ಕೊಡವ ಲೆದರ್ ಬಾಲ್ ಕ್ರಿಕೆಟ್ ಲೀಗ್ ಗೆ ವರ್ಣರಂಜಿತ ತೆರೆ; ಅಂಜಿಗೇರಿ ನಾಡ್ ಚಾಂಪಿಯನ್, ಎಂಟಿಬಿ ರಾಯಲ್ಸ್ ರನ್ನರ್ ಅಪ್
ಗೋಣಿಕೊಪ್ಪಲು : ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ಗೋಣಿಕೊಪ್ಪಲು ಕಾವೇರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ 3 ನೇ ವರ್ಷದ ಟಿ 20 ಮಾದರಿಯ ಕೊಡವ ಲೆದರ್ ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್ ನ ಫೈನಲ್ ಪಂದ್ಯದಲ್ಲಿ ಎಂ.ಟಿ. ಬಿ ರಾಯಲ್ಸ್ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ತೀತಿರ ರೋಶನ್ ಅಪ್ಪಚ್ಚು, ಚೆಕ್ಕೇರ ಆದರ್ಶ್, ಬಯವಂಡ ಪ್ರತು ಪೂವಣ್ಣ, ಚೆಕ್ಕೇರ ಚಂದ್ರ ಪ್ರಕಾಶ್ ಮಾಲಿಕತ್ವದ ಅಂಜಿಗೇರಿ ನಾಡ್ ಚಾಂಪಿಯನ್ ಪಟ್ಟ ಅಲಂಕರಿಸಿತು.
ತ್ಯಾಗಿ, ಹಂಚೇಟಿರ ಶಿಪ್ರಜ್ ಸೋಮಣ್ಣ ಮಾಲೀಕತ್ವದ ಎಂ.ಟಿ.ಬಿ ರಾಯಲ್ಸ್ ರನ್ನರ್ ಆಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಅವರೆಮಾದಂಡ ಶರಣ್ ಪೂಣಚ್ಚ, ಪಾಡೆಯಂಡ ದೀಪಕ್ ದೇವಯ್ಯ, ಮುಕ್ಕಾಟೀರ ಮ್ಯಾಕ್ ತಿಮ್ಮಯ್ಯ, ಕರ್ನಂಡ ರಾಹುಲ್ ಕಾರ್ಯಪ್ಪ, ಕೋಳೇರ ಕೀರ್ತನ್ ಅಯ್ಯಮ್ಮ ಮಾಲಿಕತ್ವದ ಕೊಡವ ಟ್ರೈಬ್ ತೃತೀಯ ಸ್ಥಾನ, ಕಂಬೇಯಂಡ ಮೋಹನ್ ನಾಣಯ್ಯ ಮಾಲಿಕತ್ವದ ಕೂರ್ಗ್ ಟೈಟಾನ್ಸ್ ನಾಲ್ಕನೇ ಸ್ಥಾನ ಪಡೆದುಕೊಂಡವು.
ರೋಚಕ ಫೈನಲ್ ಪಂದ್ಯ : ಟಾಸ್ ಗೆದ್ದು ಎಂ.ಟಿ.ಬಿ ರಾಯಲ್ಸ್ ಕ್ಷೇತ್ರರಕ್ಷಣೆ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದ ಅಂಜಿಗೇರಿ ನಾಡ್, ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 175 ರನ್ ಗಳ ಉತ್ತಮ ಮೊತ್ತ ಕಲೆಹಾಕಿ, ಎಂ.ಟಿ.ಬಿ ರಾಯಲ್ಸ್ ಗೆ 176 ರನ್ ಗಳ ಗುರಿ ನೀಡಿತು. ಸುಮುಖ್ 51 ಎಸೆತಗಳಲ್ಲಿ 78 ರನ್ ಸಿಡಿಸಿದರು. ಮಂಜು. ಕೆ. ಬಿ 38 ಎಸೆತಗಲ್ಲಿ 33, ಪವನ್ ಉತ್ತಪ್ಪ 14 ಎಸೆತಗಳಲ್ಲಿ 29 ರನ್ ಗಳ ಕಾಣಿಕೆ ನೀಡಿದರು. ಎಂ.ಟಿ.ಬಿ ರಾಯಲ್ಸ್ ಪರ ಕರಣ್ 2, ಅಯ್ಯಪ್ಪ ಮತ್ತು ಶಿಪ್ರೆಜ್ ಸೋಮಣ್ಣ ತಲಾ 1 ವಿಕೆಟ್ ಪಡೆದರು.
