ಅಮೆರಿಕ ಪ್ರಜೆ ಮೇಲಿನ ದೌರ್ಜನ್ಯ ಪ್ರಕರಣ: ಕುಟ್ಟ ಹೋಂಸ್ಟೇ ನೋಂದಣಿ ರದ್ದು, ಮಾಲೀಕರ ಅರ್ಜಿ ವಿಚಾರಣೆ
ಕೋವರ್ ಕೊಲ್ಲಿ ಇಂದ್ರೇಶ್
ಬೆಂಗಳೂರು: ರಾಜ್ಯದಲ್ಲಿ ಹೋಂಸ್ಟೇಗಳ ಸ್ಥಾಪನೆ, ನಿರ್ವಹಣೆ ಹಾಗೂ ಮೇಲ್ವಿಚಾರಣೆಯನ್ನು ನಿಯಂತ್ರಿಸಲು ಸಮಗ್ರ ನೀತಿ ಮತ್ತು ಶಾಸನಬದ್ಧ ಚೌಕಟ್ಟನ್ನು ರೂಪಿಸುವ ಕುರಿತು ಇತರ ಸಂಬಂಧಿತ ಇಲಾಖೆಗಳೊಂದಿಗೆ ಸಮಾಲೋಚಿಸಿ ಸೂಕ್ತ ನಿಯಮಾವಳಿ ರೂಪಿಸುವಂತೆ ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದ ಹೋಂಸ್ಟೇಯೊಂದರ ನೋಂದಣಿ ರದ್ದುಪಡಿಸಿದ್ದ ಜಿಲ್ಲಾಡಳಿತದ ಕ್ರಮವನ್ನು ಪ್ರಶ್ನಿಸಿ ಅದರ ಮಾಲೀಕ ಪಿ.ಎ. ಪೊನ್ನಪ್ಪ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠವು ಈ ಆದೇಶ ಹೊರಡಿಸಿದೆ. ಜಿಲ್ಲಾಧಿಕಾರಿಗಳು ರದ್ದು ಪಡಿಸಿದ್ದ ಆದೇಶವನ್ನು ತಾನು ಕಾರಣ ಕೇಳುವ ನೋಟೀಸ್ (show cause notice) ಆಗಿ ಪರಿಗಣಿಸುವದಾಗಿ ತಿಳಿಸಿದ ಪೀಠ ಇದಕ್ಕೆ ಉತ್ತರವನ್ನು ಜೂನ್ 24 ರೊಳಗೆ ನೀಡುವಂತೆ ಆದೇಶಿಸಿ ವಿಚಾರಣೆಯನ್ನು ಮುಂದೂಡಿದೆ.
ಹೋಂಸ್ಟೇ ಕ್ಷೇತ್ರದ ಹೆಚ್ಚುತ್ತಿರುವ ಪ್ರಾಮುಖ್ಯತೆ ಮತ್ತು ಅವುಗಳ ವಿರುದ್ಧದ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮಾಲೋಚಿಸಿ, ರಾಜ್ಯದಲ್ಲಿ ಹೋಂಸ್ಟೇಗಳ ಸ್ಥಾಪನೆ, ಕಾರ್ಯಾಚರಣೆ ಮತ್ತು ಮೇಲ್ವಿಚಾರಣೆಯನ್ನು ನಿಯಂತ್ರಿಸುವ ಸಮಗ್ರ ನೀತಿ ಮತ್ತು ನಿಯಂತ್ರಣಕ್ಕೆ ನಿಯಮಗಳನ್ನು ರೂಪಿಸಬೇಕು ಎಂದು ಪೀಠ ಹೇಳಿದೆ.
ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ (ಸೌಲಭ್ಯ ಮತ್ತು ನಿಯಂತ್ರಣ) ಕಾಯ್ದೆ, 2015 ಹೋಂಸ್ಟೇಗಳು, ಪ್ರವಾಸೋದ್ಯಮ ವ್ಯಾಪಾರ ಸಂಸ್ಥೆಗಳ ನೋಂದಣಿ ಮತ್ತು ನಿಯಂತ್ರಣವನ್ನು ಒದಗಿಸುತ್ತದೆ. ಆದರೆ, ಹೋಂಸ್ಟೇ ಕಾರ್ಯಾಚರಣೆಯು ಹಲವಾರು ಶಾಸನಬದ್ಧ ಮತ್ತು ನಿಯಂತ್ರಕ ಕ್ಷೇತ್ರಗಳನ್ನು ಒಳಗೊಂಡ ಹಲವಾರು ಅಂಶಗಳನ್ನು ಒಳಗೊಂಡಿರುತ್ತದೆ. ಈ ಕಾಯ್ದೆಯಡಿಯಲ್ಲಿ ನೋಂದಣಿ ಮೂಲಕ ಮಾತ್ರ ಪರಿಣಾಮಕಾರಿಯಾಗಿ ಪರಿಹರಿಸಲಾಗುವುದಿಲ್ಲ. ಆದ್ದರಿಂದ ಹೋಂಸ್ಟೇ ಕೇವಲ ವಾಣಿಜ್ಯ ಸಂಸ್ಥೆಯಲ್ಲ, ಬದಲಾಗಿ ಸಾರ್ವಜನಿಕರು , ಮಹಿಳೆಯರು ಉಳಿದುಕೊಳ್ಳುವ ಸ್ಥಳವಾಗಿದೆ. ದೀರ್ಘಾವಧಿಯವರೆಗೆ ಮತ್ತು ಆಹಾರ, ವಸತಿ ಮತ್ತು ಸಂಬಂಧಿತ ಸೇವೆಗಳನ್ನು ಒದಗಿಸುವ ಸ್ಥಳವಾಗಿದೆ. ಪರಿಣಾಮವಾಗಿ, ಸಾರ್ವಜನಿಕ ಸುರಕ್ಷತೆ, ಆರೋಗ್ಯ, ನೈರ್ಮಲ್ಯ, ಭದ್ರತೆ, ಗ್ರಾಹಕ ರಕ್ಷಣೆ ಮಹತ್ವದ್ದಾಗಿದೆ ಎಂದು ಪೀಠ ತಿಳಿಸಿದೆ.
