ಜಿಲ್ಲೆಯಲ್ಲಿ ಶಾಂತಿ ಕದಡಲು ಪ್ರಯತ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು; ಜಿಲ್ಲಾ ಬಿಜೆಪಿ ಒತ್ತಾಯ
ಮಡಿಕೇರಿ: ಜಿಲ್ಲೆಯಲ್ಲಿ ಶಾಂತಿ ಕದಡುವ ಪ್ರಯತ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಬಿಜೆಪಿ ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ,
ನಾಪೋಕ್ಲುವಿನ ಬಲ್ಲಮಾವಟಿಯಲ್ಲಿ ಹಿಂದು ಸಮಾವೇಶ ತಯಾರಿ ನಡೆಸುತ್ತಿದ್ದ ಸಂದರ್ಭ ಹಿಂದೂ ಕಾರ್ಯಕರ್ತ ಅಪ್ಪಚಿರ ಗೌತಮ್ ಎಂಬುವರರ ಮೇಲೆ ಕೆಲವು ಮುಸ್ಲಿಂ ಯುವಕರು ಮಾರಣಾಂತಿಕ ಹಲ್ಲೆ ನಡೆಸುವ ಮೂಲಕ ಹಿಂದು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ ಶಾಂತಿ ಕದಡುವ ಪ್ರಯತ್ನ ನಡೆಸಿ, ನಂತರ ಜೈಲು ಸೇರಿದ್ದರು. ಆದರೆ, ಇಂದು ಜೈಲಿನಿಂದ ಷರತ್ತುಬದ್ದ ಬೇಲ್ನಲ್ಲಿ ಹೊರಗೆ ಬಂದಿರುವ ಅವರು, ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಮತ್ತೆ ಕೋಮು ಪ್ರಚೋದನೆ ಸಂದೇಶವನ್ನು ಪೋಸ್ಟ್ ಮಾಡಿದ್ದು ಇವರಿಗೆ ಕಾನೂನು ಹಾಗೂ ಸರ್ಕಾರದ ಪೋಲಿಸ್ ವ್ಯವಸ್ಥೆಯ ಬಗ್ಗೆ ಭಯ ಗೌರವ ಯಾವುದು ಇರುವುದಿಲ್ಲ. ಇದು ಇಲ್ಲಿನ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿರುತ್ತದೆ.
ಇಂತಹ ಸಮಾಜ ಘಾತುಕ ಶಕ್ತಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಅಥವಾ ಜಾಮೀನು ನಿರಾಕರಿಸಿ ಮತ್ತೆ ಜೈಲಿಗೆ ಅಟ್ಟುವ ಕೆಲಸ ಮಾಡಬೇಕೆಂದು ಆಗ್ರಹಿಸಿದರು.
ನಾಪೋಕ್ಲು ಸರ್ಕಾರಿ ಕಾಲೇಜಿಗೆ ಸಂಬಂಧಪಟ್ಟ ಜಾಗದಲ್ಲಿ ಅನಧಿಕೃತವಾಗಿ ಅತಿಕ್ರಮಿಸಿ ಶಾದಿಮಾಹಲ್ ನಿರ್ಮಾಣಕ್ಕೆ ಮುಂದಾದ ಸಂದರ್ಭ ಭಾರತೀಯ ಜನತಾ ಪಾರ್ಟಿ ಪ್ರತಿಭಟಿಸಿದ್ದಾಗ ತಾತ್ಕಾಲಿಕವಾಗಿ ಕಾಮಗಾರಿಯನ್ನು ತಡೆಮಾಡಿ ಸರ್ವೆ ಕಾರ್ಯಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದರು.
ಈ ಅತಿಕ್ರಮಣದ ತೆರವು ಇಲ್ಲಿಯವರೆಗೆ ಆಗಿರುವುದಿಲ್ಲ. ಈ ಎಲ್ಲಾ ಕೃತ್ಯಗಳು ಯಾರ ಕುಮ್ಮಕು ಮತ್ತು ಬೆಂಬಲದಿಂದ ನಡೆಯುತ್ತಿದೆ ಎಂಬುವುದನ್ನು ಜಿಲ್ಲೆಯ ಜನತೆ ಅರಿತುಕೊಳ್ಳಬೇಕಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಅಪ್ಪಚ್ಚು ರಂಜನ್, ಮಾಜಿ ಎಂಎಲ್ಸಿ ಸುನಿಲ್ ಸುಬ್ರಮಣಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಜೈನಿ, ವಕ್ತಾರ ಅರುಣ್ ಕುಮಾರ್, ಪ್ರಮುಖರಾದ ಸಜಿಲ್ ಕೃಷ್ಣ ಉಪಸ್ಥಿತರಿದ್ದರು.