176 ರನ್ ಗಳ ಗುರಿ ಬೆನ್ನಟ್ಟಿದ ಎಂ.ಟಿ.ಬಿ ರಾಯಲ್ಸ್ ಉತ್ತಮ ಆರಂಭ ಪಡೆದುಕೊಂಡು ಗೆಲುವಿನ ಆಸೆ ಚಿಗುರಿಸಿತ್ತು ನಂತರ ವಿಕೆಟ್ ಕಳೆದುಕೊಂಡ ಪರಿಣಾಮ, ಗೆಲುವಿಗಾಗಿ ತೀವ್ರ ಹೋರಾಟ ನಡೆಸಿತು. ಕೊನೆಯ ಎಸೆತದವರೆಗೂ ಕುತೂಹಲವನ್ನು ಕೆರಳಿಸಿದ್ದ ಪಂದ್ಯದಲ್ಲಿ 20 ಓವರ್ ಗಳ ಮುಕ್ತಾಯಕ್ಕೆ 6 ವಿಕೆಟ್ ಗಳನ್ನು ಕಳೆದುಕೊಂಡು 174 ರನ್ ಗಳಿಸಿದ ಎಂ.ಟಿ.ಬಿ ರಾಯಲ್ಸ್ 1 ರನ್ ಗಳಿಂದ ವೀರೋಚಿತ ಸೋಲನುಭವಿಸಿ, ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
ವೈಶಾಕ್ ತಿಮ್ಮಯ್ಯ 49 ಎಸೆತಗಳಲ್ಲಿ 70 ರನ್ ಬಾರಿಸಿದರು. ಮಿಥುನ್ ಮುತ್ತಣ್ಣ 28 ಎಸೆತಕ್ಕೆ 33, ಕವಿನ್ ಸುಬ್ಬಯ್ಯ 19 ಎಸೆತಗಳಲ್ಲಿ 22 ರನ್ ಗಳ ಕಾಣಿಕೆ ನೀಡಿದರು.
ಅಂಜಿಗೇರಿ ನಾಡ್ ಪರ ಗಗನ್ ಗಣಪತಿ 2, ಧನಿಕ್ ನಾಚಪ್ಪ, ರತನ್ ಮಂದಪ್ಪ, ಅಕರ್ಷ್ ಪೂವಯ್ಯ ತಲಾ 1ವಿಕೆಟ್ ಪಡೆದರು. ಅಂಜಿಗೇರಿ ನಾಡ್ ನ ಕೆಂಜಂಗಡ ಸುಮುಖ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು.
ವೈಯಕ್ತಿಕ ಪ್ರಶಸ್ತಿ : ಮ್ಯಾನ್ ಆಫ್ ದಿ ಸೀರಿಸ್ ಆಗಿ ಕೊಡವ ಟ್ರೈಬ್ ನ ಅಂಕುಶ್ ಬೋಪಣ್ಣ, ಬೆಸ್ಟ್ ಬ್ಯಾಟ್ಸ್ ಮನ್ ಆಗಿ ಅಂಜಿಗೇರಿ ನಾಡ್ ನ ಬಡುವಮಂಡ ಶಮಿತ್ ಸೋಮಣ್ಣ, ಬೆಸ್ಟ್ ಬೌಲರ್ ಆಗಿ ಎಂ.ಟಿ.ಬಿ. ರಾಯಲ್ಸ್ ನ ಅಪ್ಪಾರಂಡ ನೆಲ್ ದೇವಯ್ಯ, ಎಮರ್ಜಿಂಗ್ ಪ್ಲೇಯರ್ ಆಗಿ ಕೂರ್ಗ್ ಬ್ಲಾಸ್ಟರ್ಸ್ ನ ತಕ್ಷ್ , ಬೆಸ್ಟ್ ಕ್ಯಾಚ್ ಬ್ಲೇಜ್ ಬ್ರಿಗೇಡ್ ನ ಮಣವಟ್ಟಿರ ತರಣ್, ಅಪ್ ಕಮಿಂಗ್ ಕ್ರಿಕೆಟರ್ ಆಗಿ ಕೊಡವ ರೈಸಿಂಗ್ ಸ್ಟಾರ್ ನ ಮಾಳೇಟಿರ ಅನ್ಸುಲ್, ಲಾಂಗೆಸ್ಟ್ ಸಿಕ್ಸ್ ಪ್ರಗತಿ ಕ್ರಿಕೆಟ್ ಅಕಾಡಮಿಯ ಅಲೆನ್ ದೇವಯ್ಯ, ಬೆಸ್ಟ್ ವಿಕೆಟ್ ಕೀಪರ್ ಎಂ.ಟಿ. ಬಿ ರಾಯಲ್ಸ್ ನ ಚೆರುಮಂದಂಡ ಮಿಥುನ್ ಮುತ್ತಣ್ಣ, ಬೆಸ್ಟ್ ಫೀಲ್ಡರ್ ಅಂಜಿಗೇರಿ ನಾಡ್ ಬೊಜ್ಜoಗಡ ಗಗನ್ ಗಣಪತಿ, ಸೀನಿಯರ್ ಕ್ರಿಕೆಟರ್ ಎಂ.ಟಿ.ಬಿ ರಾಯಲ್ಸ್ ನ ಕೊಕ್ಕಲೇರ ಅಪ್ಪಯ್ಯ, ಯಂಗೆಸ್ಟ್ ಪ್ಲೇಯರ್ ಮಂಡಿರ ಕೃಷಿವ್, ಫೇರ್ ಪ್ಲೇ ಪ್ರಶಸ್ತಿಯನ್ನು ಟೀಮ್ ಲೆವರೇಜ್ ಪಡೆದುಕೊಂಡಿತು.
