ಆದಿವಾಸಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವತಿಯಿಂದ ಡಿಸೆಂಬರ್ ಅಂತ್ಯದೊಳಗೆ ಜಿಲ್ಲೆಯ ಶಾಸಕರ ಮನೆ ಕಡೆ ಕಾರ್ಯಕ್ರಮ
ಮಡಿಕೇರಿ: ಜಿಲ್ಲೆಯ ಆದಿವಾಸಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಿಸೆಂಬರ್ ಅಂತ್ಯದೊಳಗೆ ಆದಿವಾಸಿ ದಲಿತರ ನಡೆ ಜಿಲ್ಲೆಯ ಶಾಸಕರ ಮನೆ ಕಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಆದಿವಾಸಿ ಕೃಷಿ ಕಾರ್ಮಿಕರ ಸಂಘ ಮತ್ತು ಕರ್ನಾಟಕ ರೈತ ಸಂಘ ಪ್ರಮುಖರು ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ಮಾತನಾಡಿ, ಉಳ್ಳವರ ಲೈನ್ ಮನೆಗಳಲ್ಲಿ ಸ್ವತಂತ್ರ ಕಳೆದುಕೊಂಡು ಬದುಕುವ ೫೦೦೦ ಕುಟುಂಬ ಕೊಡಗಿನಲ್ಲಿದ್ದಾರೆ ಎಂದು ಸರ್ಕಾರ ಹೇಳುತ್ತದೆ. ಇಂದಿಗೂ ಸಾವಿರಾರು ಕುಟುಂಬ ಆದಿವಾಸಿಗಳು ಅರಣ್ಯದ ಮಧ್ಯೆ ಮತ್ತು ಇತರೆಡೆಗಳಲ್ಲಿ ಪ್ಲಾಸ್ಟಿಕ್ ಶೆಡ್ಗಳಲ್ಲಿ ಗಾಳಿ ಮಳೆಯಲ್ಲಿ ಆನೆ, ಹುಲಿಗಳ ಪ್ರಾಣ ಭಯದಿಂದ ಜೀವಿಸುತ್ತಿದ್ದಾರೆ.
ಅಲ್ಲದೇ ಮಕ್ಕಳಿಗೆ ಸರಿಯಾದ ಆರೋಗ್ಯ ವಿದ್ಯಾಭ್ಯಾಸ ಸಿಗುತ್ತಿಲ್ಲ. ಆದಿವಾಸಿಗಳಿಗೆ ಇರುವ ಗಿರಿಜನ ಅಭಿವೃದ್ಧಿ ಇಲಾಖೆಗೆ ನೂರಾರು ಕೋಟಿ ಅನುದಾನ ಬರುತ್ತಿದ್ದರು? ಕೇವಲ ಕಛೇರಿಗಳು ದೊಡ್ಡ ಕಟ್ಟಡಗಳನ್ನು ಕಟ್ಟಿ ಕಮಿಷನ್ ಹೊಡೆಯುವುದರಲ್ಲಿ ಅಧಿಕಾರಿಗಳು ಮುಳುಗಿದ್ದಾರೆ ಎಂದು ದೂರಿದರು. ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅವಿದ್ಯಾವಂತರಾಗಿರುವುದರಿಂದ ಪೂರಕ ದಾಖಲೆಗಳಿಂದ ವಂಚಿತರಾಗಿದ್ದಾರೆ. ಆಧಾರ್, ರೇಷನ್, ಇತರೆ ದಾಖಲೆಗಳು ಇಲ್ಲದೆ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇದ್ದ ದಾಖಲೆಗಳನ್ನು ಲೈನ್ ಮನೆ ಮೂಲಕ ಇಟ್ಟುಕೊಂಡು ವಂಚಿಸಿದ್ದಾರೆ. ದಾಖಲೆಗಳ ಕೊರತೆಯಿಂದ ಆದಿವಾಸಿಗಳು ಸರ್ಕಾರದಿಂದ ಸಾಲ ಸೌಲಭ್ಯ ಮುಂತಾದವುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.
ಶಾಸಕರುಗಳು ಇಲ್ಲಿನ ಉಳ್ಳವರು, ಅಕ್ರಮಿಸಿಕೊಂಡಿರುವ ಸರ್ಕಾರಿ ಭೂಮಿಯನ್ನು ತೆರವುಗೊಳಿಸಲು ಇಚ್ಚಾಶಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದರು. ಅದಿವಾಸಿಗಳು, ಹಿಂದುಳಿದ ಸಮುದಾಯದವರು ಕೂಡ ಮನುಷ್ಯರು? ನಿಮಗೆ ಮತ ಹಾಕಿದವರು? ನಮಗೆ ಶಾಶ್ವತ ಸೂರು, ಭೂಮಿ, ಅರೋಗ್ಯ ಭದ್ರತೆ ಉಚಿತ ವಿದ್ಯೆ ನೀಡಿ ಎಲ್ಲರಂತೆ ಬದುಕಲು ನಮ್ಮ ಹಕ್ಕುಗಳನ್ನು ಕೊಡುವುದು ಯಾವಾಗ? ಎಂದು ಕೇಳಲು ನಮ್ಮ ಸಂಘ ಶಾಸಕರ ಮನೆಗೆ ನಮ್ಮ ನಡಿಗೆ ಎಂಬ ಘೋಷಣೆಯೊಂದಿಗೆ ಅದಿವಾಸಿ ದಲಿತರ ಕೃಷಿ ಕಾರ್ಮಿಕರ ಮೂಲಭೂತ ಸಮಸ್ಯೆಗಳನ್ನು ತೆಗೆದುಕೊಂಡು ಎರಡು ಜನ ಶಾಸಕರ ಮನೆಗೆ ಇದೇ ಡಿಸೆಂಬರ್ ಅಂತ್ಯದೊಳಗೆ ಶಾಸಕರು ಇರುವ ದಿನ ಶಾಸಕರ ಮನೆಗೆ ಹೋಗುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
ಒಂದು ವೇಳೆ ಶಾಸಕರುಗಳು ನಮ್ಮ ಸಮಸ್ಯೆ ಬೇಡಿಕೆಗಳಿಗೆ ನ್ಯಾಯ ನೀಡದಿದ್ದರೆ ಮುಂದಿನ ಹೋರಾಟವನ್ನು ಚುನಾವಣೆಯನ್ನು ಬಹಿಷ್ಕಾರ ಮಾಡಲು ಮುಂದಾಗಲಾಗುವುದು ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಜೆ.ಪ್ರಕಾಶ್, ದಲಿತ ಆದಿವಾಸಿ ಕೃಷಿ ಕಾರ್ಮಿಕರ ಸಂಘದ ವಿರಾಜಪೇಟೆ ತಾಲೂಕು ಅಧ್ಯಕ್ಷ ಅಣ್ಣಪ್ಪ, ಪ್ರಮುಖರಾದ ರವಿ, ಮುತ್ತಣ್ಣ, ವೈ.ಎಂ.ಸುರೇಶ್ ಇದ್ದರು.