂಪಿ ಶಾಲಾ ಮೈದಾನದಲ್ಲಿ ಬ್ಲೂ ಬಾಯ್ಸ್ ಯುವಕ ಸಂಘದ ವತಿಯಿಂದ ನಡೆಯುತ್ತಿರುವ 26 ನೇ ವರ್ಷದ ಡಿ. ಶಿವಪ್ಪ ಸ್ಮಾರಕ ರಾಜ್ಯಮಟ್ಟದ ಗೋಲ್ಡ್ ಕಪ್ ಫುಟ್ಬಾಲ್ ಟೂರ್ನಿಯ ಗುರುವಾರ ನಡೆದ ಫ್ರೀ ಕ್ವಾರ್ಟರ್ ಪಂದ್ಯದಲ್ಲಿ ವಾಲ್ಪರೆ ಎಫ್.ಸಿ.ತಮಿಳುನಾಡು, ಟಿಬೆಟಿಯನ್ ಬೈಲುಕೊಪ್ಪೆ, ಕ್ಯಾಲಿಕಟ್ ಎಫ್.ಸಿ.ಕ್ಯಾಲಿಕಟ್, ಟ್ರೆಡಿಶನಲ್ ಟೂರಿಸಂ ಎಫ್.ಸಿ.ತಿರುಚ್ಚಿ ತಂಡಗಳು ಜಯಗಳಿಸಿ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಿದೆ.
ದಿನದ ಮೊದಲ ಪಂದ್ಯವು ಮೊಗ್ರಲ್ ಎಫ್.ಸಿ ಕುಂಬ್ಳೆ ಮತ್ತು ವಾಲ್ಪರೆ ಎಫ್.ಸಿ.ತಮಿಳುನಾಡು ತಂಡಗಳ ನಡುವೆ ನಡೆಯಿತು.ಪ್ರಾರಂಭದಿಂದಲೂ 2 ತಂಡಗಳು ಹೊಂದಾಣಿಕೆಯ ಆಟಕ್ಕೆ ಒತ್ತು ನೀಡಿ ಮನರಂಜನೆ ನೀಡಿದ್ದವು.ಎರಡು ತಂಡಗಳ ಆಕರ್ಷಕ ಆಟಗಳು ಕ್ರೀಡಾಭಿಮಾನಿಗಳ ಮನಸೂರೆಗೊಂಡಿತು.ನಂತರ ಶಿಸ್ತುಬದ್ಧ ಆಟಕ್ಕೆ ಗಮನಹರಿಸಿದ ತಮಿಳುನಾಡು ತಂಡ ಪಂದ್ಯದ ಮೊದಲಾರ್ಧದ 3ನೇ ನಿಮಿಷದಲ್ಲಿ ತಮಿಳುನಾಡು ತಂಡದ ಮುನ್ನಡೆ ಆಟಗಾರ ಶಿಬಿನ್ ಅವರು ಮೊದಲ ಗೋಲನ್ನು ಹೊಡೆಯುವುದರ ಮೂಲಕ ತಂಡಕ್ಕೆ ಮುನ್ನಡೆಯನ್ನು ತಂದುಕೊಟ್ಟರು. ಆನಂತರ ಬಿರುಸಿನ ಆಟಕ್ಕಿಳಿದ ತಮಿಳುನಾಡು ಮತ್ತು ಕುಂಬ್ಳೆ ತಂಡಗಳು ಗೋಲುಪಟ್ಟಿಗೆ ಹೊಡೆಯುವ ವಿಫಲ ಯತ್ನ ನಡೆಸಿದವು.ಈ ಮದ್ಯೆ 10 ನೇ ನಿಮಿಷದಲ್ಲಿ ನಿಖಿಲ್ ಅಯ್ಯಪ್ಪ ಗೋಲು ಬಾರಿಸಿ ಭದ್ರ ಅಡಿಪಾಯ ಹಾಕಿಕೊಟ್ಟರು.ಈ ಸಂತೋಷದ ಕ್ಷಣದಲ್ಲೇ ಕುಂಬ್ಳೆ ತಂಡದ ಆಟಗಾರ ನಿಶಾದ್ ಅವರು ಸಿಕ್ಕಿದ ಅವಕಾಶವನ್ನು ಬಳಸಿಕೊಂಡು ಗೋಲಾಗಿ ಪರಿವರ್ತಿಸಿದ ತಮಿಳುನಾಡು ತಂಡಕ್ಕೆ ಆಘಾತ ನೀಡಿದರು.ಇದರೊಂದಿಗೆ ತಮಿಳುನಾಡು ತಂಡ ಮೊದಲಾರ್ಧದಲ್ಲಿ 2-1ಗೋಲುಗಳ ಮುನ್ನಡೆ ಪಡೆದುಕೊಂಡಿತು.
