ವಿರಾಜಪೇಟೆ ಸಮೀಪದ ಕೊಟ್ಟೋಳಿಯ ಶ್ರೀ ಧಾರಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ

ವಿರಾಜಪೇಟೆ ಸಮೀಪದ ಕೊಟ್ಟೋಳಿಯ ಶ್ರೀ ಧಾರಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ

ವಿರಾಜಪೇಟೆ:ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಉದ್ಭವ ಲಿಂಗ ಶ್ರೀ ಈಶ್ವರ ದೇವರನ್ನು ಪೂಜಿಸುವ ವಿರಾಜಪೇಟೆ ಸಮೀಪದ ಕೊಟ್ಟೋಳಿಯ ಶ್ರೀ ಧಾರಾಮಹೇಶ್ವರ ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ನೆರವೇರಿದ್ದು ಇದರ ಅಂಗವಾಗಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಚಂಗಚಂಡ ಚೇತನ್ ಬೆಳ್ಯಪ್ಪ ಹೇಳಿದರು.

 ಈ ಕುರಿತು ದೇವಾಲಯದಲ್ಲಿ ನಡೆದ ಸಭೆಯಲ್ಲಿ ಮಾಹಿತಿ ನೀಡಿದ ಚೇತನ್ ಬೆಳ್ಯಪ್ಪ ಅವರು ಫೆ.7 ಶನಿವಾರ ಮತ್ತು 8 ಭಾನುವಾದಂದು ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಫೆ.14ರಿಂದ 18 ರವರೆಗೆ ಶಿವರಾತ್ರಿ ಮತ್ತು ವಾರ್ಷಿಕೋತ್ಸವ ನಡೆಯಲಿದೆ ಎಂದು ಮಾಹಿತಿ ನೀಡಿದರು. ಫೆ.7ರಂದು ಬೆಳಿಗ್ಗೆ 8.30 ರಿಂದ ಗಣಪತಿ ಹೋಮ, ಪುಣ್ಯಾಹುತಿ, ದೇವನಾಂದಿ ಸೇರಿದಂತೆ ರಾತ್ರಿಯವರೆಗೂ ವಿವಿಧ ಪೂಜೆ, ಅನ್ನ ಸಂತರ್ಪಣೆ, ಹೋಮ ಹವನ ನಡೆಯಲಿದೆ.

 8 ರಂದು ಭಾನುವಾರ ಬೆಳಿಗ್ಗೆ 8.30ರಿಂದ ಮಹಾಗಣಪತಿ ಪೂಜೆ ದೆವರಿಗೆ ಅಷ್ಟಬಂಧ ಪ್ರತಿಷ್ಠೆ, ಪ್ರಾಣ ಪ್ರತಿಷ್ಠೆ, ಮೂಲ ಮಂತ್ರ ಹೋಮ, ರುದ್ರ ಹೋಮ, ಕಲಾಶಭಿಷೇಕ, ಬ್ರಹ್ಮಕಲಶ ಸ್ಥಾಪನೆ, ಕಲಾ ಹೋಮ, ನವಗ್ರಹ ಹೋಮ, ಮಹಾ ಪೂರ್ಣಾಹುತಿ ಅಲಂಕಾರ ಸೇರಿದಂತೆ ವಿವಿಧ ಪೂಜೆಗಳು ನಡೆಯಲಿದೆ. ನಂತರ ದೇವರು ಹೊರಗೆ ಬರುವುದು, ಮಹಾಪೂಜೆ, ಮಂಗಳಾರತಿ ಸೇರಿದಂತೆ ಅನ್ನಸಂತರ್ಪಣೆ ನಡೆಯಲಿದೆ.

ಎಲ್ಲಾ ಪೂಜೆ ವಿಧಿ ವಿಧಾನಗಳನ್ನು ಮುಖ್ಯ ತಂತ್ರಿಗಳಾದ ಜನಾರ್ಧನ್ ಭಟ್ ಅವರ ನೇತೃತ್ವದಲ್ಲಿ ಹಾಗೂ ದೇವಸ್ಥಾನದ ನಿತ್ಯ ಅರ್ಚಕರಾದ ವೆಂಕಟೇಶ್ ಭಟ್ ಅವರ ಸಹಾಯದಲ್ಲಿ ನಡೆಸಲಾಗುತ್ತದೆ. ಫೆ. 14ರಂದು ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ, 12 ಗಂಟೆಗೆ ಮಹಾ ಪೂಜೆ, ಸಂಜೆ 5 ಗಂಟೆಗೆ ಭಂಡಾರ ಬರುವುದು ನಂತರ ಅಂದಿಬೊಳಕ್, ತೂಚಂಬಲಿ, ರಾತ್ರಿ ಮಹಾಪೂಜೆ ಅನ್ನದಾನ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಹೇಳಿದರು.