ಸ್ಥಳೀಯ ಆಟಗಾರರಿಗೆ ಅವಕಾಶ : ಪೊನ್ನಣ್ಣ:
ಬ್ಯಾಟಿಂಗ್ ಮಾಡುವ ಮೂಲಕ ಫೈನಲ್ ಪಂದ್ಯಕ್ಕೆ ಚಾಲನೆ ನೀಡಿದ, ವೀರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ. ಎಸ್. ಪೊನ್ನಣ್ಣ ಮಾತನಾಡಿ, ಕೊಡಗು ಹಲವಾರು ಒಲಂಪಿಯನ್ ಗಳು, ಕ್ರೀಡಾ ಪ್ರತಿಭೆಗಳನ್ನು ದೇಶಕ್ಕೆ ಕೊಡುಗೆಯಾಗಿ ಕೊಟ್ಟಿದೆ.
ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕ್ರೀಡಾ ಜಗತ್ತು ಮುನ್ನುಗುತ್ತಿದೆ. ಇದರ ಸದುಪಯೋಗವನ್ನು ಸ್ಥಳೀಯ ಕ್ರೀಡಾಪಟುಗಳು ಬಳಸಿಕೊಂಡರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಸಹಕಾರಿಯಾಗುತ್ತದೆ. ಸ್ಥಳೀಯ ಪ್ರತಿಭೆಗಳು ತಮಗೆ ಸಿಗುತ್ತಿರುವ ಸೌಲಭ್ಯಗಳನ್ನು ಹೆಚ್ಚು ಹೆಚ್ಚು ಬಳಸಿಕೊಂಡರೆ ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಬಹುದು.
ಕೊಡಗಿನ ಯುವಕ ಯುವತಿಯರಲ್ಲಿ ಪ್ರತಿಭೆ ಇದೆ, ಆದರೆ ಅವಕಾಶಗಳ ಕೊರತೆಯಿಂದ ಮುನ್ನುಗ್ಗಲು ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡು ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಆಯೋಜನೆಗೊಂಡಿರುವ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಹಲವಾರು ಸ್ಥಳೀಯ ಆಟಗಾರರಿಗೆ ಅವಕಾಶವನ್ನು ಒದಗಿಸಿಕೊಟ್ಟಿದ್ದು, ಮುಂದೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅವಕಾಶ ಸಿಕ್ಕಿ, ದೇಶಕ್ಕೆ ಕೀರ್ತಿ ತರುವಂತಾಗಲಿ ಎಂದು ಹಾರೈಸಿದರು.
ಬಹುಮಾನ ವಿತರಣೆ ಸಮಾರಂಭದಲ್ಲಿ ವೀರಾಜಪೇಟೆ ಅರ್ಜಿ ಗ್ರಾಮದ ವಾಲಗ ತಂಡದ ಸದಸ್ಯರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ರಾಷ್ಟ್ರಮಟ್ಟದ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಪದಕ ವಿಜೇತ ಅವಳಿ ಸಹೋದರರಾದ ಮಿನ್ನಂಡ ಲಿಖಿತ್ ಚಿಣ್ಣಪ್ಪ ಹಾಗೂ ಲೇಖಕ್ ಚಂಗಪ್ಪ ಅವರನ್ನು ಸನ್ಮಾನಿಸಲಾಯಿತು.
ವಾಲಗತ್ತಾಟ್ ಸ್ಪರ್ಧೆ ವಿಜೇತರು : ಪುರುಷರು ಮತ್ತು ಮಹಿಳೆಯರಿಗಾಗಿ ನಡೆಸಲಾದ ವಾಲಗತ್ತಾಟ್ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಮಹಿಳೆಯರಲ್ಲಿ ನಂಬುಡುಮಾಡ ಪಾಯಲ್ ಪೊನ್ನಪ್ಪ ಪ್ರಥಮ, ಬಿದ್ದಾಟಂಡ ಚಷ್ಮಾ ಚಿಣ್ಣಪ್ಪ ದ್ವಿತೀಯ, ಮತ್ರಂಡ ಗಾನ ದೇಚಮ್ಮ ತೃತೀಯ ಸ್ಥಾನ ಪಡೆದರು. ಪುರುಷರಲ್ಲಿ ಮತ್ರಂಡ ಹರ್ಷಿತ್ ಪೂವಯ್ಯ ಪ್ರಥಮ, ಜಮ್ಮಡ ಜಯಾ ಜೋಯಪ್ಪ ದ್ವಿತೀಯ, ಐಚೋಡಿಯಂಡ ನಿಲನ್ ಭೀಮಯ್ಯ ತೃತೀಯ ಸ್ಥಾನ ಗಳಿಸಿದರು.
