ಹೊದ್ದೂರು ಗ್ರಾಮ ಪಂಚಾಯಿತಿಯಲ್ಲಿ ಅರಿವು ಬೇಸಿಗೆ ಶಿಬಿರ

ಹೊದ್ದೂರು ಗ್ರಾಮ ಪಂಚಾಯಿತಿಯಲ್ಲಿ  ಅರಿವು ಬೇಸಿಗೆ ಶಿಬಿರ

ಮಡಿಕೇರಿ;ಹೊದ್ದೂರು ಗ್ರಾಮ ಪಂಚಾಯಿತಿಯಲ್ಲಿ ಗ್ರಾಮೀಣ ಮಕ್ಕಳಿಗೆ ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸುವ ಉದ್ದೇಶದಿಂದ 'ಅರಿವು' ಎಂಬ ಹೆಸರಿನಡಿ ಐದು ದಿನಗಳ ವಿಶೇಷ ಬೇಸಿಗೆ ಶಿಬಿರವನ್ನು ದಿಶಾ ಸಂಸ್ಥೆಯ ಸಹಯೋಗದೊಂದಿಗೆ ಇಂದು ಶಿಬಿರಾರ್ಥಿ ಮಕ್ಕಳಿಂದಲೇ ದೀಪ ಬೆಳಗಿಸುವುದರ ಮೂಲಕ ಪ್ರಾರಂಭಿಸಲಾಯಿತು.

 ಸಭೆಯಲ್ಲಿ ಗ್ರಾ.ಪಂ ಆಡಳಿತಾಧಿಕಾರಿಯವರಾದ ಶ್ರೀಮತಿ ಕವಿತ ಪಿ ಪಿ, ಗ್ರಾ.ಪಂ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಹೆಚ್ ಎ ಹಂಸ, ದಿಶಾ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಕುಸುಂ ಮತ್ತು ಪ್ರೀತಂ ಪೊನ್ನಪ್ಪ ಹಾಗೂ ಗ್ರಾ.ಪಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರಾದ ವತ್ಸಲಕುಮಾರಿ ಹೆಚ್ ವಿ ಉಪಸ್ಥಿತರಿದ್ದರು.

ಶಿಬಿರದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೀತಂ ಪೊನ್ನಪ್ಪರವರು ' ಸದರಿ ಶಿಬಿರದಲ್ಲಿ ಸಾಮಾಜಿಕ ಜವಾಬ್ದಾರಿ, ಆರೋಗ್ಯಯುತ ಆಹಾರ, ಭೂಮಿ ಮತ್ತು ನಾನು, ಪ್ರಕೃತಿ ಮತ್ತು ಪರಂಪರೆ, ನೈತಿಕತೆ ಮತ್ತು ಮೌಲ್ಯಗಳು ಎಂಬ ಒಟ್ಟು ಐದು ಆಶಯಗಳ ಮೇಲೆ ಐದು ದಿನಗಳ ಶಿಬಿರವಿದ್ದು, ಇಲ್ಲಿ ಮಕ್ಕಳು ಬರೆಯಲ್ಲ, ಓದಲ್ಲ ಆದರೆ ಚಟುವಟಿಕೆಗಳ ಮೂಲಕ ಅನುಭವಿಸಿ ಕಲಿಯುತ್ತಾರೆ ಹಾಗೂ ಮುಂದಿನ ದಿನಗಳಲ್ಲಿ ಇಲ್ಲಿ ಕಲಿತದನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ' ಎಂದರು. ಆಡಳಿತಾಧಿಕಾರಿಗಳು ' ಜೀವನ ಬದ್ಧತೆ, ಮೌಲ್ಯಗಳು ಹಾಗೂ ಭವಿಷ್ಯದ ಕನಸುಗಳ ಬಗ್ಗೆ ನೀತಿ ಕಥೆಗಳ ಮೂಲಕ ಶಿಬಿರಾರ್ಥಿ ಮಕ್ಕಳಿಗೆ ಕಿವಿ ಮಾತು ಹೇಳಿದರು. ನಿಕಟಪೂರ್ವ ಗ್ರಾ.ಪಂ ಅಧ್ಯಕ್ಷರಾದ ಶ್ರೀ ಹೆಚ್ ಎ ಹಂಸರವರು ಶಿಬಿರದ ಯಶಸ್ವಿಗೆ ಹಾರೈಸಿದರು.