ದ್ವಿತೀಯಾರ್ಧದಲ್ಲಿ ಹೊಂದಾಣಿಕೆ ಮತ್ತು ಚಾಕಚಕ್ಯತೆಯ ಆಟಕ್ಕೆ ಒತ್ತು ನೀಡಿದ ತಮಿಳುನಾಡು ತಂಡ ಕುಂಬ್ಳೆ ತಂಡದ ಕಣ್ತಪ್ಪಿಸಿ ಗೋಲು ಪಟ್ಟಿಗೆ ಹೊಡೆಯಲು ಪ್ರಯತ್ನಿಸಿದರೂ ತಂಡದ ಆಟಗಾರ ಮೆಲ್ವಿನ್ ಅವರು 8 ನಿಮಿಷದಲ್ಲಿ ಆಕರ್ಷಕ ಗೋಲು ಹೊಡೆದರು.ನಂತರ ಕುಂಬ್ಳೆ ತಂಡವನ್ನು ತನ್ನ ಚಾಣಕ್ಷ ಆಟದ ಮೂಲಕ ಬೆವರಿಳಿಸಿದರು. ಮತ್ತೆ 14 ನಿಮಿಷದಲ್ಲಿ ಮೆಲ್ವಿನ್ ಮತ್ತೊಂದು ಗೋಲು ಹೊಡೆದು ತಂಡಕ್ಕೆ ಮುನ್ನಡೆ ತಂದು ಕೊಟ್ಟರು. ಬಿರುಸಿನ ಆಟಕ್ಕೆ ಒತ್ತು ನೀಡಿದ ಕುಂಬ್ಳೆ ತಂಡ ಎದುರಾಳಿ ತಂಡದ ಗೋಲು ಪಟ್ಟಿಗೆ ಹೊಡೆದರೂ ಗೋಲು ಕೀಪರ್ ಅದನ್ನು ವಿಫಲಗೊಳಿಸಿದರು.ಈ ಮದ್ಯೆ ತಮಿಳುನಾಡು ತಂಡದ ಅನುಭವಿ ಆಟಗಾರ ನಿಖಿಲ್ ಅಯ್ಯಪ್ಪ ಕೊನೆಯ ನಿಮಿಷದಲ್ಲಿ ಒಂದು ಗೋಲನ್ನು ಬಾರಿಸಿ ತಮಿಳುನಾಡಕ್ಕೆ ಜಯದ ನಗು ತಂದರು.ಪಂದ್ಯದ ಕೊನೆಗೆ ಎರಡು ತಂಡಗಳು ಉತ್ತಮ ಪ್ರದರ್ಶನ ದೊಂದಿಗೆ ತಮಿಳುನಾಡು ತಂಡ 5-1 ಗೋಲುಗಳಿಂದ ಜಯಗಳಿಸಿ ಕ್ಯಾರ್ಟರ್ ಫೈನಲ್ ಗೆ ಪ್ರವೇಶಿಸಿತು.
