13 ವರ್ಷಗಳ ಪ್ರೀತಿ ಕೊಲೆಯಲ್ಲಿ ಅಂತ್ಯ | ಪತ್ನಿಯ ಮೇಲೆ ಸಂಶಯ; ಕಂಡಕ್ಟರ್ ಆಗಿದ್ದ ಪತ್ನಿಯನ್ನು ಕೊಲೆಗೈದ ಪೊಲೀಸ್ ಕಾನ್ಸ್ಟೇಬಲ್

13 ವರ್ಷಗಳ ಪ್ರೀತಿ ಕೊಲೆಯಲ್ಲಿ ಅಂತ್ಯ |  ಪತ್ನಿಯ ಮೇಲೆ ಸಂಶಯ; ಕಂಡಕ್ಟರ್ ಆಗಿದ್ದ ಪತ್ನಿಯನ್ನು ಕೊಲೆಗೈದ ಪೊಲೀಸ್ ಕಾನ್ಸ್ಟೇಬಲ್
Photo credit: The Indian express

ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಪತ್ನಿ ಮೇಲೆ ಸಂಶಯ ಪಟ್ಟು ಬರ್ಬರವಾಗಿ ಹತ್ಯೆಗೈದ ಪತಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಕೆಎಸ್‌ಆರ್‌ಟಿಸಿ ಬಸ್ ಲೇಡಿ ಕಂಡಕ್ಟರ್‌ ಕಾಶಮ್ಮ ನೆಲ್ಲಿಗಣಿ (34) ಅವರನ್ನು ಆಕೆಯ ಪತಿಯಾದ ಪೊಲೀಸ್ ಕಾನ್‌ಸ್ಟೇಬಲ್‌ ಸಂತೋಷ್ ಕಾಂಬಳೆ ಕತ್ತು ಕೊಯ್ದು, ಹೊಟ್ಟೆಗೆ ಮೂರು ಬಾರಿ ಇರಿದು ಹತ್ಯೆಗೈದಿದ್ದಾನೆ ಎಂದು ತಿಳಿದು ಬಂದಿದೆ.

ಸುಮಾರು 13 ವರ್ಷಗಳ ಹಿಂದೆ ಸಂತೋಷ್ ಹಾಗೂ ಕಾಶಮ್ಮ ಪ್ರೀತಿಸಿಮ ದುವೆಯಾಗಿದ್ದರು. ಮದುವೆಯಾದ ನಂತರ ಸಂತೋಷ್ ಪತ್ನಿಯ ಮೇಲೆ ನಿರಂತರವಾಗಿ ಸಂಶಯ ಪಟ್ಟು ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದನೆಂದು ತಿಳಿದುಬಂದಿದೆ. ಈ ಹಿಂಸೆಯನ್ನು ತಾಳಲಾರದೆ ಕಾಶಮ್ಮ ಗಂಡನಿಂದ ದೂರವಿದ್ದು, ತವರು ಮನೆ ಸೇರಿ ನಂತರ ಸವದತ್ತಿ ಡಿಪೋಗೆ ವರ್ಗಾವಣೆ ಪಡೆದು ಅಲ್ಲೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ವೈವಾಹಿಕ ಜೀವನದಲ್ಲಿ ನಡೆಯುತ್ತಿದ್ದ ನಿರಂತರ ಕಲಹದಿಂದ ಬೇಸತ್ತು ಕಾಶಮ್ಮ ಅವರು ಬೈಲಹೊಂಗಲ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿ, ಈ ವರ್ಷದ ಏಪ್ರಿಲ್ 5ರಂದು ಅಧಿಕೃತವಾಗಿ ವಿಚ್ಛೇದನ ಪಡೆದಿದ್ದರು. ಆದರೆ ವಿಚ್ಛೇದನದ ನಂತರವೂ ಸಂತೋಷ್ ಪತ್ನಿಗೆ ಫೋನ್ ಮೂಲಕ ನಿಂದನೆ ಹಾಗೂ ಬೆದರಿಕೆ ನೀಡುತ್ತಿದ್ದನೆಂದು ಕುಟುಂಬದವರು ತಿಳಿಸಿದ್ದಾರೆ.

ಅಕ್ಟೋಬರ್ 13ರ ರಾತ್ರಿ 8 ಗಂಟೆಯ ಸುಮಾರಿಗೆ ಸಂತೋಷ್ ಕಾಶಮ್ಮನ ಮನೆಗೆ ತೆರಳಿ ವಾಗ್ವಾದ ನಡೆಸಿದ ನಂತರ ಆಕೆಯ ಕತ್ತು ಕೊಯ್ದು, ಹೊಟ್ಟೆಗೆ ಇರಿದು ಹತ್ಯೆಗೈದು ಪರಾರಿಯಾಗಿದ್ದಾನೆ. ಮೂರು ದಿನಗಳ ಬಳಿಕ ಮನೆಯೊಳಗಿಂದ ದುರ್ವಾಸನೆ ಹೊರಹೊಮ್ಮುತ್ತಿದ್ದ ಹಿನ್ನೆಲೆಯಲ್ಲಿ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಸವದತ್ತಿ ಪೊಲೀಸರು ಶವವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಪರಾರಿಯಾಗಿರುವ ಆರೋಪಿ ಸಂತೋಷ್ ಕಾಂಬಳೆಯ ಪತ್ತೆಗಾಗಿ ಸವದತ್ತಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.