ಸೋಮವಾರಪೇಟೆ ತಾಲೂಕು ಕಚೇರಿಯಿಂದ ವ್ಯಕ್ತಿಯೊಬ್ಬರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿರುವ ಆರೋಪ; ಅಧಿಕಾರಿಗಳನ್ನು ಅಮಾನತುಗೊಳಿಸಲು ದಲಿತ ಸಂಘರ್ಷ ಸಮಿತಿ ಒತ್ತಾಯ
ಮಡಿಕೇರಿ: ಸೋಮವಾರಪೇಟೆ ತಾಲೂಕು ಕಚೇರಿಯಿಂದ ವ್ಯಕ್ತಿಯೊಬ್ಬರು ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ದಲಿತ ಕುಟುಂಬವನ್ನು ವಂಚಿಸಲು ಸಂಚು ಮಾಡಿದ್ದು, ಇದಕ್ಕೆ ಸಹಕರಿಸಿದ ಅಧಿಕಾರಿಗಳು ವಿಚಾರಣೆ ನಡೆಸಿ ಅಮಾನತು ಮಾಡಬೇಕೆಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎನ್.ಆರ್.ದೇವರಾಜು ಒತ್ತಾಯಿಸಿದ್ದಾರೆ.
ಪ್ರಭಾವಿ ವ್ಯಕ್ತಿ ಕೆಲವು ಭೂಮಿಯನ್ನು ಪೌತಿಖಾತೆ ಮಾಡಿಕೊಳ್ಳಲು ಮೃತರಾಗಿರುವ ಕುಟುಂಬದ ಹಿರಿಯ ಸದಸ್ಯರ ಮರಣ ದೃಢಿಕರಣ ಪತ್ರವನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆದುಕೊಂಡಿದ್ದಾರೆ. ಸೋಮವಾರಪೇಟೆ ತಾಲೂಕು ಕಚೇರಿಯ ಜನನ ಮರಣ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ, ಕೊಡ್ಲಿಪೇಟೆ ನಾಡಕಚೇರಿಯ ಕಂದಾಯ ಪರಿವೀಕ್ಷಕ, ಗ್ರಾಮ ಆಡಳಿತಾಧಿಕಾರಿ ಸುಳ್ಳು ದಾಖಲೆಗಳನ್ನು ಸೃಷ್ಠಿಸಲು ಪ್ರಭಾವಿ ವ್ಯಕ್ತಿಗೆ ಸಹಕಾರ ನೀಡಿದ್ದಾರೆ.
ಆದ್ದರಿಂದ ಇಂತಹ ವ್ಯಕ್ತಿಗಳ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಎನ್.ಸಿ.ಗೋವಿಂದರಾಜು, ಕೆಂಚೇಶ್ವರ, ಎಂ.ಕಾಳಪ್ಪ, ಪ್ರಮುಖರಾದ ಡಿ.ಬಿ.ಕೇಶವ, ಸೋಮಣ್ಣ ಇದ್ದರು.