ಸಹ ಕಾರ್ಯದರ್ಶಿ ಜಗನ್ನಾಥ್ ಬಬ್ಬಿ ಮಾತನಾಡಿ 15ರಂದು 6 ಗಂಟೆಗೆ ಇರುಬೆಳಕು, ರುದ್ರಾಭಿಷೇಕ, 9.30ಕ್ಕೆ ಎತ್ತ್ ಪೋರಾಟ್, 12.30ಕ್ಕೆ ನೆರಪು ಉತ್ಸವ, ಮದ್ಯಾಹ್ನ 1 ಗಂಟೆಗೆ ಮಹಾಪೂಜೆ, ಅನ್ನ ಸಂತರ್ಪಣೆ, ಅಪರಾಹ್ನ 4 ಗಂಟೆಗೆ ದೇವರು ಜಳಕಕ್ಕೆ ಹೋಗುವುದು, 5 ಗಂಟೆಗೆ ಅವಭೃತ ಸ್ನಾನ, ನಂತರ 11 ಸುತ್ತು ದೇವರ ನೃತ್ಯ , ವಸಂತ ಪೂಜೆ ಬಳಿಕ ಅನ್ನದಾನ ನಡೆಯಲಿದೆ.

16ರಂದು ಹಗಲು 1 ಗಂಟೆಗೆ ಕುಟ್ಟಿಚಾತ ದೇವರು, ಅಯ್ಯಪ್ಪ ದೇವರು, ಕ್ಷೇತ್ರಪಾಲ ಮಂತ್ರವಾದಿ, ಗುಳಿಗ ದೇವರಿಗೆ ಭುಕ್ತಿ ಕೊಡುವುದು, ಮದ್ಯಾಹ್ನ 1 ಗಂಟೆಗೆ ಮಹಾಪೂಜೆ ನಂತರ ಅನ್ನ ಸಂತರ್ಪಣೆ ನಡೆಯಲಿದೆ. 17ರಂದು ಹಗಲು 10-11 ಗಂಟೆವರೆಗೆ ನಾಗನಿಗೆ ತಂಬಿಲ ಸೇವೆ, ಬ್ರಹ್ಮರಕ್ಕಸ ಭೂತಗಳಿಗೆ ಎಡೆ ಹಾಕುವುದು, ನಂತರ ಭೈರವಾದಿ ಪಂಚ ಮೂರ್ತಿಗಳ ಉತ್ಸವ, ಅನ್ನದಾನ ನಡೆಯಲಿದೆ. 18ರಂದು ಭುಧವಾರ ಶುಧ್ದಕಲಶ ನಡೆಯಲಿದೆ ಎಂದರು.

ಅರ್ಚಕರಾದ ವೆಂಕಟೇಶ್ ಭಟ್ ಮಾತನಾಡಿ ದೆವಸ್ಥಾನದಲ್ಲಿ ಪ್ರತಿನಿತ್ಯ ಪೂಜೆ, ಈಶ್ವರನಿಗೆ ರುದ್ರಾಭಿಷೇಕ ಸೇರಿದಂತೆ ಮೃತ್ಯುಂಜಯ ಪೂಜೆ ಹಾಗೂ ನವಗ್ರಹ ಪೂಜಾ ಸೇವೆಗಳನ್ನು ಇಲ್ಲಿ ನಡೆಸಲಾಗುತ್ತದೆ ಎಂದರು. ಜೈ ಭಾರತ್ ಆಟೋ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಶಿಬು ಮಾತನಾಡಿ ಬ್ರಹ್ಮಕಲಶೋತ್ಸವದಂದು ನೆರೆದ ಭಕ್ತಾಧಿಗಳಿಗೆ ಸಂಘದ ವತಿಯಿಂದ ಮಜ್ಜಿಗೆ ವಿತರಣೆ ಮಾಡಲಾಗುತ್ತದೆ ಎಂದರು.

ಈ ಸಂದರ್ಭ ಚಂಗಚಂಡ ಸಿ ಲಕ್ಷ್ಮಣ್, ಗುಂಬಿರ ಶಾಂತ ಕುಮಾರ್, ಕೋಣೇರಿರ ರಂಜಿ ಕಾವೇರಪ್ಪ, ಚಂಗಚಂಡ ವೇಣು, ಪುರುಷೋತ್ತಮ್ ಕೊಟ್ಟೋಳಿ, ಹಿರಿಯ ಸಲಹೆಗಾರರಾದ ಚಂಗಚಂಡ ಕಟ್ಟಿ ಕಾವೇರಪ್ಪ, ಜೈ ಭಾರತ್ ಆಟೋ ಚಾಲಕ ಮತ್ತು ಮಾಲೀಕರ ಸಂಘದ ಗೌರವ ಸಲಹೆಗಾರರಾದ ಪ್ರವೀಣ್ ಶೇಟ್ ಇದ್ದರು.