ಮಡಿಕೇರಿ ಹಾಸ್ಟೆಲ್ ಅವ್ಯವಸ್ಥೆ:ಮಳೆಯ ನಡುವೆ ರಾತ್ರಿ ಬೀದಿಗಿಳಿದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು
ಮಡಿಕೇರಿ(Coorg daily): ನಗರದ ಚೈನ್ ಗೇಟ್ ಬಳಿ ಇರುವ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿ ನಿಲಯದ ಅವ್ಯವಸ್ಥೆಯನ್ನು ಖಂಡಿಸಿ ವಿದ್ಯಾರ್ಥಿಗಳು ಸೋಮವಾರ ರಾತ್ರಿ ಎಂಟು ಗಂಟೆಗೆ ಹೊರಬಂದು ಪ್ರತಿಭಟನೆ ನಡೆಸಿದ್ದಾರೆ.ಹಾಸ್ಟೆಲ್ ನಲ್ಲಿ 60 ವಿದ್ಯಾರ್ಥಿಗಳಿದ್ದು ಅಗತ್ಯ ಸೌಲಭ್ಯಗಳಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಎರಡು ದಿನಗಳಿದಿಂದ ವಿದ್ಯುತ್ ಕೈಕೊಟ್ಟಿದ್ದು ಕುಡಿಯಲು, ಕೈ ತೊಳೆಯಲು ನೀರಿಲ್ಲ ಎಂಬಿತ್ಯಾದಿ ಸಮಸ್ಯೆ ಉಂಟಾಗಿದೆ ಎಂದು ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ. ಸಂಬಂಧಿಸಿದವರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ವಿದ್ಯಾರ್ಥಿಗಳು, ಆಕ್ರೋಶಗೊಂಡು ಮಳೆ -ಗಾಳಿ ನಡುವೆ ಹಾಸ್ಟೆಲ್ ನಿಂದ ಹೊರ ಬಂದು ಮಡಿಕೇರಿ ಜನರಲ್ ಕೆ.ಎಸ್. ತಿಮ್ಮಯ್ಯ ಸರ್ಕಲ್ ನಲ್ಲಿ ಧಿಕ್ಕಾರ ಕೂಗುತ್ತಾ ಪ್ರತಿಭಟನೆ ನಡೆಸಿರುವ ಘಟನೆ ಸೋಮವಾರ ನಡೆದಿದೆ.