ಕೋರ್ಟ್ ಹೋಂ ಸ್ಟೇ ಗಳಿಗೆ ಪ್ರಮುಖ ಸೂಚನೆಗಳು:
ಹೋಂಸ್ಟೇಗಳು ಸಾಮಾನ್ಯವಾಗಿ ಖಾಸಗೀ ಜನವಸತಿ ಕಟ್ಟಡಗಳಲ್ಲೇ ಇರುವುದರಿಂದ ಅಗತ್ಯ ಸುರಕ್ಷತಾ ಮಾನದಂಡಗಳು ಇರುವುದಿಲ್ಲ. ಆದ್ದರಿಂದ ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಅಗ್ನಿ ನಿಯಂತ್ರಕ, ಅಗ್ನಿ ದುರಂತ ಸಂದರ್ಭ ನಿವಾಸಿಗಳು ಪಾರಾಗುವ ಮಾರ್ಗ ಹೊಂದಿರಬೇಕು. ಇವುಗಳನ್ನು ಕಾಲಾನುಕ್ರಮವಾಗಿ ಪರಿಶೀಲಿಸಬೇಕು.
ಪ್ರವಾಸಿಗರ ಆರೋಗ್ಯದ ದೃಷ್ಟಿಯಿಂದ ಅಡುಗೆಮನೆಯ ನೈರ್ಮಲ್ಯ ಮತ್ತು ಆಹಾರ ಸುರಕ್ಷತೆಯ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಹೋಂಸ್ಟೇಗಳು ಹೆಚ್ಚಾಗಿ ವಸತಿ, ಅರೆ-ನಗರ, ಗ್ರಾಮೀಣ, ಕರಾವಳಿ, ಪರಿಸರ-ಸೂಕ್ಷ್ಮ ಅಥವಾ ಬೆಟ್ಟದ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ಇಲ್ಲಿಗೆ ಆಗಮಿಸುವ ಪ್ರವಾಸಿಗರ ಕಟ್ಟಡ ನಿಯಮಾವಳಿಗಳು ಹಾಗೂ ವಸತಿ ವಲಯ ನಿಯಮಗಳ ಪ್ರಕಾರ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಸಾರ್ವಜನಿಕ ಸುರಕ್ಷತೆ, ಅಪರಾಧ ಚಟುವಟಿಕೆಗಳು, ಕಳ್ಳಸಾಗಣೆ, ಸೈಬರ್ ಅಪರಾಧಗಳನ್ನು ನಿಯಂತ್ರಿಸುವುದು ಮತ್ತು ತನಿಖಾ ಸಂಸ್ಥೆಗಳೊಂದಿಗೆ ಹೋಂಸ್ಟೇ ಮಾಲೀಕರು ಸಹಕರಿಸಬೇಕು. ಜೊತೆಗೆ, ಎಲ್ಲ ಅತಿಥಿಗಳ ಗುರುತಿನ ಚೀಟಿಗಳ ಪರಿಶೀಲನೆ ಮಾಡಬೇಕು.
ಪಾರದರ್ಶಕತೆ ಮತ್ತು ಗ್ರಾಹಕ ರಕ್ಷಣೆಯ ಅವಶ್ಯಕತೆಯಿದ್ದು, ಬೆಲೆ ನಿಗದಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು.ನೈರ್ಮಲ್ಯ ಕಾಪಾಡುವುದು, ಸ್ವಚ್ಛತೆ, ಶುದ್ಧ ಕುಡಿಯುವ ನೀರು, ತ್ಯಾಜ್ಯ ವಿಲೇವಾರಿ, ಒಳಚರಂಡಿ ನಿರ್ವಹಣೆ ಮತ್ತು ಪರಿಸರ ಸುಸ್ಥಿರತೆಗೆ ಸಂಬಂಧಿಸಿದ ಕನಿಷ್ಠ ಮಾನದಂಡಗಳನ್ನು ರಚನೆ ಮಾಡಬೇಕು. ಹೋಂಸ್ಟೇಗಳ ನಿಯಂತ್ರಣದಲ್ಲಿ ತೊಡಗಿರುವ ವಿವಿಧ ಇಲಾಖೆಗಳ ಅಧಿಕಾರಿಗಳ ಜವಾಬ್ದಾರಿಗಳನ್ನು ಸ್ಪಷ್ಟವಾಗಿ ವಿವರಿಸಿ, ವಿಭಜನೆ ಮಾಡಬೇಕಾಗಿದೆ.
