ಬಲ್ಲಮಾವಟಿಯಲ್ಲಿ ಅದ್ಧೂರಿಯಾಗಿ ನಡೆದ ಹಿಂದೂ ಸಂಗಮ ಕಾರ್ಯಕ್ರಮ

ಬಲ್ಲಮಾವಟಿಯಲ್ಲಿ ಅದ್ಧೂರಿಯಾಗಿ ನಡೆದ ಹಿಂದೂ ಸಂಗಮ ಕಾರ್ಯಕ್ರಮ

ನಾಪೋಕ್ಲು: ಸಂಘ ಇರುವುದೇ ಹಿಂದೂ ಸಮಾಜಕ್ಕೋಸ್ಕರ ಎಂದು ದಕ್ಷಿಣ ಪ್ರಾಂತ ವಿಶ್ವ ಹಿಂದೂ ಪರಿಷತ್ತಿನ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದರು.

ನಾಪೋಕ್ಲು ಸಮೀಪದ ಬಲ್ಲಮಾವಟಿ ಗ್ರಾಮದಲ್ಲಿ ಶನಿವಾರ ಆಯೋಜಿಸಲಾಗಿದ್ದ ಹಿಂದೂಸಂಗಮ ಆಯೋಜನಾ ಸಮಿತಿವತಿಯಿಂದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು,

ಸಂಘವು ರಾಜ್ಯದಾದ್ಯಂತ ಹಳ್ಳಿ ಹಳ್ಳಿಗಳಲ್ಲಿ, ಗ್ರಾಮ ಗ್ರಾಮಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಎಲ್ಲೂ ಸಂಘರ್ಷ ನಡೆದಿಲ್ಲ. ಎಲ್ಲೂ ಗೊಂದಲ ಆಗಿಲ್ಲ.ನಾಪೋಕ್ಲುವಿನಲ್ಲಿ ನಾಪೋಕ್ಲು ನಮ್ಮದು ಎಂದು ಹೇಳಿದ್ದು ಮಾತ್ರವಲ್ಲದೆ ಹಿಂದೂ ವ್ಯಕ್ತಿಯ ಮೇಲೆ ಹಲ್ಲೆ ನಡೆದಿದೆ.ನಾಪೋಕ್ಲುಕಾವೇರಿ ತಾಯಿಯ ನಾಡು. ಕೊಡಗು ಪುಣ್ಯಭೂಮಿಯ ನಾಡು ಎಂದರು.

ರಾಷ್ಟ್ರ ಸೇವಿಕ ಸಮಿತಿಯ ಮಂಗಳೂರಿನ ಜಿಲ್ಲಾ ಸೇವಾ ಪ್ರಮುಖ್ ಶ್ರೀದೇವಿ ಮಾತನಾಡಿ ಎಲ್ಲಿ ಸ್ತ್ರೀ ಪೂಜಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎನ್ನುವ ಉದಾತ್ತ ಚಿಂತನೆ ನೀಡಿದ ದೇಶ ನಮ್ಮದು. ಸ್ತ್ರೀಯನ್ನು ಅತ್ಯಂತ ಗೌರವದಿಂದ ಕಾಣುವ ಸಂಸ್ಕೃತಿ ಹಿಂದೂ ಸಂಸ್ಕೃತಿ ಎಂದರು.

ಅಪ್ಪಚೆಟ್ಟೋಳಂಡ ವನುವಸಂತ ಹಿಂದೂ ಧರ್ಮದಲ್ಲಿ ಮಹಿಳೆಯ ಪಾತ್ರ ಎಂಬ ವಿಷಯದ ಕುರಿತು ಮಾತನಾಡಿದರು. ನಿವೃತ್ತ ಅಬಕಾರಿ ಕಮಿಷನರ್ ಮೂವೆರ ಸಚಿನ್ ಕುಟ್ಟಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದೀಪ ಬೆಳಗಿಸುವುದರ ಮೂಲಕ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಾಯಿತು.

ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಕೊಡಗು ಸಂಘ ಚಾಲಕ ಚಕ್ಕೇರ ಮನುಸೋಮಯ್ಯ, ನಿವೃತ್ತ ನೌಕಾಪಡೆ ಅಧಿಕಾರಿ ಪೆಬ್ಬೆಟ್ಟಿರ ಎಂ. ಕುಶಾಲಪ್ಪ ,ಮಾಜಿ ಮಂಡಲ ಪಂಚಾಯಿತಿ ಅಧ್ಯಕ್ಷ ಮೂವೆರ ನಾಣಪ್ಪ, ನಿವೃತ್ತ ಸೇನಾಧಿಕೇರಿ ಎಡಿಕೇರಿ ಮಣಿ ಮಂದಣ್ಣ ಉಪಸ್ಥಿತರಿದ್ದರು. ಬಿಜೆಪಿ ಮುಖಂಡ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಸ್ವಾಗತಿಸಿದರು. ಇದಕ್ಕೂ ಮುನ್ನ ಕೇರಳದ ಚಂಡೆ ವಾದ್ಯ ,ಭಾರತ ಮಾತೆಯ ಸ್ಥಬ್ಧ ಚಿತ್ರದೊಂದಿಗೆ ಅದ್ದೂರಿ ಮೆರವಣಿಗೆ ನಡೆಯಿತು. ಸಮಾವೇಶದಲ್ಲಿ ಹಲವಾರು ಹಿಂದೂ ಕಾರ್ಯಕರ್ತರು ಪಾಲ್ಗೊಂಡಿದ್ದರು.