ದಿನದ ಎರಡನೇ ಪಂದ್ಯವು ಟ್ರೆಡಿಶಿನಲ್ ಎಫ್.ಸಿ. ತಿರುಚ್ಚಿ ಮತ್ತು ಅಶೋಕ ಎಫ್.ಸಿ.ನೈಸೂರು ತಂಡಗಳ ನಡುವೆ ನಡೆಯಿತು.ಎರಡು ತಂಡಗಳು ಸಮಬಲದ ಪ್ರದರ್ಶನ ವನ್ನು ನೀಡುವುದರ ಮೂಲಕ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾದವು.ಈ ಹಂತದಲ್ಲಿ ತಿರುಚ್ಚಿ ತಂಡ ಬಿರುಸಿನ ಆಟಕ್ಕೆ ಒತ್ತು ನೀಡಿದವು.ಅತ್ಯಕರ್ಷಕ ಹೊಡೆತಗಳ ಮೂಲಕ ಮೈಸೂರು ತಂಡದ ಮೇಲೆ ಹಿಡಿತ ಸಾಧಿಸಿತು.ಈ ನಡುವೆ ತಿರುಚ್ಚಿ ತಂಡದ ಮುನ್ನಡೆ ಆಟಗಾರ ರಸೂಲ್ ಅವರು ಹೊಡೆದ ಚೆಂಡು ಗೋಲು ಕೀಪರ್ ತಡೆದರೂ ಗೋಲಾಗಿ ಪರಿವರ್ತನೆಗೊಂಡಿತು. ಮೈಸೂರು ತಂಡದ ಆಟಗಾರರು ಹೊಡೆದ ಚೆಂಡನ್ನು ತಿರುಚ್ಚಿ ತಂಡದ ಗೋಲುಕೀಪರ್ ಅಶ್ವಿನ್ ಆಕರ್ಷಕವಾಗಿ ತಡೆಯುವುದರ ಮೂಲಕ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು.
ನಂತರ 17 ನಿಮಿಷದಲ್ಲಿ ಜಯ್ ಹಾಗೂ 24 ನೇ ನಿಮಿಷದಲ್ಲಿ ಶ್ಯಾಮ್ ಅವರು ಗೋಲು ಬಾರಿಸುವ ಮೂಲಕ ಮೊದಲಾರ್ಥದಲ್ಲಿ 3-0 ಗೋಲುಗಳಿಂದ ತಿರುಚ್ಚಿ ತಂಡ ಮುನ್ನಡೆ ಪಡೆಯಿತು.ಪಂದ್ಯದ ದ್ವಿತೀಯಾರ್ಧದಲ್ಲಿ ಚೆಂಡಿನ ಮೇಲೆ ಹಿಡಿತ ಸಾಧಿಸಿದ ತಿರುಚ್ಚಿ ತಂಡ ಮೈಸೂರು ತಂಡಕ್ಕೆ ಅಡ್ಡಿಯಾಗಿ ನಿಂತಿತು.ಸಿಕ್ಕ ಅವಕಾಶವನ್ನು ಬಳಸಿಕೊಂಡ ತಿರುಚ್ಚಿ ತಂಡದ ಆಟಗಾರ ದುಲ್ಸನ್ ಅವರು 14 ನೇ ನಿಮಿಷದಲ್ಲಿ ಬಿರುಸಿನ ಹೊಡೆತದ ಮೂಲಕ ಗೋಲು ಗಳಿಸುವುದರಲ್ಲಿ ಸಫಲರಾದರು.ಕೊನೆಯ ಹಂತದಲ್ಲಿ ಶಿಸ್ತುಬದ್ಧ ಆಟಕ್ಕೆ ಒತ್ತು ನೀಡಿದ ಮೈಸೂರು ತಂಡದ ಆಟಗಾರರು ತಿರುಚ್ಚಿ ತಂಡದ ಮೇಲೆ ಆಕ್ರಮಣ ಮಾಡಲು ಮುಂದಾದರು.ಮೈಸೂರು ತಂಡದ ಪ್ರಶಾಂತ್ ಅವರು ಪಂದ್ಯದ 17 ಮತ್ತು 20 ನೇ ನಿಮಿಷದಲ್ಲಿ ಗೋಲು ಹೊಡೆಯುವ ಮೂಲಕ ನೆರೆದಿದ್ದ ಪ್ರೇಕ್ಷಕರಿಗೆ ಆಟದ ಮುದ ನೀಡಿದರು.ಕೊನೆಯ ಕ್ಷಣದಲ್ಲೂ ಗೋಲು ಹೊಡೆಯುವ ವಿಫಲ ಯತ್ನ ನಡೆಯುವುದರ ಮೂಲಕ ಟ್ರೆಡಿಶಿನಲ್ ಟೂರಿಸಂ ಎಫ್.ಸಿ ತಿರುಚ್ಚಿ ತಂಡವು 4-2 ಗೋಲುಗಳಿಂದ ಮೈಸೂರು ತಂಡವನ್ಜು ಸೋಲಿಸಿ ಕ್ಚಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟಿತು.