ಇಷ್ಟಾನುಸಾರ ತಪಾಸಣೆ ನಡೆಸದಂತೆ ವ್ಯವಸ್ಥಿತ ಮತ್ತು ಪಾರದರ್ಶಕ ತಪಾಸಣಾ ಕಾರ್ಯವಿಧಾನ ಅಳವಡಿಸಬೇಕು. ಸಣ್ಣ ಮತ್ತು ದೊಡ್ಡ ವಾಣಿಜ್ಯ ಹೋಂಸ್ಟೇಗಳ ನಡುವಿನ ವರ್ಗೀಕರಣವನ್ನು ಕಡ್ಡಾಯವಾಗಿ ಮಾಡಬೇಕು ಎಂದು ಪೀಠ ಹೇಳಿದೆ.
ಸಣ್ಣ ಉದ್ದಿಮೆದಾರರಿಗೆ ಹೊರೆಯಾಗದಂತಿರಲಿ
ಸಣ್ಣ ಕುಟುಂಬ-ಚಾಲಿತ ಹೋಂಸ್ಟೇಗಳು ಮತ್ತು ವಾಣಿಜ್ಯ ಉದ್ದೇಶದ ದೊಡ್ಡ ರೆಸಾರ್ಟ್ ಮಾದರಿಯ ಹೋಂಸ್ಟೇಗಳ ನಡುವೆ ಸ್ಪಷ್ಟ ವಿಂಗಡಣೆ ಮಾಡಬೇಕು. ನಿಯಮಗಳು ಸಣ್ಣ ಮಾಲೀಕರಿಗೆ ಹೊರೆಯಾಗಬಾರದು. ಆದರೆ ದೊಡ್ಡ ಸಂಸ್ಥೆಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇರಬೇಕು ಎಂದು ಪೀಠ ಹೇಳಿದೆ. ಪ್ರಸ್ತುತ ಇಲಾಖೆಗಳ ಸಮನ್ವಯದ ಕೊರತೆಯಿಂದಾಗಿ ಮಾಲೀಕರು ಯಾವ ಇಲಾಖೆಯಿಂದ ಅನುಮತಿ ಪಡೆಯಬೇಕೆಂಬ ಗೊಂದಲದಲ್ಲಿದ್ದಾರೆ. ಹೀಗಾಗಿ ಏಕರೂಪದ ನಿಯಂತ್ರಣ ಚೌಕಟ್ಟು ಆಡಳಿತಾತ್ಮಕ ದಕ್ಷತೆಯನ್ನು ಹೆಚ್ಚಿಸಲಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಈ ಪ್ರಕರಣಲ್ಲಿ ಹೋಂಸ್ಟೇ ಪರವಾನಿಗೆ ರದ್ದುಗೊಳಿಸುವುದಕ್ಕೂ ಮುನ್ನ ಅರ್ಜಿದಾರರಿಗೆ ಯಾವುದೇ ನೋಟಿಸ್ ನೀಡಿಲ್ಲ. 'ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ (ಸುಗಮಗೊಳಿಸುವಿಕೆ ಮತ್ತು ನಿಯಂತ್ರಣ) ಕಾಯ್ದೆ-2015'ರ ನಿಬಂಧನೆಗಳನ್ನು ಪಾಲಿಸದೆ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ಹೀಗಾಗಿ, ಪರವಾನಿಗೆ ರದ್ದು ಮಾಡಿರುವ ಆದೇಶವನ್ನು ಶೋಕಾಸ್ ನೋಟಿಸ್ ಆಗಿ ಪರಿವರ್ತಿಸಿ ಆದೇಶಿಸಿದ್ದು, ಅದಕ್ಕೆ ಉತ್ತರಿಸಲು ಮಾಲೀಕರಿಗೆ ಕೋರ್ಟ್ ಅವಕಾಶ ನೀಡಿದೆ.
ಕಳೆದ ಎಪ್ರಿಲ್ 12 ರಂದು ಕುಟ್ಟ್ಟ ದ ಹೋಂಸ್ಟೇಯೊಂದರಲ್ಲಿ 33 ವರ್ಷದ ಅಮೆರಿಕ ಪ್ರಜೆಯೊಬ್ಬರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ನಡೆದಿತ್ತು. ಈ ಪ್ರಕರಣ ಸಂಬಂಧ ಜಿಲ್ಲಾಡಳಿತ ಈ ಹೋಂಸ್ಟೇಯ ನೋಂದಣಿಯನ್ನು ರದ್ದುಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಹೋಂಸ್ಟೇ ಮಾಲೀಕರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.