ಸಮಾರಂಭದಲ್ಲಿ ಕೂರ್ಗ್ ಕ್ರಿಕೆಟ್ ಫೌಂಡೇಷನ್ ಮುಖ್ಯಸ್ಥ ಚೇರಂಡ ಕಿಶನ್ ಮಾದಪ್ಪ, ಕರ್ನಾಟಕ ಸರ್ಕಾರದ ಚೀಫ್ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ತೀತಿರ ರೋಷನ್ ಅಪ್ಪಚ್ಚು, ಸಮಾಜ ಸೇವಕ, ಕೊಡಗು ಗೌಡ ಯುವ ವೇದಿಕೆ ಉಪಾಧ್ಯಕ್ಷ ಪ್ರಸನ್ನ ಯಡೆಕೇರಿ, ಕಾವೇರಿ ಎಜುಕೇಷನ್ ಸೊಸೈಟಿ ನಿರ್ದೇಶಕ ಕೊಂಗಂಡ ಅಚ್ಚಯ್ಯ, ಪಂದ್ಯಾವಳಿ ಅಧ್ಯಕ್ಷ ಪೊರುಕೊಂಡ ಸುನಿಲ್, ಕೂರ್ಗ್ ಕ್ರಿಕೆಟ್ ಫೌಂಡೇಷನ್ ಉಪಾಧ್ಯಕ್ಷ ಪಾಲಚಂಡ ಜಗನ್ ಉತ್ತಪ್ಪ, ಮುಖ್ಯ ಕಾರ್ಯದರ್ಶಿ ಕೀತಿಯಂಡ ಗಣಪತಿ, ನಿರ್ದೇಶಕರಾದ ಕುಲ್ಲೇಟೀರ ಶಾಂತ ಕಾಳಪ್ಪ, ಟೂರ್ನಿ ನಿರ್ದೇಶಕ ಮಡ್ಲಂಡ ದರ್ಶನ್ ಪೆಮ್ಮಯ್ಯ, ನಿರ್ದೇಶಕರಾದ ಅಣ್ಣಳಮಾಡ ರಾಯ್ ಚಿಣ್ಣಪ್ಪ, ಚೇಂದೀರ ರಚನ್ ಚಿಣ್ಣಪ್ಪ, ಬಲ್ಲಂಡ ರೇಣಾ ದೇವಯ್ಯ, ಚೆರುಮಂದಂಡ ಸೋಮಣ್ಣ, ಗೌರವಾನ್ವಿತ ನಿರ್ದೇಶಕರಾದ ಮಂಡೇಪಂಡ ರತನ್ ಕುಟ್ಟಯ್ಯ, ಕೊಂಗಂಡ ದಿಲಿಪ್, ಬಾಳೆಯಡ ಕರುಣ್ ಕಾಳಪ್ಪ, ಪೊರುಕೊಂಡ ಬೋಪಣ್ಣ, ಚೇಂದಂಡ ನವೀನ್ ಇನ್ನಿತರು ಇದ್ದರು.
ತಾ 10 ರಂದು ಪ್ರಾರಂಭಗೊಂಡಿದ ಕೊಡವ ಲೆದರ್ ಬಾಲ್ ಲೀಗ್ ನಲ್ಲಿ ಕೊಡವ ಟ್ರೈಬ್, ಕೂರ್ಗ್ ಬ್ಲಾಸ್ಟರ್ಸ್, ಟೀಂ ಲೆವರೇಜ್, ಟೀಂ ಕೂರ್ಗ್ ಯುನೈಟೆಡ್, ಪ್ರಗತಿ ಕ್ರಿಕೆಟ್ ಅಕಾಡೆಮಿ, ಎಂಟಿಬಿ ರಾಯಲ್ಸ್, ಟೀಮ್ ಅಂಜಿಗೇರಿ ನಾಡ್, ಕೊಡವ ರೈಸಿಂಗ್ ಸ್ಟಾರ್, ಕೂರ್ಗ್ ಟೈಟಾನ್ಸ್, ಬ್ಲೇಜ್ ಬ್ರಿಗೇಡ್ ತಂಡಗಳು ಭಾಗವಹಿಸಿದ್ದವು.