ಫುಟ್ ಬಾಲ್ ಟೂರ್ನಿಯ ಉದ್ಘಾಟನೆಯನ್ನು ಹಿರಿಯ ಆಟಗಾರ ಮೋಣಪ್ಪ ಪೂಜಾರಿ ಮತ್ತು ಡಿ.ಪನ್ಯ ತೋಟದ ಮಾಲೀಕರಾದ ಅಖಿಲೇಶ್ ಬಸಪ್ಪ ನೆರವೇರಿಸಿದರು.ಇದೇ ವೇಳೆ ಬಿಬಿವೈಸಿ ಅಧ್ಯಕ್ಷ ಆಲಿಕುಟ್ಟಿ, ಗೌರವಾಧ್ಯಕ್ಷ ಟಿ.ವಿ.ಪ್ರಸನ್ನ, ಪದಾಧಿಕಾರಿಗಳಾದ ಬಿ.ಕೆ.ಪ್ರಶಾಂತ್, ಅನಿಲ್ ಕುಮಾರ್, ಹಮೀದ್ ,ಆದಿಶೇಷ, ಗ್ರಾಮ ಪಂಚಾಯಿತಿ,ಉಪಾಧ್ಯಕ್ಷೆ ಶಿವಮ್ಮ, ಮಾಜಿ ಅಧ್ಯಕ್ಷ ಕೆ.ಇ.ಕರೀಂ ಇತರರು ಇದ್ದರು.ಕೆ.ಜಿ.ಎಫ್ ಮತ್ತು ಊಟಿ ತಂಡ ಮೈದಾನಕ್ಕೆ ಆಗಮಿಸದ ಹಿನ್ನಲೆಯಲ್ಲಿ ಟಿಬೆಟಿಯನ್ ಬೈಲುಕೊಪ್ಪ ಮತ್ತು ಕ್ಯಾಲಿಕಟ್ ತಂಡ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿವೆ.
ನಾಳಿನ ಕ್ವಾರ್ಟರ್ ಫೈನಲ್ ಪಂದ್ಯಗಳು:
ಮಧ್ಯಾಹ್ನ 1.30 ಗಂಟೆಗೆ ವಾಲ್ಪರೆ ಎಫ್.ಸಿ ತಮಿಳುನಾಡು ಮತ್ತು ಇಕೆಎನ್ ಎಫ್.ಸಿ.ಇರಿಟಿ, ಕಣ್ಣೂರು
ಮಧ್ಯಾಹ್ನ 2.30 ಗಂಟೆಗೆ ಮಿಡ್ ಸಿಟಿ ಎಫ್.ಸಿ.ಸುಂಟಿಕೊಪ್ಪ ಮತ್ತು ಟ್ರೆಡಿಶಿನಲ್ ಟೂರಿಸಂ ಎಫ್.ಸಿ.ತಿರುಚ್ಚಿ
ಮಧ್ಯಾಹ್ನ 3.30 ಗಂಟೆಗೆ ಟಿಬೆಟಿಯನ್ ಬೈಲುಕೊಪ್ಪ ಮತ್ತು ನೇತಾಜಿ ಯುವಕ ಸಂಘ ಕೊಡಗರಹಳ್ಳಿ
ಸಂಜೆ 5 ಗಂಟೆಗೆ ಬೆಟ್ಟಗೇರಿ ಎಫ್.ಸಿ.ಬೆಟ್ಟಗೇರಿ ಮತ್ತು ಕ್ಯಾಲಿಕಟ್ ಎಫ್.ಸಿ.ಕ್ಯಾಲಿಕಟ್