ಸಿಗರೇಟ್ ಹಚ್ಚಲು ಲೈಟರ್ ಕೊಡಲು ನಿರಾಕರಿಸಿದ್ದಕ್ಕೆ ಯುವಕನ ಕೊಲೆ: ಮತ್ತೊಬ್ಬನ ಸ್ಥಿತಿ ಗಂಭೀರ!

ಸಿಗರೇಟ್ ಹಚ್ಚಲು ಲೈಟರ್ ಕೊಡಲು ನಿರಾಕರಿಸಿದ್ದಕ್ಕೆ ಯುವಕನ ಕೊಲೆ: ಮತ್ತೊಬ್ಬನ ಸ್ಥಿತಿ ಗಂಭೀರ!
ಸಾಂದರ್ಭಿಕ ಚಿತ್ರ

ನಾಗ್ಪುರ: ಸಿಗರೇಟ್ ಹಚ್ಚಲು ಲೈಟರ್ ಹಂಚಿಕೊಳ್ಳಲು ನಿರಾಕರಿಸಿದ ಕಾರಣಕ್ಕೆ ಯುವಕರ ಗುಂಪೊಂದು ವ್ಯಕ್ತಿಯನ್ನು ಕೊಲೆ ಮಾಡಿದ ಘಟನೆ ನಾಗ್ಪುರದ ಖಾಪರ್ಖೇಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಭಾನುವಾರ ಸಂಜೆ ಬಿನಾ ಸಂಗಮ್ ಬಳಿ ನಡೆದ ಈ ಘಟನೆ ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ.

ಮೃತರನ್ನು ಸುಶೀಲ್‌ಕುಮಾರ್ ಗೆಡಮ್ (33) ಎಂದು ಗುರುತಿಸಲಾಗಿದ್ದು, ಅವರ ಸ್ನೇಹಿತ ಆಶಿಶ್ ಗೊಂಡಾನೆ (33) ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರೂ ಈಜು ಮುಗಿಸಿ ಹಿಂತಿರುಗುತ್ತಿರುವ ವೇಳೆ ನಾಲ್ವರು–ಐವರು ಅಪರಿಚಿತರು ಅವರನ್ನು ತಡೆದು ಲೈಟರ್ ಕೇಳಿದರೆಂದು ಪೊಲೀಸರು ತಿಳಿಸಿದ್ದಾರೆ.

ಲೈಟರ್ ನೀಡಲು ಎರಡೂ ಜನ ನಿರಾಕರಿಸಿದ ಹಿನ್ನೆಲೆಯಲ್ಲಿ ಮಾತಿನಚಕಮಕಿ ಜಗಳಕ್ಕೆ ತಿರುಗಿ, ನಂತರ ಗುಂಪಿನವರು ಕಲ್ಲು ಮತ್ತು ಚಾಕುಗಳಿಂದ ಇಬ್ಬರ ಮೇಲೂ ದಾಳಿ ನಡೆಸಿ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದಾಳಿಯಲ್ಲಿ ಗೆಡಮ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಆಶಿಶ್ ಗೊಂಡಾನೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿರುವ ಪೊಲೀಸರು, ಆರೋಪಿಗಳಿಗಾಗಿ ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ.